ಜ.16ರಂದು ಟಿ.ಪಿ.ಅಶೋಕರ ‘ಕೃತಿ ಜಗತ್ತು’ ಬಿಡುಗಡೆ

ಉಡುಪಿ, ಜ.15: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಲೇಖಕ, ವಿಮರ್ಶಕ ಪ್ರೊ.ಟಿ.ಪಿ.ಅಶೋಕ್ ಅವರ ‘ಕೃತಿ ಜಗತ್ತು’ ಪುಸ್ತಕ ನಾಳೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿಡುಗಡೆಗೊಳ್ಳಲಿದೆ.
ಮಣಿಪಾಲ ಯುನಿವರ್ಸಲ್ ಪ್ರೆಸ್ನ 119ನೇ ಪುಸ್ತಕವಾಗಿ ಈ ಕೃತಿ ಬೆಳಗ್ಗೆ 10 ಗಂಟೆಗೆ ಬಿಡುಗಡೆಗೊಳ್ಳಲಿದೆ. ಮಾಹೆ ಡೀಮ್ಡ್ ವಿವಿಯ ಕುಲಪತಿಗಳಾದ ಡಾ.ಎಚ್.ವಿನೋದ್ ಭಟ್ ಅವರ ಅಧ್ಯಕ್ಷತೆಯಲ್ಲಿ ಖ್ಯಾತ ಸಾಹಿತಿ ವೈದೇಹಿ ಅವರು ಈ ಕೃತಿಯನ್ನು ಬಿಡುಗಡೆಗೊಳಿಸುವರು.
ಇತ್ತೀಚೆಗೆ ತನ್ನ ‘ಕಥನ ಭಾರತಿ’ ಕೃತಿಗೆ 2017ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಪ್ರೊ.ಅಶೋಕ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಜಿ.ರಾಜಶೇಖರ್ ಹಾಗೂ ಪ್ರೊ.ನಾಗರಾಜ್ ರಾವ್ ಅವರು ಅಭಿನಂದನಾ ಭಾಷಣ ಮಾಡಲಿದ್ದಾರೆ.
ಪ್ರೊ.ಟಿ.ಪಿ.ಅಶೋಕ್ ಅವರ ಕೃತಿ ಜಗತ್ತು ವಿವಿಧ ದೇಶ, ಭಾಷೆ, ಆಚಾರ, ಸಂಸ್ಕೃತಿಗಳನ್ನು ಪರಿಚಯಿಸಿ, ವಿಮರ್ಶಿಸಿ, ವಿಶ್ಲೇಷಿಸುವ ಒಟ್ಟು 26 ಲೇಖನಗಳನ್ನು ಒಳಗೊಂಡಿದೆ. ಸಮಗ್ರ ವಿಶ್ವಸಾಹಿತ್ಯದ ಪರಿಚಯ ಈ ಕೃತಿಯ ಮೂಲಕ ಓದುಗನಿಗೆ ಆಗುತ್ತದೆ ಎಂದು ಮಣಿಪಾಲ ಯುನಿವರ್ಸಲ್ ಪ್ರೆಸ್ನ ಪ್ರಕಟಣೆ ತಿಳಿಸಿದೆ.





