ಪುತ್ತೂರು-ಮಂಗಳೂರು ವಿಭಾಗಕ್ಕೆ ಪ್ರತ್ಯೇಕ ನೇಮಕ: ಸಾರಿಗೆ ಸಚಿವ ಎಚ್.ಎಂ.ರೇವಣ್ಣ
ಬೆಂಗಳೂರು, ಜ. 17: ಕರಾವಳಿ ಭಾಗದ ಪುತ್ತೂರು ಮತ್ತು ಮಂಗಳೂರು ಸಾರಿಗೆ ವಿಭಾಗಕ್ಕೆ ಪ್ರತ್ಯೇಕವಾಗಿ ಚಾಲಕ ಮತ್ತು ನಿರ್ವಾಹಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ತಿಳಿಸಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರು ಮತ್ತು ಮಂಗಳೂರು ವಿಭಾಗಕ್ಕೆ ಸ್ಥಳೀಯರು ಯಾರೂ ಬರುತ್ತಿಲ್ಲ. ಹೀಗಾಗಿ ಉ.ಕ., ಹೈ.ಕ.ಭಾಗದವರನ್ನು ನಿಯೋಜನೆ ಮಾಡಲಾಗುತ್ತಿದೆ. ಹೀಗಾಗಿ ಅವರನ್ನು ಬೇರೆ ನಿಗಮಗಳಿಗೆ ವರ್ಗಾವಣೆ ಮಾಡಲು ಸಮಸ್ಯೆಯಾಗುತ್ತಿದೆ ಎಂದರು.
ಅಂತರ ನಿಗಮ ವರ್ಗಾವಣೆಯಡಿ ಸಿಬ್ಬಂದಿ ವರ್ಗಾವಣೆ ನಡೆಯುತ್ತಿದ್ದು, ಸಿಬ್ಬಂದಿ ಬಯಸಿದ ಕಡೆಗೆ ವರ್ಗಾವಣೆ ಸಿಗುತ್ತಿಲ್ಲ. ಆದರೆ, ಸಿಬ್ಬಂದಿಗೆ ಅನಾನುಕೂಲ ಆಗದಂತೆ ಎಚ್ಚರ ವಹಿಸಲಾಗುವುದು ಎಂದ ಅವರು, ಪುತ್ತೂರು ವಿಭಾಗದಿಂದ ವರ್ಗಾವಣೆ ಮಾಡಿದ್ದ 220 ಮಂದಿಯನ್ನು ದೈನಂದಿನ ಕಾರ್ಯಾಚರಣೆಗೆ ತೊಂದರೆಯಾಗದಂತೆ ಹಂತ-ಹಂತವಾಗಿ ಬಿಡುಗಡೆಗೊಳಿಸಲಾಗುವುದು ಎಂದರು.
ಪುತ್ತೂರು ಮತ್ತು ಮಂಗಳೂರು ವ್ಯಾಪ್ತಿಯಲ್ಲಿ ಸ್ಥಳೀಯ ಸಾರಿಗೆ ಸಂಸ್ಥೆಗಳಿಂದ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಹೆಚ್ಚಿನ ವೇತನ, ಭತ್ತೆ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಗೆ ಚಾಲಕ ಮತ್ತು ನಿರ್ವಾಹಕರು ಬರುತ್ತಿಲ್ಲ. ಈ ಬಗ್ಗೆ ಶೀಘ್ರದಲ್ಲೆ ತಾನು ಖುದ್ದು ಪರಿಶೀಲನೆ ನಡೆಸಲು ನಿರ್ಧರಿಸಿದ್ದೇನೆ ಎಂದರು.









