ಡಿವೈಎಫ್ ಐ ಉಳ್ಳಾಲ: ದೀಪಕ್, ಬಶೀರ್ ಅವರ ಗೌರವಾರ್ಥ ಶ್ರದ್ಧಾಂಜಲಿ ಸಭೆ

ಉಳ್ಳಾಲ, ಜ. 11: ಕೋಮುವಾದ, ಮತೀಯವಾದದ ಹೆಸರಿನಲ್ಲಿ ದಾಳಿ, ದಬ್ಬಾಳಿಕೆಗಳು ನಿರಂತರವಾಗಿ ನಡೆದು ಜಿಲ್ಲೆಯ ಹೆಸರನ್ನು ಹಾಳು ಮಾಡುತ್ತಿದೆ. ಧರ್ಮಗಳ ನಡುವಿನ ಸಂಬಂಧಗಳಿಗೆ ಹುಳಿ ಹಿಂಡಿ, ಅಧಿಕಾರದ ಖುರ್ಚಿಗೆ ಅಮಾಯಕರ ಕೊಲೆ ನಡೆಸಿ ಸಮಾಜದ ಅಶಾಂತಿಗೆ ಹಲವರು ಕಾರಣ ರಾಗುತ್ತಿದ್ದಾರೆ. ಇದರಿಂದಾಗಿ ಜನರ ನಡುವೆ ಅಪನಂಬಿಕೆ ಸೃಷ್ಟಿ ಮಾಡುವ ತುಳುನಾಡಿನ ಸೌಹಾರ್ದತೆಗೆ ಏಟನ್ನು ನೀಡುವ ಕೆಲಸ ಆಗಿದೆ. ಮತೀಯವಾ ದದ ಹೆಸರಿನಲ್ಲಿ ನಡೆಯುವ ಕೊಲೆಗಳಿಂದಾಗಿ ಭಾವೈಕ್ಯತೆಯನ್ನು ನಾಶ ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಹೇಳಿದರು.
ಅವರು ಡಿವೈಎಫ್ ಐ ಉಳ್ಳಾಲ ವಲಯ ಸಮಿತಿ ವತಿಯಿಂದ ದೀಪಕ್ ರಾವ್ ಮತ್ತು ಬಶೀರ್ ಅವರ ಗೌರವಾರ್ಥ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ನಡೆದ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ದೀಪಕ್ ರಾವ್ ಮೃತದೇಹವಿದ್ದ ವಾಹನದ ಮೇಲೆ ನಿಂತು ಭಾಷಣ ಮಾಡುವವರು ಹೆಣದ ಮೇಲೆ ರಾಜಕೀಯ ನಡೆಸುತ್ತಿರುವುದು ಸ್ಪಷ್ಟವಾಗಿದ್ದು, ಮಾನವೀಯತೆಯನ್ನು ಕೊಲ್ಲುವ ಕೆಲಸ ಜಿಲ್ಲೆಯಲ್ಲಿ ಆಗುತ್ತಿದ್ದು, ಇದನ್ನು ಗಟ್ಟಿಗೊಳಿಸುವ ಪ್ರಯತ್ನ ಜನತೆಯಿಂದ ಆಗಬೇಕಿದೆ ಎಂದು ಹೇಳಿದರು.
ಈ ಸಂದರ್ಭ ಮುಖಂಡರುಗಳಾದ ಕೃಷ್ಣಪ್ಪ ಸಾಲ್ಯನ್, ಜಯಂತ್ ನಾಯ್ಕ, ಜೀವನರಾಜ್ ಕುತ್ತಾರ್ ಎಸ್ ಎಫ್ ಐ ನಾಯಕ ನಿತಿನ್, ವಿಕಾಸ್, ವಾಸುದೇವ ಉಚ್ಚಿಲ್, ಸುನಿಲ್ ಕುತ್ತಾರ್ ಮುಂತಾದವರು ಉಪಸ್ಥಿತರಿದ್ದರು.







