ಸಂಪ್ರದಾಯಗಳಿಗಿಂತ ಮನುಷ್ಯ ಸಂಬಂಧಗಳು ಮುಖ್ಯ: ಸಾಹಿತಿ ಎನ್. ನಾಗಪ್ಪ
![ಸಂಪ್ರದಾಯಗಳಿಗಿಂತ ಮನುಷ್ಯ ಸಂಬಂಧಗಳು ಮುಖ್ಯ: ಸಾಹಿತಿ ಎನ್. ನಾಗಪ್ಪ ಸಂಪ್ರದಾಯಗಳಿಗಿಂತ ಮನುಷ್ಯ ಸಂಬಂಧಗಳು ಮುಖ್ಯ: ಸಾಹಿತಿ ಎನ್. ನಾಗಪ್ಪ](https://www.varthabharati.in/sites/default/files/images/articles/2018/01/16/IMG-20180116-WA0019.jpg)
ತುಮಕೂರು.ಜ.16:ಸಮಾಜದಲ್ಲಿ ಮಾನವ ಸಂಬಂಧಗಳನ್ನು ಒಡೆಯುವ ಮನಸ್ಸುಗಳು ಹೆಚ್ಚಾಗುತ್ತಿವೆ ಎಂದು ಸಾಹಿತಿ ಎನ್.ನಾಗಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ತುಮಕೂರಿನ ಕುವೆಂಪು ನಗರದ ಮುಖ್ಯ ವೃತ್ತದ ಸಮೀಪವೇ ಇರುವ ಓ.ಕೆ.ಹೇರ್ಡ್ರೆಸಸ್ನಲ್ಲಿ ಸಾಹಿತಿ ಈಚನೂರು ಇಸ್ಮಾಯಿಲ್ ಅವರು ರಚಿಸಿರುವ “ಇದೇನು ನೀವಿಲ್ಲಿ”, “ಇಬ್ಲಾರು”, “ವಿಷಾದದ ಎದುರು ಖಿನ್ನತೆಯ ಮುಖಾಮುಖಿ” ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡುತಿದ್ದ ಅವರು, ಜೀವನದಲ್ಲಿ ಸಂಪ್ರದಾಯಗಳಿಗಿಂತ ಮಾನವ ಸಂಬಂಧಗಳೇ ಮುಖ್ಯವಾಗುತ್ತವೆ. ಹೀಗಾಗಿ ಇಂತಹ ಸಂಬಂಧಗಳು ವೃದ್ಧಿಯಾಗಬೇಕು ಎಂದು ಹೇಳಿದರು.
ತೆಲುಗು ಸಾಹಿತ್ಯದ ದಿಗ್ಗಜರಾದ ಶ್ರೀ ಗದ್ದರ್ ಸೇರಿದಂತೆ ಜನಚಳವಳಿಯ ಪ್ರಮುಖರು ವೇಶ್ಯೆಗೆ ಸಂಬಂಧಿಸಿದ ಪುಸ್ತಕವನ್ನು ವೇಶ್ಯೆಯಿಂದಲೇ ಬಿಡುಗಡೆ ಮಾಡಿಸಿ ಸಂಪ್ರದಾಯವನ್ನು ಮುರಿದರು. ಅದೇ ರೀತಿ ಚಿಕ್ಕನಾಯಕನಹಳ್ಳಿಯಲ್ಲಿ ಸುಪ್ರೀಂ ಸುಬ್ಬಣ್ಣ ಅವರ ಸೆಲೂನ್ನಲ್ಲಿ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮಗಳು ನಡೆದಿವೆ. ತುಮಕೂರಿನ ಸೆಲೂನ್ನಲ್ಲಿ ಪುಸ್ತಕಗಳನ್ನು ಬಿಡುಗಡೆಗೊಳಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಪುಸ್ತಕ ಪ್ರೀತಿ,ಓದುವ ಪ್ರೀತಿ ಬಹು ಮುಖ್ಯ. ಮಹಾನ್ ಸಾಹಿತಿಗಳ ಕೃತಿಗಳು ಸೇರಿದಂತೆ ಒಳ್ಳೆಯ ಸಾಹಿತ್ಯವನ್ನು ಓದುವುದರಿಂದ ಮನುಷ್ಯನಲ್ಲಿ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿ ಬದಲಾಗುವಂತೆ ಮಾಡುವ ಶಕ್ತಿ ಇದೆ. ಗ್ರಾಮೀಣ ಪ್ರದೇಶದ ಜನರು ಹೀಗೆ ಓದುವ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ಈಚನೂರು ಇಸ್ಮಾಯಿಲ್ ಕೃತಿಗಳಲ್ಲಿ ಇಂತಹ ಒಳ್ಳೆಯ ಅಂಶಗಳಿವೆ ಎಂದು ತಿಳಿಸಿದರು.
ಕನ್ನಡ ಉಪನ್ಯಾಸಕ ವೆಂಕಟರೆಡ್ಡಿರಾಮರೆಡ್ಡಿ ಕೃತಿಗಳ ಕುರಿತು ಮಾತನಾಡಿ,ಇತಿಹಾಸವನ್ನು ಮುರಿದು ಕಟ್ಟಬೇಕು.ಇಂತಹ ಕೆಲಸ ಹಿಂದಿನಿಂದಲೂ ನಿರಂತವಾಗಿ ನಡೆದುಕೊಂಡು ಬಂದಿದೆ. ಬುದ್ದ, ಬಸವ ಸೇರಿದಂತೆ ಹಲವರು ಇತಿಹಾಸದಲ್ಲಿ ಹೊಸ ಚಿಂತನೆಗಳನ್ನು ಹುಟ್ಟುಹಾಕಿದ್ದಾರೆ.ಈಚನೂರು ಇಸ್ಮಾಯಿಲ್ ನಾಟಕಗಳಲ್ಲಿ ಪ್ರೀತಿ, ಭ್ರಾತೃತ್ವ, ಸಹಬಾಳ್ವೆ ಪ್ರಮುಖ ಆಶಯವಾಗಿದೆ. ಆದರೆ ಸಂಭಾಷಣೆ ಸುದೀರ್ಘವಾಗಿದ್ದು,ಇವುಗಳನ್ನು ರಂಗಕ್ಕೆ ಅಳವಡಿಸಿದರೆ ಸಮಸ್ಯೆಗಳು ಎದುರಾಗುತ್ತವೆ. ಸಂಭಾಷಣೆ ಸುದೀರ್ಘವಾಗಿದ್ದು ನಟರು ಹೇಳುವುದಕ್ಕೆ ಕಷ್ಟವಾಗುತ್ತದೆ. ಆದ್ದರಿಂದ ಸಂಭಾಷಣೆ ಚಿಕ್ಕದಾಗಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಗುಂಡೂರ ಮಾತನಾಡಿ,ವೃತ್ತಿಯಲ್ಲಿ ಸಾಕಷ್ಟು ಅನುಭವ ಇರಬೇಕು. ಆ ಅನುಭವ ಕೆಲಸದಲ್ಲಿ ವ್ಯಕ್ತವಾಗಬೇಕು. ಅದು ಮನುಷ್ಯನನ್ನು ದೊಡ್ಡ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮೂರು ಕೃತಿಗಳ ಲೇಖಕ ಈಚನೂರು ಇಸ್ಮಾಯಿಲ್ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಓ.ಕೆ.ಹೇರ್ಡ್ರೆಸಸ್ನ ಓ.ಕೆ.ರಾಜು, ರಂಗಭೂಮಿ ಹಿರಿಯ ಕಲಾವಿದ ಗುಬ್ಬಿ ಪ್ರಕಾಶ್,ನಿವೃತ್ತ ಪ್ರಾಂಶುಪಾಲ ಜಯರಾಮ್, ನಾರಾಯಣಪ್ಪ ಸಮುದಾಯದ ಜಿಲ್ಲಾ ಕಾರ್ಯದರ್ಶಿ ಕೆ.ಈ.ಸಿದ್ದಯ್ಯ ಉಪಸ್ಥಿತರಿದ್ದರು.