ಉತ್ತರಪ್ರದೇಶದಲ್ಲಿ ಚಳಿಗೆ ಮತ್ತೆ 40 ಬಲಿ
ಹೊಸದಿಲ್ಲಿ, ಜ. 10: ಉತ್ತರಪ್ರದೇಶದ ವಿವಿಧ ಭಾಗಗಳಲ್ಲಿ ಶೀತ ಮಾರುತ ಬೀಸುವಿಕೆ ಬುಧವಾರ ಕೂಡ ಮುಂದುವರಿದಿದೆ. ಶೀತ ಮಾರುತಕ್ಕೆ ಕಳೆದ 24 ಗಂಟೆಗಳಲ್ಲಿ 40ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರೊಂದಿಗೆ ಶೀತಮಾರುತಕ್ಕೆ ಮೃತಪಟ್ಟವರ ಸಂಖ್ಯೆ 143ಕ್ಕೆ ಏರಿಕೆಯಾಗಿದೆ.
ರಾಜ್ಯ ರಾಜಧಾನಿ ಹಾಗೂ ಸಮೀಪದ ಪ್ರದೇಶಗಳಲ್ಲಿ ಮುಂಜಾನೆ ಮಂಜು ಸಾಮಾನ್ಯ ಜನಜೀವನಕ್ಕೆ ಅಡ್ಡಿ ಉಂಟು ಮಾಡಿದೆ. ಕಳಪೆ ದೃಗ್ಗೋಚರದ ಕಾರಣಕ್ಕೆ 12ಕ್ಕೂ ಅಧಿಕ ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ. ರಾಜ್ಯ ರಾಜಧಾನಿಯಲ್ಲಿ ಚಳಿಗಾಲದ ರಜೆಯನ್ನು ಒಂದು ದಿನ ವಿಸ್ತರಿಸಿ ಜಿಲ್ಲಾ ದಂಡಾಧಿಕಾರಿ ಆದೇಶ ನೀಡಿದ್ದಾರೆ.
ಆದೇಶದ ಹೊರತಾಗಿಯೂ ಖಾಸಗಿ ಶಾಲೆಗಳು ತೆರೆದಿವೆ. ಈ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ. ಕಾನ್ಪುರ, ಫತೇಪುರ, ಕನೌಜ, ಪಿಲಿಬಿಟ್, ಮೊರಾದಾಬಾದ್, ಸಾಂಬಾಲ್, ಅಮ್ರೋಹಾ, ರಾಮ್ಪುರ, ಹಮೀರ್ಪುರ, ಅಝಮ್ಗಢ, ಗಾಝಿಪುರ ಹಾಗೂ ಬಲ್ಲಿಯಾದಲ್ಲಿ ಚಳಿಯಿಂದ ಸಾವು ಸಂಭವಿಸಿದ ಬಗ್ಗೆ ವರದಿಯಾಗಿದೆ. ನಾವು ಬೆಚ್ಚಗಿರಿಸುವ ಬ್ಲಾಂಕೆಟ್, ಬಟ್ಟೆ, ಅಗ್ನಿಷ್ಟಿಕೆ ಒದಗಿಸಿದ್ದೇವೆ ಹಾಗೂ ರಾತ್ರಿ ಆಶ್ರಯಗಳನ್ನು ಆರಂಭಿಸಿದ್ದೇವೆ ಎಂದು ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ.