ಕಾನೂನು ಉಲ್ಲಂಘಿಸುವ ದ್ವಿಚಕ್ರ ವಾಹನ ಸವಾರರ ವಿರುದ್ಧ ವಾರದೊಳಗೆ ಕ್ರಮ: ಎಸ್ಪಿ ಲಕ್ಷ್ಮಣ್ ನಿಂಬರಗಿ

ಉಡುಪಿ, ಜ.10: ಉಡುಪಿ ನಗರ ಹಾಗೂ ಮಣಿಪಾಲದಲ್ಲಿ ಹೆಲ್ಮೆಟ್ ಧರಿಸದೆ ಅತೀವೇಗದಿಂದ ಅಪಾಯಕಾರಿಯಾಗಿ ಬೈಕ್ ಚಲಾಯಿಸುವ, ಕರ್ಕಶ ಹಾರ್ನ್ ಬಳಕೆ ಮಾಡುವ ದ್ವಿಚಕ್ರ ವಾಹನ ಸವಾರರ ವಿರುದ್ಧ ಒಂದು ವಾರ ದೊಳಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಇಂದು ನಡೆದ ಎಸ್ಪಿ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರೊಬ್ಬರ ದೂರಿಗೆ ಅವರು ಈ ರೀತಿ ಪ್ರತಿಕ್ರಿಯೆ ನೀಡಿದರು. ಉಡುಪಿ ನಗರದ ಮಿಶನ್ ಆಸ್ಪತ್ರೆ ಹಾಗೂ ಶಾಲೆಯ ಸಮೀಪ ಇರುವ ಅಂಗಡಿಯಲ್ಲಿ ಗುಟ್ಕಾ ಮಾರಾಟ ಮಾಡುವ ಬಗ್ಗೆ ಸಾರ್ವಜನಿಕರೊಬ್ಬರು ದೂರಿದರು.
ಶಿರ್ವದಲ್ಲಿ ಗಣಿಗಾರಿಕೆಯಲ್ಲಿ ಸ್ಪೋಟಕ ಬಳಸುತ್ತಿರುವ ಪರಿಣಾಮ ಮನೆಗಳು ಬಿರುಕು ಬಿಟ್ಟಿದ್ದು, ಸ್ಥಳೀಯರಿಗೆ ತೀರಾ ತೊಂದರೆಯಾಗಿದೆ ಎಂಬ ದೂರಿಗೆ ಪ್ರತಿಕ್ರಿಯಿಸಿದ ಎಸ್ಪಿ, ಈ ಕುರಿತು ಎಸಿ ಹಾಗೂ ತಹಶೀಲ್ದಾರ್ಗೆ ಪತ್ರ ಬರೆದು ಪರಿಹಾರ ನೀಡಲು ತಿಳಿಸಲಾಗುವುದು. ಸ್ಪೋಟಕ ಬಳಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಬ್ರಹ್ಮಾವರ ಪೊಲೀಸ್ ಠಾಣೆಯ ಬಾರ್ಕೂರು ಪರಿಸರದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿರುವ ಕುರಿತು ಸಹ ದೂರಿನ ಕರೆ ಬಂತು.
ಸಂಚಾರ ಸಮಸ್ಯೆ: ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಇಡೂರು ಕುಂಜ್ಞಾಡಿ ಶ್ರೀಮಹಾಲಿಂಗೇಶ್ವರ ರಸ್ತೆಯು ಅಪಾಯಕಾರಿ ತಿರುವುಗಳಿಂದ ಕೂಡಿದ್ದು, ಇಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿ ಹಲವು ಜೀವಗಳು ಬಲಿ ಯಾಗಿವೆ ಎಂಬ ದೂರಿನ ಕರೆಗೆ ಸ್ಪಂದಿಸಿದ ಎಸ್ಪಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಜೊತೆ ಸ್ಥಳ ಪರಿಶೀಲನೆ ನಡೆಸಿ ಅಪಘಾತ ಕಡಿಮೆ ಮಾಡಲು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.
ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವೆಂಕಟರಮಣ ದೇವಸ್ಥಾನ ಬಳಿ ಎರಡೂ ಕಡೆ ವಾಹನ ಪಾರ್ಕಿಂಗ್ ಮಾಡಿ ಸಂಚಾರಕ್ಕೆ ತೊಂದರೆ, ಮಾರ್ಕೆಟ್ ಬಳಿ ಸಂಚಾರ ಸಮಸ್ಯೆ, ಎಸ್ವಿಟಿ ಶಾಲೆ ಬಳಿ ರಸ್ತೆ ಹೊಂಡಗಳನ್ನು ರಿಪೇರಿ ಮಾಡದಿರುವ ಕುರಿತು ಸಹ ದೂರುಗಳು ಬಂದವು. ಈ ಸಂಬಂಧ ಕಾರ್ಕಳ ಎಎಸ್ಪಿಗೆ ಪತ್ರ ಬರೆದು ಪುರಸಭೆ ಜೊತೆ ಮಾತುಕತೆ ನಡೆಸಿ ಹೊಂಡ ಮುಚ್ಚಿ ಸಲು ಪ್ರಯತ್ನಿಸಲಾಗುವುದು. ಶಾಲೆ ಆರಂಭ ಹಾಗೂ ಬಿಡುವ ಸಮಯ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಎಂದು ಎಸ್ಪಿ ಹೇಳಿದರು.
ಉಡುಪಿ ಇಂದ್ರಾಳಿ ಶಾಲೆ ಬಳಿ ಶಾಲಾ ಮಕ್ಕಳಿಗೆ ರಸ್ತೆ ದಾಟಲು ಅನಾನು ಕೂಲವಾಗುತ್ತಿರುವುದು ಹಾಗೂ ಮಣಿಪಾಲದ ಟೈಗರ್ ಸರ್ಕಲ್ ಬಳಿ ವಾಹನ ಸವಾರರು ಡಿವೈಡರ್ ಮೇಲಿಂದಲೇ ವಾಹನ ತಿರುಗಿಸಿಕೊಂಡು ಹೋಗುವ ಬಗ್ಗೆ ದೂರಲಾಯಿತು.
ಉಡುಪಿ ನಗರದ ಕೆಎಸ್ಆರ್ಟಿಸಿ ನಿಲ್ದಾಣದ ಬಳಿ ಅಕ್ರಮ ಚಟುವಟಿಕೆ ಗಳು ನಡೆಯುತ್ತಿರುವ ಮತ್ತು ಸಂತೆಕಟ್ಟೆ ಸರ್ವಿಸ್ ನಿಲ್ದಾಣದಲ್ಲಿ ಖಾಸಗಿ ಬಸ್ನವರು ಬಸ್ಗಳನ್ನು ಹೆಚ್ಚು ಹೊತ್ತು ರಸ್ತೆಯಲ್ಲೇ ನಿಲ್ಲಿಸಿ ಸಂಚಾರಕ್ಕೆ ತೊಂದರೆ ಕೊಡುತ್ತಿರುವ ಬಗ್ಗೆ ದೂರುಗಳು ಬಂದವು.
ಕರ್ತವ್ಯ ಸ್ಥಳದಲ್ಲಿ ಕಿರುಕುಳ: ದೂರು
ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಸಂಸ್ಥೆಯೊಂದರಲ್ಲಿ ಕರ್ತವ್ಯ ಸ್ಥಳದಲ್ಲಿ ಕಿರುಕುಳ ನೀಡುತ್ತಿರುವ ಕುರಿತು ಮಹಿಳೆಯೊಬ್ಬರು ಎಸ್ಪಿಯವರಲ್ಲಿ ದೂರಿದರು. ಈ ಬಗ್ಗೆ ಸರಿಯಾಗಿ ಪರಿಶೀಲನೆ ನಡೆಸಿ ಕಾನೂನು ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಅನುಮಾನಾಸ್ಪದ ಮರಣದ ಮರಣೋತ್ತರ ವರದಿ ಈವರೆಗೆ ಬಾರದಿರುವ ಬಗ್ಗೆ ಮಹಿಳೆ ಯೊಬ್ಬರು ದೂರಿದರು. ಸಂಜೆಯೊಳಗೆ ವರದಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ಎಸ್ಪಿ ಭರವಸೆ ನೀಡಿದರು.







