ಮಂಗಳೂರು: ಶಾಸಕ ಜೆ.ಆರ್.ಲೋಬೊ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ
ಮಂಗಳೂರು, ಜ.15: ಶಾಸಕ ಜೆ.ಆರ್.ಲೋಬೊ ನಂದಿಗುಡ್ಡೆ ರುದ್ರಭೂಮಿ ಮತ್ತು ಕಂಕನಾಡಿ ಹಳೆ ಪೋಸ್ಟ್ ಆಫೀಸ್ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.
ರುದ್ರಭೂಮಿಯ ಕಾಮಗಾರಿ ಪರಿಶೀಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಹಳೆಯದಾದ ಈ ರುದ್ರಭೂಮಿಯಲ್ಲಿ ಮೃತದೇಹಗಳನ್ನು ಸುಡಲು ಕೇವಲ ನಾಲ್ಕು ಸಿಲಿಕಾನ್ ಟ್ರೇಗಳಿದ್ದವು. ಮೃತದೇಹಗಳ ಸಂಖ್ಯೆ ಅಧಿಕವಾದಾಗ ಪ್ರಯಾಸಕರ ಸಂದರ್ಭ ಒದಗಿ ಬರುತ್ತಿತ್ತು. 50 ಲಕ್ಷ ರೂ. ಅನುದಾನ ಈಗಾಗಲೇ 14ನೆ ಹಣಕಾಸಿನ ಯೋಜನೆಯಿಂದ ಮಂಜೂರಾಗಿದ್ದು, ಕಾಮಗಾರಿ ಪ್ರಾರಂಭಿಸಲಾಗಿದೆ. 4 ಹೊಸ ಸಿಲಿಕಾನ್ ಟ್ರೇಗಳನ್ನು ನಿರ್ಮಿಸಲಾಗುತ್ತಿದ್ದು, ಅದರ ಮೇಲೆ ಶೆಡ್ ಕಟ್ಟಲಾಗಿದೆ. ಅಲ್ಲದೆ 2 ಹಳೆಯ ಸಿಲಿಕಾನ್ ಟ್ರೇಗಳನ್ನು ದುರಸ್ತಿಗೊಳಿಸಲಾಗುತ್ತದೆ ಎಂದರು.
ರುದ್ರಭೂಮಿಯ ಬಳಿ ಇಂಟರ್ಲಾಕ್ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಹೈಮಾಸ್ಕ್ ಲೈಟ್ಗಳನ್ನು ಅಳವಡಿಸಲಾಗುವುದು. ಸಾರ್ವಜನಿಕ ನಿರೀಕ್ಷೆಯಂತೆ ಕಾಮಗಾರಿಯನ್ನು ನಡೆಸಲಾಗಿದೆ. ಈಗಾಗಲೇ 20 ಲಕ್ಷ ರೂ. ವೆಚ್ಚದಲ್ಲಿ ರುದ್ರಭೂಮಿಯ ಸುತ್ತಲೂ ಆವರಣ ಗೋಡೆಯನ್ನು ನಿರ್ಮಿಸಲಾಗಿದೆ. ಕಟ್ಟಿಗೆಯನ್ನು ಸಂಗ್ರಹಿಸಲು ಶೆಡ್ ನಿರ್ಮಿಸಲಾಗಿದೆ. ನೀರಿನ ಬವಣೆಯನ್ನು ದೂರ ಮಾಡಲು ಬೋರ್ವೆಲ್ ವ್ಯವಸ್ಥೆಯನ್ನು ಮಾಡುವ ಉದ್ದೇಶವಿದೆ ಎಂದು ಜೆ.ಆರ್.ಲೋಬೊ ಹೇಳಿದರು.
ಕಂಕನಾಡಿ ಹಳೆ ಪೋಸ್ಟ್ ಆಫೀಸ್ ರಸ್ತೆಯ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು ಮುಖ್ಯಮಂತ್ರಿಯ ಅನುದಾನದ ನಿಧಿಯಿಂದ 2.70 ಕೋ.ರೂ. ವೆಚ್ಚದ ಕಾಂಕ್ರಿಟೀಕರಣಕ್ಕೆ ಹಾಗೂ 70 ಲಕ್ಷ ರೂ. ಒಳಚರಂಡಿಯ ಕಾಮಗಾರಿಗೆ ಮಂಜೂರಾಗಿದೆ. ಒಳಚರಂಡಿಯ ಕಾಮಗಾರಿ ಮುಗಿದೊಡನೆ ರಸ್ತೆ ಕಾಂಕ್ರಿಟೀಕರಣದ ಕಾಮಗಾರಿಯನ್ನು ಆರಂಭಿಸಲಾಗುವುದು. 700 ಮೀ.ಉದ್ದ ಮತ್ತು 6 ಮೀ. ಅಗಲಕ್ಕೆ ಕಾಂಕ್ರೀಟಿಕರಣ ಮಾಡಲಾಗುವುದು ಎಂದರು.
ಈ ಸಂದರ್ಭ ಮನಪಾ ಸ್ಥಾಯಿ ಸಮಿತಿಯ ಅಧ್ಯಕ್ಷ ಅಬ್ದುಲ್ ರವೂಫ್, ಕಾರ್ಪೋರೇಟರ್ಗಳಾದ ಶೈಲಜಾ,ಅಪ್ಪಿ, ಆಶಾ ಡಿಸಿಲ್ವಾ, ಪ್ರೇಮಾನಂದ ಶೆಟ್ಟಿ, ರತಿಕಲಾ, ಕವಿತಾ ವಾಸು, ಪ್ರವೀಣ್ ಚಂದ್ರ ಆಳ್ವ, ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ. ಸುಧೀರ್, ಮೆಸ್ಕಾಂ ನಿರ್ದೇಶಕ ಸದಾಶಿವ ಅಮೀೀನ್, ಜಯಂತ ಪೂಜಾರಿ, ಸಂದೀಪ್, ರಮಾನಂದ ಪೂಜಾರಿ, ರಂಜನ್ ಕುಮಾರ್, ಮುಹಮದ್ ನವಾಜ್, ವಿದ್ಯಾ, ಕೃತಿನ್ ಕುಮಾರ್, ಶಶಿಧರ ಕೊಟ್ಟಾರಿ, ಶೇಖರ ಜಪ್ಪಿನಮೊಗರು, ವೆಲೆನ್ಸಿಯಾ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಹೇಮಂತ್ ಗರೋಡಿ, ಮಾಜಿ ಕಾರ್ಪೋರೇಟರ್ ಅಝೀಝ್, ಗುತ್ತಿಗೆದಾರ ಎಂ.ಜಿ. ಹುಸೈನ್, ಪಾಲಿಕೆಯ ಉಪಆಯುಕ್ತ ಲಿಂಗೇಗೌಡ, ಅಭಿಯಂತರ ಗಣಪತಿ ಉಪಸ್ಥಿತರಿದ್ದರು.







