ಗಣಿ ಹಗರಣ ಎಸ್ಐಟಿ ತನಿಖೆಗೆ ಹಸ್ತಾಂತರದಲ್ಲಿ ರಾಜಕೀಯ ದುರುದ್ದೇಶ ಇಲ್ಲ: ಸಿಎಂ ಸ್ಪಷ್ಟನೆ
![ಗಣಿ ಹಗರಣ ಎಸ್ಐಟಿ ತನಿಖೆಗೆ ಹಸ್ತಾಂತರದಲ್ಲಿ ರಾಜಕೀಯ ದುರುದ್ದೇಶ ಇಲ್ಲ: ಸಿಎಂ ಸ್ಪಷ್ಟನೆ ಗಣಿ ಹಗರಣ ಎಸ್ಐಟಿ ತನಿಖೆಗೆ ಹಸ್ತಾಂತರದಲ್ಲಿ ರಾಜಕೀಯ ದುರುದ್ದೇಶ ಇಲ್ಲ: ಸಿಎಂ ಸ್ಪಷ್ಟನೆ](https://www.varthabharati.in/sites/default/files/images/articles/2018/01/18/fs.gif)
ಮೈಸೂರು,(ಸುತ್ತೂರು)ಜ.18: ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ತನಿಖೆ ಹಸ್ತಾಂತರದಲ್ಲಿ ರಾಜಕೀಯ ದುರುದ್ದೇಶ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಸುತ್ತೂರು ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಗುರುವಾರ ಸುತ್ತೂರು ಹೆಲಿಪ್ಯಾಡ್ ಗೆ ಬಂದಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮದವರೊಂದಿಗೆ ಮಾತನಾಡಿದರು.
ಗಣಿ ಹಗರಣ ಎಸ್ ಐ ಟಿ ತನಿಖೆಗೆ ಹಸ್ತಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಅವರು, ಹಗರಣದಲ್ಲಿ ಸಿಬಿಐ ಸಾಕ್ಷಾಧಾರ ಕೊರತೆಯ ನೆಪ ಒಡ್ಡಿ ಕೈಬಿಟ್ಟಿದ್ದರು. ಆದರೆ ಪ್ರಾಥಮಿಕ ವರದಿಯಲ್ಲಿ ಹಗರಣ ನಡೆದಿರುವುದು ಸಾಬೀತಾಗಿದೆ. ರಾಜ್ಯ ಸರ್ಕಾರದ ಸಚಿವ ಸಂಪುಟ ಉಪ ಸಮಿತಿ ವರದಿ ಆಧರಿಸಿ ಎಸ್ ಐ ಟಿ ತನಿಖೆಗೆ ವಹಿಸಲಾಗಿದೆ ಎಂದು ಸರ್ಕಾರದ ನಿರ್ಧಾರವನ್ನು ಅವರು ಸಮರ್ಥಿಸಿಕೊಂಡರು.
ಆರೋಪ ಹೊತ್ತವರಿಂದ ಇಂತಹ ಹೇಳಿಕೆ ಸಹಜ. ರೆಡ್ಡಿ ಸಹೋದರರನ್ನು ಹಗರಣದಿಂದ ಪಾರು ಮಾಡುವ ಉದ್ದೇಶ ಕೇಂದ್ರ ಸರ್ಕಾರಕ್ಕಿದೆ. ಹಾಗಾಗಿ ಸಿಬಿಐ ದುರ್ಬಳಕೆ ಮಾಡಿಕೊಂಡಿದೆ. ಯುಪಿಎ ಸರ್ಕಾರ ಇದ್ದಾಗ ಸಿಬಿಐ ಯನ್ನು ಚೋರ್ ಬಚಾವೋ ಎನ್ನುತ್ತಿದ್ದ ಬಿಜೆಪಿಯ ಅದೇ ನಾಯಕರಿಗೆ ಸಿ ಬಿ ಐ ಮೇಲೆ ದಿಢೀರ್ ವ್ಯಾಮೋಹ ಬಂದು ಬಿಟ್ಟಿದೆ. ಸಿಬಿಐ ಕಾನೂನಾತ್ಮಕ ತನಿಖೆ ಮಾಡದ ಕಾರಣ ರಾಜ್ಯ ಸರ್ಕಾರದಿಂದ ಎಸ್ಐಟಿ ತನಿಖೆಗೆ ಆದೇಶಿಸಿದ್ದೇವೆ ಎಂದರು.
ಈ ಸಂದರ್ಭ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಎಚ್.ಕೆ.ಪಾಟೀಲ್, ಡಾ.ಗೀತಾ ಮಹದೇವಪ್ರಸಾದ್, ಸಂಸದ ಧ್ರುವನಾರಾಯಣ್ ಸೇರಿದಂತೆ ಕಾಂಗ್ರೆಸ್ ನ ಹಲವರು ಮುಖ್ಯಮಂತ್ರಿಗಳ ಜೊತೆಗಿದ್ದರು. ಬಳಿಕ ತೆರೆದ ವಾಹನದಲ್ಲಿ ಸುತ್ತೂರು ಶ್ರೀಮಠಕ್ಕೆ ಜನರತ್ತ ಕೈಬೀಸುತ್ತಾ ಆಗಮಿಸಿದರು.