ಉಡುಪಿ: ಸಂಭ್ರಮದೊಂದಿಗೆ ನಡೆದ ಚೂರ್ಣೋತ್ಸವ

ಉಡುಪಿ, ಜ.15: ಉಡುಪಿ ಶ್ರೀಕೃಷ್ಣ ಮಠದ ವಾರ್ಷಿಕ ಜಾತ್ರೋತ್ಸವ ಎಂದೇ ಕರೆಯಲಾಗುವ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಕಳೆದೊಂದು ವಾರದಿಂದ ನಡೆದ ಸಪ್ತೋತ್ಸವ, ಇಂದು ಹಗಲಿನ ರಥೋತ್ಸವ ‘ಚೂರ್ಣೋತ್ಸವ’ದೊಂದಿಗೆ ಸಂಪನ್ನಗೊಂಡಿತು.
ದ್ವೈತಮತ, ಮಧ್ವ ಸಿದ್ಧಾಂತದ ಪ್ರತಿಪಾದಕರಾದ ಶ್ರೀಮಧ್ವಾಚಾರ್ಯರು ಸುಮಾರು 750 ವರ್ಷಗಳ ಹಿಂದೆ ಮಕರ ಸಂಕ್ರಮಣದ ದಿನದಂದೇ ಉಡುಪಿಯಲ್ಲಿ ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿದರೆಂಬ ಪ್ರತೀತಿ ಇರುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಇಲ್ಲಿ ಒಂದು ವಾರ ಕಾಲ ಸಪ್ತೋತ್ಸವವನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯ (ಜ.14) ದಿನದಂದು ರಾತ್ರಿ ಮೂರು ತೇರುಗಳ ಉತ್ಸವ ನಡೆದು ಮರುದಿನ ಹಗಲು ರಥೋತ್ಸವದೊಂದಿಗೆ ಇದು ಮುಕ್ತಾಯಗೊಳ್ಳುತ್ತದೆ.
ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅಲ್ಲದೇ, ಇದೇ ಜ.18ರಂದು ಅವರಿಂದ ಮುಂದಿನ ಎರಡು ವರ್ಷಗಳಿಗೆ ಶ್ರೀಕೃಷ್ಣ ಪೂಜಾ ಕೈಂಕರ್ಯವನ್ನು ಪಡೆಯಲಿರುವ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು, ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು, ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಕಿರಿಯ ಯತಿಗಳಾದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು, ಶೀರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರು, ಸೋದೆ ಮಠದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ಇಂದಿನ ಚೂರ್ಣೋತ್ಸವದಲ್ಲಿ ಪಾಲ್ಗೊಂಡರು. ಕೇವಲ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಇದರಲ್ಲಿ ಭಾಗವಹಿಸಿರಲಿಲ್ಲ.
ಇವರೊಂದಿಗೆ ಮಂತ್ರಾಲಯ ಮಠದ ಶ್ರೀವಿಬುಧೇಂದ್ರತೀರ್ಥ ಶ್ರೀಪಾದರು, ಪ್ರಯಾಗ ಮಠದ ಶ್ರೀವಿದ್ಯಾತ್ಮತೀರ್ಥ ಶ್ರೀಪಾದರು, ಬೆಂಗಳೂರು ರಾಮೋಹಳ್ಳಿಯ ಶ್ರೀವಿಶ್ವಭೂಷಣ ಶ್ರೀಪಾದರು ಸಹ ಇಂದಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಪೂಜೆಯ ಬಳಿಕ ಶ್ರೀಕೃಷ್ಣ-ಮುಖ್ಯಪ್ರಾಣ ದೇವರನ್ನು ಚಿನ್ನದ ಪಾಲಕ್ಕಿಯಲ್ಲಿ ತಂದು ಸ್ವಾಗತ ಗೋಪುರದ ಎದುರು ನಿಲ್ಲಿಸಲಾದ ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಎಲ್ಲಾ ಸ್ವಾಮೀಜಿಗಳು ರಥವನ್ನೇರಿ ಮಂಗಳಾರತಿ ಬೆಳಗಿದ ಬಳಿಕ ರಥವನ್ನು ರಥಬೀದಿಗೆ ಒಂದು ಸುತ್ತು ಪ್ರದಕ್ಷಿಣೆ ತರಲಾಯಿತು.
ಉತ್ಸವದ ಬಳಿಕ ಶ್ರೀಕೃಷ್ಣ-ಮುಖ್ಯಪ್ರಾಣ ಮೂರ್ತಿಗಳನ್ನು ಮಠಕ್ಕೆ ತಂದು ಪೂಜಿಸಿ ದೇವರಿಗೆ ಸಮರ್ಪಿತ ಓಕುಳಿಯನ್ನು ಎಲ್ಲಾ ಯತಿಗಳೊಂದಿಗೆ ಭಕ್ತರು ಹಚ್ಚಿಕೊಂಡು ಮಧ್ವ ಸರೋವರದಲ್ಲಿ ಅವಭೃತ ಸ್ನಾನ ಮಾಡಿದರು. ನೂರಾರು ಮಂದಿ ಭಕ್ತರು ಇದರಲ್ಲಿ ಪಾಲ್ಗೊಂಡರು. ಬಳಿಕ ಅನ್ನಸಂತಪರ್ಣೆಗಾಗಿ ಸಿದ್ಧಪಡಿಸಲಾದ ಅನ್ನದ ರಾಶಿಗೆ ಪಲ್ಲಪೂಜೆ ನಡೆಯಿತು. ಸಾವಿರಾರು ಮಂದಿ ಇಂದಿನ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.
ಚೂರ್ಣೋತ್ಸವದ ಪ್ರಯುಕ್ತ ಮಧ್ವಮಂಟಪದಲ್ಲಿ ಅಷ್ಟಮಠದ ಯತಿಗಳ ಉಪಸ್ಥಿತಿಯಲ್ಲಿ ಅಷ್ಟಾವಧಾನವೂ ನಡೆಯಿತು.
ಮೂರು ತೇರು ಉತ್ಸವ:ಮಧ್ವಾಚಾರ್ಯರು ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ ದಿನವೆಂದು ಹೇಳಲಾದ ಮಕರಸಂಕ್ರಮಣ ದಿನದಂದು ರಾತ್ರಿ ರಥಬೀದಿಯಲ್ಲಿ ಮೂರು ತೇರು ಉತ್ಸವ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.
ಕಳೆದ ಜ.9ರಂದು ಸಪ್ತೋತ್ಸವ ಪ್ರಾರಂಭಗೊಂಡಿದ್ದು, ಭಾನುವಾರ ಆರನೇ ದಿನ ಮಕರಸಂಕ್ರಾಂತಿಯಂದು ಮೂರು ತೇರು ಉತ್ಸವ, ಇಂದು ಕೊನೆಯ ದಿನವಾದ ಇಂದು ಬೆಳಗ್ಗೆ ಚೂರ್ಣೋತ್ಸವ ನಡೆದವು. ಈ ಎರಡೂ ಸಂದರ್ಭಗಳಲ್ಲಿ ಮಾತ್ರ ಉಡುಪಿಯಲ್ಲಿ ಬ್ರಹ್ಮರಥೋತ್ಸವವನ್ನು ಎಳೆಯಲಾಗುತ್ತದೆ.
ನಿನ್ನೆ ರಾತ್ರಿ ಚಿನ್ನದ ಪಲ್ಲಕ್ಕಿಯಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣರನ್ನು ತಂದು ರಥಗಳಲ್ಲಿ ಕುಳ್ಳಿರಿಸಲಾಯಿತು. ಚಿಕ್ಕ ರಥದಲ್ಲಿ ಮುಖ್ಯಪ್ರಾಣ, ಮಧ್ಯ ರಥದಲ್ಲಿ ಅನಂತೇಶ್ವರ ಮತ್ತು ಚಂದ್ರವೌಳೀಶ್ವರ ಹಾಗೂ ಬ್ರಹ್ಮರಥದಲ್ಲಿ ಕೃಷ್ಣನನ್ನು ಕುಳ್ಳಿರಿಸಿ ರಥಬೀದಿಗೆ ಒಂದು ಸುತ್ತು ಬರಲಾಯಿತು. ಈ ಮೂರು ರಥಗಳು ಪುತ್ತಿಗೆ ಮಠದ ಎದುರು ಒಂದು ಕಡೆಗೆ ಒಂದು ಸರಳರೇಖೆಯಲ್ಲಿ ನಿಂತಾಗ ಅಟ ಮಠಾಧೀಶರು ಪೂಜೆ ಸಲ್ಲಿಸುವುದು ಇಡೀ ಉತ್ಸವದ ಪ್ರಮುಖ ಆಕರ್ಷಣೆ. ಈ ಸಂದರ್ಭದಲ್ಲಿ ಚಿತ್ತಾಕರ್ಷಕ ಸಿಡಿಮದ್ದುಗಳ ಪ್ರದರ್ಶನವೂ ನಡೆಯಿತು.







