ಇಬ್ಬರು ದಲಿತರ ತಲೆಬೋಳಿಸಿ ಮೆರವಣಿಗೆ ನಡೆಸಿದ ಹಿಂದೂ ಯುವವಾಹಿನಿ ಕಾರ್ಯಕರ್ತರು
ಉತ್ತರ ಪ್ರದೇಶ: ಗೋಕಳವು ಆರೋಪ
ಬಲ್ಲಿಯಾ (ಉತ್ತರಪ್ರದೇಶ), ಜ. 11: ಗೋವುಗಳನ್ನು ಕಳವುಗೈದ ಆರೋಪದಲ್ಲಿ ಹಿಂದೂ ಯುವ ವಾಹಿನಿಯ ಕಾರ್ಯಕರ್ತರು ಇಬ್ಬರು ದಲಿತರ ತಲೆ ಬೋಳಿಸಿ ಮೆರವಣಿಗೆ ನಡೆಸಿದ ಘಟನೆ ಇಲ್ಲಿನ ರಾಸ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗೋವುಗಳನ್ನು ಕಳವುಗೈದಿರುವುದಾಗಿ ಆರೋಪಿಸಿ ಪ್ರವೀಣ್ ಶ್ರೀವಾತ್ಸವ ನೀಡಿದ ದೂರಿನಂತೆ ದಾಖಲಿಸಿಕೊಳ್ಳಲಾದ ಎಫ್ಐಆರ್ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರು ದಲಿತ ಯುವಕರನ್ನು ಬಂಧಿಸಿದ್ದಾರೆ. ಅನಂತರ ಇಬ್ಬರು ಯುವಕರಲ್ಲಿ ಓರ್ವ ಪ್ರಕರಣ ದಾಖಲಿಸಿದ್ದು, ಸೋಮವಾರ ತಮ್ಮನ್ನು ಎರಡು ಗೋವುಗಳೊಂದಿಗೆ ಹಿಂದೂ ಯುವ ವಾಹಿನಿಯ ಕೆಲವು ಕಾರ್ಯಕರ್ತರು ತಡೆದಾಗ ಈ ಘಟನೆ ಸಂಭವಿಸಿದೆ ಎಂದು ಆರೋಪಿಸಿದ್ದಾರೆ.
ಪೊಲೀಸರಿಗೆ ನೀಡಿದ ದೂರಿನಲ್ಲಿ ಉಮಾ ರಾಮ್, ತನ್ನ ಹಾಗೂ ಸೋನುವಿನ ತಲೆಯನ್ನು ಹಿಂದೂ ಯುವ ವಾಹಿನಿಯ ಕಾರ್ಯಕರ್ತರು ಬೋಳಿಸಿದ್ದಾರೆ. ಅನಂತರ ಅವರು ನಮ್ಮ ಕುತ್ತಿಗೆಗೆ ಟಯರ್ ಹಾಗೂ ‘ನಾವು ಗೋ ಕಳ್ಳರು’ ಎಂದು ಬರೆದ ಪ್ರದರ್ಶನಾ ಫಲಕ ನೇತು ಹಾಕಿ ಮೆರವಣಿಗೆ ನಡೆಸಿದ್ದಾರೆ ಎಂದು ದೂರಿದ್ದಾರೆ.
ಉಮಾ ರಾಮ್ ನೀಡಿದ ದೂರಿನ ಆಧಾರದಲ್ಲಿ 15 ಮಂದಿ ಅಜ್ಞಾತ ವ್ಯಕ್ತಿಗಳ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಪ್ರಕರಣದ ತನಿಖೆ ನಡೆಸುವಂತೆ ಉಪ ಪೊಲೀಸ್ ಅಧೀಕ್ಷಕ ಸೂಚಿಸಿದ್ದಾರೆ.