ತೊಗಾಡಿಯಾರನ್ನು ಭೇಟಿಯಾದ ಹಾರ್ದಿಕ್ ಪಟೇಲ್, ಕಾಂಗ್ರೆಸ್ ನ ಅರ್ಜುನ್ ಮೋಧ್ವಾಡಿಯಾ
ಅಹ್ಮದಾಬಾದ್, ಜ.16: ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರವೀಣ್ ತೊಗಾಡಿಯಾ ನಾಪತ್ತೆ ಪ್ರಕರಣವು ನಾಟಕೀಯ ತಿರುವು ಪಡೆದುಕೊಂಡ ನಂತರ ಇಂದು ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಹಾಗು ಕಾಂಗ್ರೆಸ್ ನಾಯಕ ಅರ್ಜುನ್ ಮೋಧ್ವಾಡಿಯಾ ತೊಗಾಡಿಯಾರನ್ನು ಇಂದು ಆಸ್ಪತ್ರೆಯಲ್ಲಿ ಭೇಟಿಯಾಗಿದ್ದಾರೆ.
ಇದೊಂದು ಸೌಜನ್ಯದ ಭೇಟಿಯಾಗಿತ್ತು ಎಂದು ಕಾಂಗ್ರೆಸ್ ಹೇಳಿದೆ. ವಿವಿಧ ಪ್ರಕರಣಗಳಲ್ಲಿ ತನ್ನನ್ನು ಸಿಲುಕಿಸಲು ಹಾಗು ಎನ್ ಕೌಂಟರ್ ನಡೆಸಲು ಪಿತೂರಿ ನಡೆಯುತ್ತಿದೆ ಎಂದು ಸುದ್ದಿಗೋಷ್ಟಿಯಲ್ಲಿ ತೊಗಾಡಿಯಾ ಆರೋಪಿಸಿದ್ದರು,
ರಾಮಮಂದಿರ, ರೈತರ ಕಲ್ಯಾಣ ಯೋಜನೆಗಳು ಹಾಗು ಗೋಹತ್ಯೆ ವಿರುದ್ಧದ ಕಾನೂನಿನ ಬಗ್ಗೆ ತಾನು ಮಾತನಾಡದಂತೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದ ತೊಗಾಡಿಯಾ ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟಿದ್ದರು.
ಗುಜರಾತ್ ಹಾಗು ರಾಜಸ್ಥಾನ ಪೊಲೀಸರು ತನ್ನ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದವರು ಆರೋಪಿಸಿದ್ದರು. ಈ ಎರಡೂ ರಾಜ್ಯಗಳಲ್ಲೂ ಬಿಜೆಪಿ ಆಡಳಿತವಿದೆ.
Next Story