ಸಮಾಜದಲ್ಲಿ ಧ್ವನಿ ಇಲ್ಲದವರಿಗೆ ನೋವುಂಟು ಮಾಡುವ ಘಟನೆಗಳು ನಿರಂತರವಾಗಿ ನಡೆಯುತ್ತಿದೆ: ಶಾಸಕ ಎಂ.ಕೆ.ಸೋಮಶೇಖರ್
ಮೈಸೂರು,ಜ.10: ಸಮಾಜದಲ್ಲಿ ಧ್ವನಿ ಇಲ್ಲದವರಿಗೆ ನೋವುಂಟು ಮಾಡುವ ಘಟನೆಗಳು ನಿರಂತರವಾಗಿ ಇನ್ನೂ ನಡೆಯುತ್ತಿದ್ದು, ಅದನ್ನು ಹೋಗಲಾಡಿಸಲು ನಿತ್ಯ ಸಂಘರ್ಷ ನಡೆಯಬೇಕಾಗಿದೆ ಎಂದು ಶಾಸಕ ಎಂ.ಕೆ. ಸೋಮಶೇಖರ್ ಅಭಿಪ್ರಾಯಪಟ್ಟರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ.ಜಾ, ಪ.ಪಂ. ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಇರುವ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಾತಃಸ್ಮರಣೀಯರು, ಅವರು ನೀಡಿದ ಸಂವಿಧಾನದಿಂದ ಜನರು ಬೆಳಕು ಕಾಣುತ್ತಿದ್ದಾರೆ. ದೇಶದಲ್ಲಿನ ಅರ್ಧಕ್ಕೂ ಹೆಚ್ಚು ಮಹಿಳೆಯರಿಗೆ ಸಮಾನತೆ ಅವಕಾಶ ಸಂವಿಧಾನ ಒದಗಿಸಿದ್ದು, ಇಲ್ಲದಿದ್ದರೆ ಎಲ್ಲರೂ ಕಗ್ಗತ್ತಲೆಯಲ್ಲಿ ಇರಬೇಕಾಗಿತ್ತೆಂದು ಅಭಿಪ್ರಾಯಪಟ್ಟರು.
ಜಾತಿ ಶ್ರೇಣಿಯಲ್ಲಿ ತಾತ್ಸಾರದ ಮಾತು ಇನ್ನೂ ಜೀವಂತವಾಗಿದ್ದು, ಅದನ್ನು ಹೋಗಲಾಡಿಸಿ ಸಮಾನತೆ ದಿಕ್ಕಿನಲ್ಲಿ ಎಲ್ಲರೂ ಸಾಗಬೇಕಾದರೆ ಹೋರಾಟ, ಸಂಘರ್ಷ ನಡೆಯಬೇಕಾದ ಅಗತ್ಯವಿದೆ. ಇಲ್ಲದಿದ್ದರೆ ಮೇಲ್ವರ್ಗದ ಜನರು ಸುಲಭವಾಗಿ ಸಮಾನತೆ ನೀಡುವುದಿಲ್ಲವೆಂದರು. ಎಲ್ಲಕ್ಕಿಂತ ಹೆಚ್ಚಾಗಿ ದುರ್ಬಲರನ್ನು ಮೌಢ್ಯ, ಕಂದಾಚಾರದಿಂದ ಹೊರ ತಂದು ವಿದ್ಯಾಭ್ಯಾಸ ಒದಗಿಸಿ, ಸಮಾಜದಲ್ಲಿ ಬದಲಾವಣೆ ತರುವ ಅಗತ್ಯವಿದೆ ಎಂದು ಹೇಳಿದರು.
ಮೈಸೂರು ವಿವಿಯ ಪರೀಕ್ಷಾಂಗ ಕುಲಸಚಿವ ಡಾ.ಜೆ. ಸೋಮಶೇಖರ್, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಂ. ವಾಸು, ಕೆ.ಎಚ್. ಶ್ರೀನಿವಾಸ್, ಇತರರು ಇದ್ದರು.