ಗಣರಾಜೋತ್ಸವ ದಿನದಂದು ನಾಗರೀಕ ಹಿತರಕ್ಷಣಾ ವೇದಿಕೆಯಿಂದ ಉಪವಾಸ ಸತ್ಯಾಗ್ರಹ
ಅಕ್ರಮ, ಭ್ರಷ್ಟಾಚಾರದ ದೂರುಗಳಿಗೆ ಸ್ಪಂದಿಸದ ಶಿವಮೊಗ್ಗ ಜಿಲ್ಲಾಡಳಿತ
ಶಿವಮೊಗ್ಗ, ಜ.11: ಶಿವಮೊಗ್ಗ ನಗರದಲ್ಲಿ ನಡೆದಿರುವ ಹಲವಾರು ಭ್ರಷ್ಟಾಚಾರ ಹಾಗೂ ಅಕ್ರಮಗಳ ಕುರಿತಂತೆ ದೂರು ನೀಡಿದ್ದರೂ ಇಲ್ಲಿಯವರೆಗೂ ಜಿಲ್ಲಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಈ ದೂರುಗಳನ್ನು ನಿರ್ಲಕ್ಷ್ಯಿಸುವ ಮೂಲಕ ಅಕ್ರಮಗಳ ಪೋಷಕರಂತೆ ಜಿಲ್ಲಾಡಳಿತ ನಡೆದುಕೊಳ್ಳುತ್ತಿದೆ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್ ಆರೋಪಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಭ್ರಷ್ಟಾಚಾರ ಹಾಗೂ ಅಕ್ರಮಗಳ ಕುರಿತಂತೆ ಒಕ್ಕೂಟ ನೀಡಿರುವ ದೂರುಗಳಿಗೆ ಸಂಬಂಧಿಸಿದಂತೆ, ಮುಂದಿನ 15 ದಿವಸಗಳಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಜ. 26 ರ ಗಣರಾಜೋತ್ಸವ ದಿನದಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ 24 ಗಂಟೆಗಳ ಉಪವಾಸ ಸತ್ಯಾಗ್ರಹವನ್ನು ಸಂಘಟನೆಯವತಿಯಿಂದ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಭ್ರಷ್ಟಾಚಾರ - ಅಕ್ರಮಗಳ ಕುರಿತಂತೆ ಒಕ್ಕೂಟ ನೀಡಿದ್ದ ದೂರಿನ ಆಧಾರದ ಮೇಲೆ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಯಿಂದ ಮಾಹಿತಿ ಕೇಳಿತ್ತು. ಆದರೆ ಇಲ್ಲಿಯವರೆಗೂ ಯಾವುದೇ ಉತ್ತರವನ್ನು ಜಿಲ್ಲಾಡಳಿತ ನೀಡಿಲ್ಲ. ಶಿವಮೊಗ್ಗ ಪಾಲಿಕೆ ನೌಕರರ ಮೇಲೆ ನೀಡಿರುವ ದೂರುಗಳನ್ನಾಧರಿಸಿ, ಪೌರಾಡಳಿತ ಇಲಾಖೆ ಡಿಸಿಯಿಂದ ವರದಿ ಕೇಳಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಹಿಂದಿನ ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ವಿರುದ್ಧ ಎರಡು ದೂರುಗಳನ್ನು ನೀಡಲಾಗಿತ್ತು. ಸಂಬಂಧಿಸಿದ ಇಲಾಖೆಯು ಹತ್ತು ತಿಂಗಳ ಹಿಂದೆ ವರದಿ ಕೇಳಿದ್ದರೂ, ಇನ್ನೂ ನೀಡಿಲ್ಲ. ಇವುಗಳ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಂಡಿಲ್ಲ. ವೆಂಕಟೇಶ ನಗರದಲ್ಲಿ ಹಸಿರು ಪೀಠದ ಆದೇಶ ಉಲ್ಲಂಘಿಸಿ ಕೆರೆ ಜಾಗದಲ್ಲಿ ನಿವೇಶನ ಮಾಡುತ್ತಿರುವ ದೂರು ನೀಡಿದ್ದರೂ ಸಹ ಕ್ರಮ ಕೈಗೊಂಡಿಲ್ಲ ಎಂದು ಜಿಲ್ಲಾಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆ ಮಾಜಿ ಮೇಯರ್ ಎಸ್.ಕೆ.ಮರಿಯಪ್ಪರವರು ಚುನಾವಣಾ ಸಂದರ್ಭದಲ್ಲಿ ಸುಳ್ಳು ಪ್ರಮಾಣ ಪತ್ರ ನೀಡಿ ಆಯ್ಕೆಯಾಗಿದ್ದು ಸಾಬೀತಾಗಿದ್ದರೂ ಸಹ ಪೊಲೀಸರಿಗೆ ದೂರು ನೀಡದೆ ಕರ್ತವ್ಯ ಲೋಪ ಎಸಗಿದ್ದಾರೆ. ತೆರಿಗೆಯನ್ನು ವಂಚಿಸಿರುವ ಬಗ್ಗೆ ಸರ್ಕಾರಕ್ಕೆ ಮತ್ತು ಜಿಲ್ಲಾಧಿಕಾರಿಗೆ ದಾಖಲೆ ಸಮೇತ ಒಕ್ಕೂಟ ದೂರು ನೀಡಿದ್ದರೂ ಮರಿಯಪ್ಪ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಎಲ್ಲಾ ದೂರುಗಳಿಗೆ ಜಿಲ್ಲಾಡಳಿತ ಸ್ಪಂದಿಸದೆ ನಿರ್ಲಕ್ಷ್ಯ ಮತ್ತು ತಾತ್ಸಾರ ವಹಿಸಿರುವುದು ನಿಜಕ್ಕೂ ದುಃಖದ ಸಂಗತಿಯಾಗಿದೆ. ಈ ಅಕ್ರಮಗಳಿಗೆ ಪೋಷಕರಂತೆ ವರ್ತಿಸುತ್ತಿರುವುದು ಸರಿಯಾದ ಕ್ರಮವಲ್ಲ. ತಕ್ಷಣವೇ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ. ಗೋಷ್ಠಿಯಲ್ಲಿ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಎ. ಸತೀಶ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಎಸ್.ಬಿ. ಅಶೋಕ್ ಕುಮಾರ್, ನಿರ್ದೇಶಕರಾದ ಅಶೋಕ್ ಯಾದವ್, ರಮೇಶ್ ಪರಿಸರ, ಬಿ.ಎಸ್. ನಾಗರಾಜ ಮೊದಲಾದವರಿದ್ದರು.
ಪಾಲಿಕೆ ಹಿಂದಿನ ಆಯುಕ್ತರ ವಿರುದ್ದವೂ ಕ್ರಮಕೈಗೊಂಡಿಲ್ಲ...
ಹಿಂದಿನ ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ವಿರುದ್ಧ ಎರಡು ದೂರುಗಳನ್ನು ನೀಡಲಾಗಿತ್ತು. ಸಂಬಂಧಿಸಿದ ಇಲಾಖೆಯು ಹತ್ತು ತಿಂಗಳ ಹಿಂದೆ ವರದಿ ಕೇಳಿದ್ದರೂ, ಇನ್ನೂ ನೀಡಿಲ್ಲ. ಇವುಗಳ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಂಡಿಲ್ಲ. ವೆಂಕಟೇಶ ನಗರದಲ್ಲಿ ಹಸಿರು ಪೀಠದ ಆದೇಶ ಉಲ್ಲಂಘಿಸಿ ಕೆರೆ ಜಾಗದಲ್ಲಿ ನಿವೇಶನ ಮಾಡುತ್ತಿರುವ ದೂರು ನೀಡಿದ್ದರೂ ಸಹ ಕ್ರಮ ಕೈಗೊಂಡಿಲ್ಲ ಎಂದು ಕೆ.ವಿ.ವಸಂತಕುಮಾರ್ರವರು ಜಿಲ್ಲಾಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.