ಸ್ಮಾರ್ಟ್ಸಿಟಿ ಅನುದಾನ ಸಂಪೂರ್ಣ ಬಳಕೆ: ಸಂಸದ ಮುದ್ದಹನುಮೇಗೌಡ
![ಸ್ಮಾರ್ಟ್ಸಿಟಿ ಅನುದಾನ ಸಂಪೂರ್ಣ ಬಳಕೆ: ಸಂಸದ ಮುದ್ದಹನುಮೇಗೌಡ ಸ್ಮಾರ್ಟ್ಸಿಟಿ ಅನುದಾನ ಸಂಪೂರ್ಣ ಬಳಕೆ: ಸಂಸದ ಮುದ್ದಹನುಮೇಗೌಡ](/images/placeholder.jpg)
ತುಮಕೂರು,ಜ.11:ಸ್ಮಾರ್ಟ್ಸಿಟಿ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಂಡು ನಾಗರಿಕರಿಗೆ ಹೆಚ್ಚಿನ ಸೌಲಭ್ಯ ನೀಡುವ ನಿಟ್ಟಿನಲ್ಲಿ ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದ್ದಾರೆ.
ಸ್ಮಾರ್ಟ್ಸಿಟಿ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ನೇರವೇರಿಸಿ ಮಾತನಾಡಿದ ಅವರು,ತುಮಕೂರು ವಿಶ್ವವಿದ್ಯಾಲಯದ ಆವರಣದಲ್ಲಿ ಸ್ಮಾರ್ಟ್ ಉದ್ಯಾನವನ ಹಾಗೂ ಗಾಜಿನಮನೆ ಆವರಣದಲ್ಲಿ ಇ-ಲಾಂಜ್ ನಿರ್ಮಾಣ, ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗಾಂಧಿ ಡಯೋರಾಮಾ ಹಾಗೂ ಜಾಗಿಂಗ್ ಟ್ರ್ಯಾಕ್, ಪಾದಚಾರಿ ಮಾರ್ಗವನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ಸ್ಮಾರ್ಟ್ಸಿಟಿ ಯೋಜನೆಯಡಿ 2000 ಕೋಟಿ ರೂ ಅನುದಾನವನ್ನು ಬಳಸಿಕೊಂಡು ನಾಗರಿಕರಿಗೆ ಉತ್ತಮ ಸೌಲಭ್ಯ ನೀಡಲು ಯೋಜನೆಗಳನ್ನು ರೂಪಿಸಲಾಗಿದ್ದು, ಈ ನಿಟ್ಟಿನಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಹೇಳಿದರು.
ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ, ಬೆಂಗಳೂರಿನಲ್ಲಿ ಇತ್ತಿಚೆಗೆ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಪಿಪಿಪಿ ಮಾದರಿಯಲ್ಲಿ 350 ಕೋಟಿ ರೂ ಹೂಡಿಕೆ ಮಾಡಲು ಹೂಡಿಕೆದಾರರು ಮುಂದೆ ಬಂದಿದ್ದು.4.15 ಕೋಟಿ ವೆಚ್ಚದ ಕಾಮಗಾರಿಗಳಿಗೆ ಇಂದು ಗುದ್ದಲಿ ಪೂಜೆ ನಡೆಸಲಾಗಿದೆ. ಅಲ್ಲದೇ 27.21 ಲಕ್ಷ ರೂ ಅನುದಾನದಲ್ಲಿ ಇ-ಲೈಬ್ರರಿ, ಕೆಫೆ, ತುಮಕೂರು ಒನ್, ಎಟಿಎಂ, ನಾಗರಿಕರಿಗೆ ಕುಳಿತುಕೊಳ್ಳುವ ಪ್ರದೇಶ,ಶೌಚಾಲಯವನ್ನು ಒಳಗೊಂಡಂತೆ ಎಲ್ಲ ಸೌಲಭ್ಯಗಳನ್ನು ಇ-ಲಾಂಜ್ನಲ್ಲಿ ಕಲ್ಪಿಸಲಾಗುವುದು. ತುಮಕೂರು ವಿವಿ ಆವರಣದಲ್ಲಿ ಆರ್ಟ್ಗ್ಯಾಲರಿ, ಓಪನ್ ಚೆಸ್ ಸೇರಿದಂತೆ ವಿವಿಧ ಕಾಮಗಾರಿಗಳನ್ನು 67.74 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದರು.
ಈ ವೇಳೆ ಡಾ.ಪರಮಶಿವಮೂರ್ತಿ, ಪ್ರೊ.ಜಯಶೀಲ, ತುಮಕೂರು ವಿವಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಈಶ್ವರ್, ಉಪ ಮೇಯರ್ ಫರ್ಜಾನಾಖಾನಂ, ಪಾಲಿಕೆ ಆಯುಕ್ತ ಮಂಜುನಾಥ್ ಸ್ವಾಮಿ ಸೇರಿದಂತೆ ಸ್ಮಾರ್ಟ್ಸಿಟಿಯ ಅಧಿಕಾರಿಗಳು ಉಪಸ್ಥಿತರಿದ್ದರು.