ಸೈನಿಕ ಕಾರ್ಯಾಚರಣೆ, ರಾಜಕೀಯ ಉಪಕ್ರಮದಿಂದ ಕಾಶ್ಮೀರದಲ್ಲಿ ಶಾಶ್ವತ ಶಾಂತಿ: ಜ. ರಾವತ್

ಹೊಸದಿಲ್ಲಿ, ಜ.14: ಸೈನಿಕ ಕಾರ್ಯಾಚರಣೆಯ ಜೊತೆ ರಾಜಕೀಯ ಉಪಕ್ರಮ ಸೇರಿದರೆ ಮಾತ್ರ ಕಾಶ್ಮೀರದಲ್ಲಿ ಶಾಂತಿ ನೆಲೆಸಬಹುದು ಎಂದು ಸೇನಾಪಡೆಯ ಮುಖ್ಯಸ್ಥ ಜ. ಬಿಪಿನ್ ರಾವತ್ ತಿಳಿಸಿದ್ದಾರೆ.
ಭಯೋತ್ಪಾದಕರ ನಿಗ್ರಹದ ಜೊತೆಗೆ ಕಾಶ್ಮೀರದ ಜನತೆಯ ವಿಶ್ವಾಸವನ್ನೂ ಗಳಿಸಿಕೊಳ್ಳಬೇಕಿದೆ ಎಂದ ಅವರು, ಸೈನಿಕ ಕಾರ್ಯಾಚರಣೆಗನ್ನು ಹೆಚ್ಚಿಸುವ ಮೂಲಕ ಕಾಶ್ಮೀರದ ಗಡಿಯಲ್ಲಿ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಗಳಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಬಹುದು ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಶಸ್ತ್ರ ಪಡೆಗಳು ಯಥಾಸ್ಥಿತಿಯ ಕಾರ್ಯಾಚರಣೆಯ ಬದಲು ವಿನೂತನ ತಂತ್ರಗಾರಿಕೆಯ ಕಾರ್ಯಾಚರಣೆ ಆಯ್ದುಕೊಳ್ಳಬೇಕು. ಕಳೆದ ವರ್ಷ ತಾನು ಅಧಿಕಾರ ಸ್ವೀಕರಿಸಿದ ಬಳಿಕದ ಅವಧಿಯಲ್ಲಿ ಕಾಶ್ಮೀರದಲ್ಲಿ ಪರಿಸ್ಥಿತಿ ಉತ್ತಮವಾಗಿದೆ ಎಂದರು. ರಾಜಕೀಯ ಉಪಕ್ರಮ ಹಾಗೂ ಇನ್ನಿತರ ಉಪಕ್ರಮಗಳು ಸೈನಿಕ ಕಾರ್ಯಾಚರಣೆಯ ಜೊತೆಯಲ್ಲೇ ಸಾಗಿದರೆ ಕಾಶ್ಮೀರದಲ್ಲಿ ಖಂಡಿತಾ ಶಾಶ್ವತ ಶಾಂತಿ ನೆಲೆಸಲು ಸಾಧ್ಯ. ರಾಜಕೀಯ- ಸೇನಾ ವಿಧಾನವನ್ನು ನಾವು ಅಂಗೀಕರಿಸಬೇಕಿದೆ ಎಂದವರು ನುಡಿದರು.
ಜಮ್ಮು-ಕಾಶ್ಮೀರದಲ್ಲಿ ಸಂಬಂಧಪಟ್ಟ ಪಕ್ಷ ಹಾಗೂ ಸಂಘಟನೆಗಳೊಂದಿಗೆ ನಿರಂತರ ಮಾತುಕತೆ ನಡೆಸಲು ಕೇಂದ್ರ ಸರಕಾರವು ಗುಪ್ತಚರ ವಿಭಾಗದ ಮಾಜಿ ಮುಖ್ಯಸ್ಥ ದಿನೇಶ್ವರ್ ಶರ್ಮರನ್ನು ‘ವಿಶೇಷ ಪ್ರತಿನಿಧಿ’ಯನ್ನಾಗಿ ನೇಮಿಸಿರುವ ಬಗ್ಗೆ ಪ್ರಸ್ತಾವಿಸಿದ ರಾವತ್, ಸರಕಾರ ನಿರ್ದಿಷ್ಟ ಉದ್ದೇಶವನ್ನಿಟ್ಟುಕೊಂಡು ವಿಶೇಷ ಪ್ರತಿನಿಧಿಯನ್ನು ನೇಮಿಸಿದೆ. ಸರಕಾರದ ಪ್ರತಿನಿಧಿಯಾಗಿ ಕಾಶ್ಮೀರದ ಜನರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಅರಿತುಕೊಂಡು , ಇದಕ್ಕೆ ರಾಜಕೀಯ ಮಟ್ಟದಲ್ಲಿ ಪರಿಹಾರ ಸಾಧ್ಯವಾಗಿಸುವ ಕಾರ್ಯವನ್ನು ಇವರು ನಿರ್ವಹಿಸುತ್ತಾರೆ ಎಂದು ಹೇಳಿದರು.
ಸೈನಿಕ ಕಾರ್ಯಾಚರಣೆ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸುವ ಪ್ರಕ್ರಿಯೆಯ ಒಂದು ಭಾಗವಾಗಿದೆ ಅಷ್ಟೇ. ಕಣಿವೆ ರಾಜ್ಯದಲ್ಲಿ ಹಿಂಸಾಚಾರ ನಡೆಸುತ್ತಿರುವ ಭಯೋತ್ಪಾದಕರನ್ನು ನಿಗ್ರಹಿಸುವುದು ಹಾಗೂ ಭಯೋತ್ಪಾದಕರ ಕೃತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಅತ್ತ ವಾಲುತ್ತಿರುವ ಜನತೆಯನ್ನು ತಡೆದು ಅವರನ್ನು ಸರಿದಾರಿಗೆ ತರುವುದು ನಮ್ಮ ಪ್ರಧಾನ ಉದ್ದೇಶವಾಗಿದೆ . ಭಯೋತ್ಪಾದಕರ ಮೇಲೆ ಒತ್ತಡ ಹೇರುವ ಜೊತೆಗೇ, ಜನರನ್ನು ತಲುಪುವ ಕಾರ್ಯವನ್ನೂ ಸೇನೆ ಮಾಡುತ್ತಿದೆ ಎಂದ ರಾವತ್, ಗಡಿಯುದ್ದಕ್ಕೂ ಒಳನುಸುಳುವ ಪ್ರಕ್ರಿಯೆ ನಿರಂತರವಾಗಿ ಸಾಗುತ್ತಿರುವ ಕಾರಣ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಅತಿ ಆತ್ಮವಿಶ್ವಾಸದಿಂದ ಹೇಳಿಕೊಳ್ಳುವ ಸಮಯ ಇದಲ್ಲ ಎಂದು ತಿಳಿಸಿದ್ದಾರೆ.