ಬೆಂಗಳೂರು: ಜ.14ರಂದು ಲಾಲ್ ಬಾಗ್ನಲ್ಲಿ 'ಸುಗ್ಗಿ-ಹುಗ್ಗಿ' ಹಬ್ಬ
ಬೆಂಗಳೂರು, ಜ. 13: ನಗರವಾಸಿಗಳಿಗೆ ರೈತರ ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಕನ್ನಡ, ಸಂಸ್ಕೃತಿ ಇಲಾಖೆ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ (ಜ.14) ಇಂದು ಲಾಲ್ ಬಾಗ್ನಲ್ಲಿ 'ಸುಗ್ಗಿ-ಹುಗ್ಗಿ' ಹಬ್ಬ ಆಯೋಜಿಸಿದೆ.
ಶನಿವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೃಷಿಸಚಿವ ಕೃಷ್ಣ ಭೈರೇಗೌಡ, ನಗರದ ಜನತೆ ನಮ್ಮ ಕೃಷಿ ಸಂಸ್ಕೃತಿಯನ್ನೇ ಮರೆತಿದ್ದಾರೆ. ನಗರ ವಾಸಿಗಳಿಗೆ ಕೃಷಿ, ರೈತರ ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸುಗ್ಗಿ-ಹುಗ್ಗಿ ಹಬ್ಬ ಆಯೋಜಿಸಲಾಗಿದೆ ಎಂದರು.
ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಬಿಬಿಎಂಪಿ, ಎಂಸಿಎ, ಅಕ್ಷಯ ಪಾತ್ರಾ, ಕರಕುಶಲ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ರೈತರು ಬೆಳೆದ ಧಾನ್ಯಗಳ ರಾಶಿಪೂಜೆ ಮಾಡುವುದರೊಂದಿಗೆ ಹಬ್ಬಕ್ಕೆ ಚಾಲನೆ ನೀಡಲಾಗುವುದು ಎಂದ ಅವರು, ಎತ್ತಿನಗಾಡಿ ಓಟ, ಗಾಳಿಪಟ ಉತ್ಸವ, ರಾಸುಗಳಿಗೆ ಕಿಚ್ಚು ಹಾಯಿಸುವುದು ಸೇರಿದಂತೆ 6 ವಿವಿಧ ಪ್ರದೇಶಗಳ ಕೃಷಿ ಸಂಸ್ಕೃತಿಯನ್ನು ಹಬ್ಬದಲ್ಲಿ ಪ್ರದರ್ಶಿಸಲಾಗುವುದು. ಹಬ್ಬಕ್ಕೆ ಆಗಮಿಸುವವರಿಗೆ ಹುಗ್ಗಿ, ಪೊಂಗಲ್ ಹಾಗೂ ಗಾಳಿಪಟವನ್ನು ಉಚಿತವಾಗಿ ವಿತರಿಸಲಾಗುವುದೆಂದು ತಿಳಿಸಿದರು. ಹಬ್ಬದಲ್ಲಿ ಸಾಂಪ್ರದಾಯಿಕವಾಗಿ ತಯಾರಿಸಿದ ರಾಗಿ ಖಾದ್ಯ ಸೇರಿದಂತೆ ಸಾವಯವ ಕೃಷಿ ಉತ್ಪನ್ನಗಳ ಖಾದ್ಯಗಳ ಪ್ರದರ್ಶನ ಮಾರಾಟ ವ್ಯವಸ್ಥೆ ಮಾಡಲಾಗಿದೆ ಎಂದು ಕೃಷ್ಣಭೈರೇಗೌಡ ತಿಳಿಸಿದರು.