ಧನ್ಯಶ್ರೀ ಆತ್ಮಹತ್ಯೆಗೆ ಪ್ರಚೋಧಿಸಿದವರ ಬಂಧನಕ್ಕೆ ಒತ್ತಾಯಿಸಿ ಧರಣಿ
![ಧನ್ಯಶ್ರೀ ಆತ್ಮಹತ್ಯೆಗೆ ಪ್ರಚೋಧಿಸಿದವರ ಬಂಧನಕ್ಕೆ ಒತ್ತಾಯಿಸಿ ಧರಣಿ ಧನ್ಯಶ್ರೀ ಆತ್ಮಹತ್ಯೆಗೆ ಪ್ರಚೋಧಿಸಿದವರ ಬಂಧನಕ್ಕೆ ಒತ್ತಾಯಿಸಿ ಧರಣಿ](https://www.varthabharati.in/sites/default/files/images/articles/2018/01/10/dalitarapara sangahtanegalu protest.jpg)
ಚಿಕ್ಕಮಗಳೂರು, ಜ.10: ಮೂಡಿಗೆರೆ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆಗೆ ಪ್ರಚೊಧನೆ ನೀಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನಗರದಲ್ಲಿ ದಲಿತ, ಪ್ರಗತಿಪರ ಸಂಘಟನೆಗಳ ಒಕ್ಕೂಟಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ವಿದ್ಯಾರ್ಥಿನಿಯಾದ ಧನ್ಯಶ್ರೀಯವರು ಮುಸ್ಲಿಮರನ್ನು ಪ್ರೀತಿಸುತ್ತೇನೆ ಎಂದು ಹೇಳಿಕೊಂಡ ಕಾರಣಕ್ಕೆ ಸಂತೋಷ್ ಎಂಬ ಸಂಘಪರಿವಾರದ ಕಾರ್ಯಕರ್ತ ಮೂಡಿಗೆರೆ ಬಜರಂಗದಳದವರಿಗೆ ಮಾಹಿತಿ ನೀಡಿ ಘಟನೆಗೆ ಕಾರಣವಾಗಿದ್ದಾನೆ. ನಾಲ್ಕೈದು ಮಂದಿಯ ತಂಡ ಧನ್ಯಶ್ರೀಯವರ ಮನೆಗೆ ತೆರಳಿ ವಿದ್ಯಾರ್ಥಿನಿಯ ತಂದೆ, ತಾಯಿಯವರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರಿಂದ ನೊಂದುಕೊಂಡ ವಿದ್ಯಾರ್ಥಿನಿ ಜೀವ ಕಳೆದುಕೊಂಡಿದ್ದಾಳೆ ಎಂದು ಪ್ರತಿಭಟನಾಕಾರರು ಮನವಿಯಲ್ಲಿ ತಿಳಿಸಿದ್ದಾರೆ.
ಆಕೆಯ ನಡತೆ ಬಗ್ಗೆ ಅಶ್ಲೀಲವಾಗಿ ಬರೆದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟಿದ್ದರಿಂದ ಹುಡುಗಿ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಹಿನ್ನೆಲೆಯಲ್ಲಿ ಜಾತಿವಾದಿ, ಭೀತಿವಾದಿ, ಕೋಮುವಾದಿ ಮನಸ್ತಿತಿಯ ಜನರು ವಿದ್ಯಾರ್ಥಿನಿಯರ ಹಾಗೂ ಯುವತಿಯರ ಬಳಿಗೆ ಸುಳಿಯದಂತೆ ಸರಕಾರ ಕಟ್ಟೆಚ್ಚರ ವಹಿಸಬೇಕು. ಕಾಲೇಜುಗಳಲ್ಲಿ ಅನಾಹುತ ನಡೆಯದಂತೆ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ನಿನ್ನೆ ಮಂಗಳೂರಿನಲ್ಲಿ ಅನ್ಯ ಕೋಮಿನ ಯುವಕನೊಂದಿಗೆ ಮಾತನಾಡಿದ್ದಕ್ಕೆ ಯುವತಿಯ ಮನೆಗೆ ನುಗ್ಗಿ ಅಸಬ್ಯವಾಗಿ ಕೂಗಾಡಿ ಬೆದರಿಕೆ ಹಾಕಿರುವ ಘಟನೆ ಖಂಡನೀಯ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇಂತಹ ಸೂಕ್ಷ್ಮ ವಿಷಯಗಳಲ್ಲಿ ಸರಕಾರ ಗಂಭಿರ ಕ್ರಮ ಅನುಸರಿಸುವುದು ಅಗತ್ಯವಾಗಿದೆ. ಇಲ್ಲದಿದ್ದರೆ ರಾಜಕೀಯ ಕಾರಣಕ್ಕೆ ಆರೋಪಿಗಳು ಬಚಾವಾಗುವ ಲಕ್ಷಣಗಳಿವೆ. ಆದ್ದರಿಂದ ಆರೋಪಿಗಳನ್ನು ರಕ್ಷಿಸದೇ, ಮುಲಾಜಿಲ್ಲದೆ ಬಂಧಿಸಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಜನಶಕ್ತಿ ಸಂಘದ ಗೌಸ್ ಮೊಹಿದ್ದೀನ್, ಡಿಎಸ್ಎಸ್ನ ದಂಟರಮಕ್ಕಿ ಶ್ರೀನಿವಾಸ್, ಟಿ.ಎಲ್.ಗಣೇಶ್, ಜೆಡಿಎಸ್ನ ಮೊಹಮ್ಮದ್ ಇರ್ಫಾನ್, ಐಎನ್ಸಿ ಅಧ್ಯಕ್ಷ ತಾಹೀರ್, ಹಾಂದಿ ಲಕ್ಷ್ಮಣ್, ಎಸ್ಡಿಪಿಐನ ಸೈಯ್ಯದ್ ಅಜ್ಮತ್, ಜಂಶೀದ್ ಖಾನ್ ಮತ್ತಿತರರಿದ್ದರು.