ವಿಪಕ್ಷಗಳ ಮೇಲೆ ಸವಾರಿ ಮಾಡಲು ಎಸಿಬಿ ಬಳಕೆ: ಅಶ್ವಥ್ ನಾರಾಯಣ
ಬೆಂಗಳೂರು, ಜ.10: ಭ್ರಷ್ಟಾಚಾರವನ್ನು ಸದೆ ಬಡಿಯಲು ಅಸ್ತಿತ್ವದಲ್ಲಿದ್ದ ಲೋಕಾಯುಕ್ತ ಸಂಸ್ಥೆಗೆ ಎಳ್ಳು ನೀರು ಬಿಟ್ಟಿರುವ ರಾಜ್ಯ ಸರಕಾರ, ತನ್ನ ಮೂಗಿನ ನೇರಕ್ಕೆ ನಡೆಯುವ ಎಸಿಬಿಯನ್ನು ಪ್ರಾರಂಭಿಸಿ ವಿರೋಧ ಪಕ್ಷದವರ ಮೇಲೆ ಸವಾರಿ ಮಾಡಲು ಹೊರಟಿದೆ ಎಂದು ಬಿಜೆಪಿ ವಕ್ತಾರ ಅಶ್ವಥ್ನಾರಾಯಣ ಆರೋಪಿಸಿದರು.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರದ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಮಾತನಾಡುವವರ ವಿರುದ್ಧ ಖಾಸಗಿ ವ್ಯಕ್ತಿಗಳು, ಕಾಂಗ್ರೆಸ್ ಹಾಗೂ ಆರ್ಟಿಐ ಕಾರ್ಯಕರ್ತರಿಂದ ದೂರುಗಳನ್ನು ದಾಖಲಿಸಿಕೊಂಡು, 15-20 ವರ್ಷಗಳ ಹಿಂದೆ ಮುಗಿದು ಹೋದ ಪ್ರಕರಣಗಳನ್ನು ಮತ್ತೆ ಮರುಜೀವ ನೀಡುವುದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಚಾಳಿಯಾಗಿದೆ ಎಂದು ದೂರಿದರು.
ಲಾಲ್ಬಾಗ್ನ ಸಿದ್ದಾಪುರ ಬಳಿಯ ಎರಡು ಎಕರೆ 39 ಗುಂಟೆ ಜಮೀನು ಅಕ್ರಮದ ಬಗ್ಗೆ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಜ.3ರಂದು ಆರೋಪ ಮಾಡುತ್ತಿದ್ದಂತೆ, ಜ.5ರಂದು ಕಾಂಗ್ರೆಸ್ ಕಾರ್ಯಕರ್ತ ಸಲೀಮ್ ಎಂಬವರಿಂದ ದೂರು ಪಡೆದು ಅಶೋಕ್ ವಿರುದ್ಧ ಎಸಿಬಿಯವರು ಎಫ್ಐಆರ್ ದಾಖಲು ಮಾಡಿದ್ದಾರೆ ಎಂದು ಅಶ್ವಥ್ ನಾರಾಯಣ್ ಆಕ್ರೋಶ ವ್ಯಕ್ತಪಡಿಸಿದರು.
ಅಶೋಕ್ ವಿರುದ್ಧ ಸೇಡಿನ ರಾಜಕಾರಣ ಮಾಡಲಾಗುತ್ತಿದೆ. ಅರಣ್ಯ ಸಚಿವ ರಮಾನಾಥ್ ರೈ ತಮ್ಮ ಪತ್ನಿಯ ಹೆಸರಿನಲ್ಲಿ 3 ಎಕರೆ ಜಮೀನು ಅಕ್ರಮವಾಗಿ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಹರೀಶ್ ಬಂಟ್ವಾಳ ಎಂಬವರು ಎಸಿಬಿಗೆ ದೂರು ನೀಡಿದ್ದರೂ ಈವರೆಗೆ ಯಾವುದೆ ಪ್ರಗತಿಯಾಗಿಲ್ಲ ಎಂದು ಅವರು ದೂರಿದರು.
ಮುಖ್ಯಮಂತ್ರಿ ವಿರುದ್ಧ 60ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಸರಕಾರದ ವಿರುದ್ಧ ಧ್ವನಿ ಎತ್ತಿದ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ವಿವಿಧ ಪ್ರಕರಣಗಳು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಜಂತಕಲ್ ಗಣಿ ಪ್ರಕರಣವನ್ನು ದಾಖಲು ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ಎಸಿಬಿ ಅಕ್ರಮ-ಸಕ್ರಮ: ರಾಜ್ಯ ಸರಕಾರದ ಅಕ್ರಮಗಳನ್ನು ಸಕ್ರಮ ಮಾಡುವುದು, ವಿರೋಧ ಪಕ್ಷದವರು ಸಕ್ರಮವಾಗಿ ಜನತೆಯ ಮುಂದಿಡುವ ವಿಚಾರಗಳನ್ನು ಅಕ್ರಮ ಮಾಡುವ ಉದ್ದೇಶಕ್ಕಾಗಿ ಎಸಿಬಿ ಕಾರ್ಯ ನಿರ್ವಹಿಸುತ್ತಿದೆ. ಸರಕಾರ ಈ ಕೂಡಲೆ ಅಶೋಕ್ ಸೇರಿದಂತೆ ಇನ್ನಿತರರ ವಿರುದ್ಧ ದಾಖಲಾಗಿರುವ ಸುಳ್ಳು ಪ್ರಕರಣದ ಎಫ್ಐಆರ್ಗಳನ್ನು ರದ್ದುಪಡಿಸಬೇಕು ಎಂದು ಅಶ್ವಥ್ನಾರಾಯಣ್ ಒತ್ತಾಯಿಸಿದರು.
ಶ್ವೇತಪತ್ರ ಹೊರಡಿಸಲಿ: ಕಳೆದ 30 ವರ್ಷಗಳಲ್ಲಿ ಬೆಂಗಳೂರು ಸುತ್ತಮುತ್ತಲು ಎಷ್ಟು ಮಂದಿಗೆ ಸರಕಾರ ಭೂ ಮಂಜೂರಾತಿ ಮಾಡಿದೆ ಎಂಬುದರ ಕುರಿತು ವಿವರವಾದ ಮಾಹಿತಿಯನ್ನು ಒಳಗೊಂಡ ಶ್ವೇತಪತ್ರವನ್ನು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೊರಡಿಸಲಿ. ಇಲ್ಲವೆ, ವಿಧಾನಸಭೆಯ ಮುಂದೆ ಈ ವಿಷಯ ಚರ್ಚೆಗೊಳಪಡಿಸಲಿ ಎಂದು ಅವರು ಆಗ್ರಹಿಸಿದರು.
ಆರೆಸೆಸ್ಸ್-ಪಿಎಫ್ಐ ಹೋಲಿಕೆ ಬೇಡ: ಸಂಘಪರಿವಾರವನ್ನು ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಎಸ್ಡಿಪಿಐ, ಪಿಎಫ್ಐ ಸಂಘಟನೆಗಳೊಂದಿಗೆ ಮುಖ್ಯಮಂತ್ರಿ ಹೋಲಿಸುವುದು ಸರಿಯಲ್ಲ. ಯಾಸಿನ್ ಭಟ್ಕಳ್ ಹಾಗೂ ರಿಯಾಝ್ ಭಟ್ಕಳ್ ಅವರ ಕೂಸೇ ಈ ಕೆಎಫ್ಡಿ ಹಾಗೂ ಪಿಎಫ್ಐ ಎಂದು ಅಶ್ವಥ್ನಾರಾಯಣ್ ಹೇಳಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ಭೇಟಿ ಹಾಗೂ ನಮ್ಮ ಪರಿವರ್ತನಾ ರ್ಯಾಲಿಗೆ ಸಿಗುತ್ತಿರುವ ಜನಬೆಂಬಲದಿಂದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ಗುಂಡೂರಾವ್ ಹತಾಶರಾಗಿ ತಾಳ್ಮೆ ಕಳೆದುಕೊಂಡು ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಮಾಜಿ ಪ್ರಧಾನಿ ಜವಾಹರ್ಲಾಲ್ ನೆಹರು ಗಣರಾಜ್ಯೋತ್ಸವದಲ್ಲಿ ಆರೆಸೆಸ್ಸ್ ಪಥಸಂಚಲನಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಆರೆಸೆಸ್ಸ್ ಹಾಗೂ ಅದರ ಅಂಗ ಸಂಸ್ಥೆಗಳು ಉಗ್ರಗಾಮಿ ಸಂಘಟನೆಗಳಾಗಿದ್ದಲ್ಲಿ ನೆಹರು ಇವರಿಗೆ ಪ್ರೋತ್ಸಾಹ ನೀಡಿದಂತಾಗುವುದಿಲ್ಲವೇ ಇದಕ್ಕೆ ಸಿದ್ದರಾಮಯ್ಯ ಉತ್ತರಿಸಬೇಕು. ಬೇರೆ ಪಕ್ಷದಿಂದ ಕಾಂಗ್ರೆಸ್ಗೆ ವಲಸೆ ಬಂದಿರುವ ಅವರಿಗೆ ಇದೆಲ್ಲ ಹೇಗೆ ಗೊತ್ತಾಗಬೇಕು ಎಂದು ಅವರು ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಮುನಿರಾಜು, ಮುಖಂಡ ಪ್ರಕಾಶ್ ಉಪಸ್ಥಿತರಿದ್ದರು.







