ಚಿಕ್ಕಮಗಳೂರು : ಜಿಲ್ಲಾ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷರಾಗಿ ಸಿ.ಕೆ.ಇಬ್ರಾಹಿಂ ಆಯ್ಕೆ
ಚಿಕ್ಕಮಗಳೂರು, ಜ.10: ಬ್ಯಾರಿ ಭಾಷೆ ಸಾಹಿತ್ಯ ಹಾಗೂ ಸಂಸ್ಕೃತಿ ಉಳಿಸುವ ಸಲುವಾಗಿ 2005ರಲ್ಲಿ ಪ್ರಾರಂಭಗೊಂಡ ಒಕ್ಕೂಟ ಅನೇಕ ಜವಾಬ್ದಾರಿಯನ್ನು ಪೂರೈಸಿ ಯಶಸ್ವಿಯಾಗಿದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೆ.ಮಹಮ್ಮದ್ ತಿಳಿಸಿದರು.
ಅವರು ವಿಜಯಪುರದ ಸಹರಾ ಶಾದಿಮಹಲ್ನಲ್ಲಿ ಜಿಲ್ಲಾ ಬ್ಯಾರಿಗಳ ಒಕ್ಕೂಟದ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2007ರಲ್ಲಿ ಒಕ್ಕೂಟದ ವತಿಯಿಂದ ನಡೆದ ರಾಜ್ಯ ಮಟ್ಟದ ಬೃಹತ್ ಬ್ಯಾರಿ ಸಮ್ಮೇಳನದಲ್ಲಿ ಅಂದಿನ ಸರಕಾರ ಬ್ಯಾರಿ ಅಕಾಡೆಮಿಯನ್ನು ಘೋಷಿಸಿದ್ದು, ಇದು ತಮ್ಮ ಒಕ್ಕೂಟಕ್ಕೆ ಸಂದ ಜಯವಾಗಿದೆ. 2015ರಲ್ಲಿ ಮತ್ತೊಮ್ಮೆ ಅಕಾಡೆಮಿ ವತಿಯಿಂದ ಜಿಲ್ಲೆಯಲ್ಲಿ ಬ್ಯಾರಿ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಬ್ಯಾರಿ ಭವನಕ್ಕಾಗಿ ಈಗಾಗಲೇ 5 ಎಕರೆ ಜಾಗವನ್ನು ಗುರುತಿಸಿದ್ದು, ಮಂಜೂರಾತಿಗಾಗಿ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಭವನ ನಿರ್ಮಿಸಲು ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳಲಾಗಿದೆ. ಮಂಗಳೂರಿನಲ್ಲಿ 8 ಕೋಟಿ ರೂ.ಗಳ ಬೃಹತ್ ಬ್ಯಾರಿ ಭವನ ಹಾಗೂ ಇಲ್ಲಿ 3 ಕೋಟಿ ರೂ.ಗಳ ಭವನ ನಿರ್ಮಿಸಲು ಅನುದಾನ ನೀಡುವುದಾಗಿ ಬರವಸೆ ನೀಡಿರುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಒಕ್ಕೂಟದ ಬಲವರ್ಧನೆಗೆ ಇನ್ನಷ್ಟು ಶ್ರಮ ವಹಿಸುವ ಮೂಲಕ ಬ್ಯಾರಿ ಪಂಗಡದ ಅಭಿವೃದ್ಧಿಗೆ ಪ್ರಯತ್ನಿಸುವುದಾಗಿ ತಿಳಿಸಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ಹೆಚ್.ನೂರ್ ಮಹಮ್ಮದ್ ಮಾತನಾಡಿ, ಕಳೆದ ಬಾರಿಯ ವರದಿ ವಾಚಿಸಿದರು.
ಈ ವೇಳೆ ನೂತನ ಸಮಿತಿಯನ್ನು ರಚಿಸಲಾಯಿತು. ಜಿಲ್ಲಾಧ್ಯಕ್ಷರಾಗಿ ಸಿ.ಕೆ.ಇಬ್ರಾಹಿಂ, ಉಪಾಧ್ಯಕ್ಷರಾಗಿ ಟಿ.ಎಂ.ನಾಸೀರ್, ಹೆಚ್.ಯು.ಫಾರೂಕ್ ತರಿಕೆರೆ, ಜಮೀರ್ ಅಹಮ್ಮದ್, ಅಬ್ದುಲ್ ಕರೀಮ್ ಹಾಜಿ, ಆದಾಮ್ ಹಾಜಿ, ಬದ್ರಿಯಾ ಮಹಮ್ಮದ್, ಬಿ.ಎಸ್.ಮಹಮ್ಮದ್, ಪ್ರಧಾನ ಕಾರ್ಯದರ್ಶಿ ಸ್ಟೇಟ್ ಹೋಟೆಲ್ನ ಮಹಮ್ಮದ್ ಹನೀಫ್, ಖಜಾಂಚಿ ಕೆ.ಎಂ.ಶರಿಫ್ ಸಹಿತ 31 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.