ತನ್ನ ವಿಲಾಸಿ ಜೀವನ, ತೆರಿಗೆ ವಂಚನೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಪತ್ರಕರ್ತರ ಮೇಲೆ ಉರಿದುಬಿದ್ದ ಬಾಬಾ ರಾಮ್ ದೇವ್
ವಿಡಿಯೋ ವೈರಲ್
ಹೊಸದಿಲ್ಲಿ, ಜ.18: ಸದಾ ದೇಶೀಯ ಉತ್ಪನ್ನಗಳ ಬಗ್ಗೆ ಮಾತನಾಡುವ ಯೋಗಗುರು ಬಾಬಾ ರಾಮ್ ದೇವ್ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ತಮ್ಮ ವಿಲಾಸಿ ಜೀವನ ಹಾಗು ತೆರಿಗೆ ವಂಚನೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ಕೋಪಗೊಂಡ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದೆ.
ಈ ಬಗ್ಗೆ jantakareporter.com ವರದಿ ಪ್ರಕಟಿಸಿದೆ. ಹಿಂದಿ ಸುದ್ದಿ ವಾಹಿನಿ ಆಜ್ ತಕ್ ಇತ್ತೀಚೆಗೆ ಸಂದರ್ಶನ ನಡೆಸಿತ್ತು. ಮೂವರು ಪತ್ರಕರ್ತರು ಯೋಗಗುರುವಿನ ಸಂದರ್ಶನ ನಡೆಸಿದ್ದರು.
ವಿಲಾಸಿ ಕಾರುಗಳಲ್ಲಿ, ವಿಮಾನಗಳಲ್ಲಿ ಸಂಚರಿಸುವ ನೀವು ‘ಸ್ವದೇಶಿ’ಯ ಬಗ್ಗೆ ಹೇಗೆ ಮಾತನಾಡುತ್ತೀರಿ?, ಇಷ್ಟು ಬೇಗ ನೀವು ಇಷ್ಟೊಂದು ಸಂಪತ್ತನ್ನು ಗಳಿಸಿದ್ದು ಹೇಗೆ?, ತೆರಿಗೆ ವಂಚಿಸಲು ಟ್ರಸ್ಟ್ ಒಂದನ್ನು ಸ್ಥಾಪಿಸಿದ್ದೀರೇ” ಎಂದು ಸಂದರ್ಶನದಲ್ಲಿ ಪತ್ರಕರ್ತರು ಪ್ರಶ್ನಿಸಿದರು.
ಈ ಸಂದರ್ಭ ಕೋಪಗೊಂಡ ಬಾಬಾ ರಾಮ್ ದೇವ್.”ನೋಡಿ… ಇಂತಹ ಭ್ರಷ್ಟಾಚಾರದ ಆರೋಪಗಳನ್ನು ನೀವು ನನ್ನ ಮೇಲೆ ಹೊರಿಸಬಾರದು. ತೆರಿಗೆ ವಂಚನೆ ಬಗ್ಗೆ ನೀವು ನನ್ನ ಮೇಲೆ ಆರೋಪ ಹೊರಿಸಿದರೆ ನಾನದನ್ನು ಸಹಿಸುವುದಿಲ್ಲ. ನಾನು ವಿಲಾಸಿ ಕಾರುಗಳಲ್ಲಿ ಸಂಚರಿಸುವುದಿಲ್ಲ. ಪತ್ರಕರ್ತನಾಗಿದ್ದುಕೊಂಡು ನೀವು ರಾಜಕಾರಣಿಯ ಹಾಗೆ ಮಾತನಾಡಬಾರದು” ಎಂದರು,
ಯೋಗಗುರು ಬಾಬಾ ರಾಮ್ ದೇವ್ ಬಿಜೆಪಿ ಹಾಗು ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲಿಗರಾಗಿದ್ದಾರೆ. 2014ರ ಲೋಕಸಭೆ ಚುನಾವಣೆಯ ಸಂದರ್ಭವೂ ಅವರು ಬಿಜೆಪಿ ಪರ ಪ್ರಚಾರ ನಡೆಸಿದ್ದರು. ಆ ಸಂದರ್ಭ ರಾಮ್ ದೇವ್ ಮನಮೋಹನ್ ಸಿಂಗ್ ಸರಕಾರದ ವಿರುದ್ಧ ಹೊರಿಸಿದ್ದ ಭ್ರಷ್ಟಾಚಾರ ಆರೋಪಗಳಲ್ಲಿ ಬಹುತೇಕ ಸುಳ್ಳೆಂದು ಸಾಬೀತಾಗಿದೆ. ಅದಕ್ಕೆ ಸ್ಪಷ್ಟ ಉದಾಹರಣೆ ಇತ್ತೀಚಿಗಿನ 2ಜಿ ಹಗರಣದ ತೀರ್ಪು.