ತನ್ನ ಉಳಿವಿಗಾಗಿ ಕಾಂಗ್ರೆಸ್ನಿಂದ ಅಂಬೇಡ್ಕರ್ ಹೆಸರು ಬಳಕೆ: ಅನಂತ್ಕುಮಾರ್ ಹೆಗಡೆ
ಕಾಪುವಿನಲ್ಲಿ ಸಾಮಾಜಿಕ ಜಾಲತಾಣದ ಕ್ಯಾಂಪೇನ್ ಲಾಂಚ್

ಕಾಪು, ಜ. 18: ಅಂಬೇಡ್ಕರ್ ಅವರಿಗೆ ಚಿತ್ರಹಿಂಸೆ ಕೊಟ್ಟು ರಾಜಕೀಯವಾಗಿ ನಿರ್ನಾಮ ಮಾಡಲು ಪ್ರಯತ್ನಿಸಿದ ಕಾಂಗ್ರೆಸ್ ತನ್ನ ಉಳಿವಿಗೋಸ್ಕರ ಮುಖವಾಡ ಬದಲಿಸಿಕೊಂಡು ಕೊಂಡು ಅದೇ ಅಂಬೇಡ್ಕರ್ ಹೆಸರನ್ನು ಹೇಳಿಕೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದರು.
ಕಾಪುವಿನ ವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ಗುರುವಾರ ಕಾಪು ಬಿಜೆಪಿ ಸಾಮಾಜಿಕ ಜಾಲತಾಣದ ಕ್ಯಾಂಪೇನ್ ಲಾಂಚ್ ಕಾರ್ಯಕ್ರಮದವನ್ನು ಉದ್ಘಾಟಿಸಿ ಮಾತನಾಡಿದರು.
ಚುನಾವಣೆಗೆ ನಿಂತರೂ ಅವರನ್ನು ಸೋಲಿಸಿತು. ಈಗ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಅಂಬೇಡ್ಕರ್ ಹೆಸರು ಹೇಳಿಕೊಳ್ಳುತ್ತಿದೆ. ಜನರಿಗೆ ಹಳೆಯ ವರ್ತನೆಯ ನಾಟಕ ಪ್ರದರ್ಶನ ಮಾಡುತ್ತಿದೆ. ದೀನ ದಲಿತರು, ಹಿಂದುಳಿದವರು, ಬಡವರ ಪರ ಎಂದು ಹೇಳಿಕೊಳ್ಳುತ್ತಿದೆ. ಇತಿಹಾಸದಲ್ಲಿ ಹುದುಗಿ ಹೋಗಿರುವ ಸತ್ಯವನ್ನು ಬಿಚ್ಚಿಡಲಿಕ್ಕೆ ಹೋದರೆ ಈ ದೇಶದಲ್ಲಿ ಕಾಂಗ್ರೆಸ್ ಒಂದೇ ಒಂದು ಓಟು ಪಡೆಯಲು ಸಾಧ್ಯವಿಲ್ಲ. ರಾಜಕಾರಣ ಹೆಸರಲ್ಲಿ ಎಷ್ಟು ಅನ್ಯಾಯ ಮಾಡಬೇಕೋ ಅದನ್ನು ಕಾಂಗ್ರೆಸ್ ಮಾಡಿದೆ ಎಂದರು.
ಸ್ವಾತಂತ್ರ್ಯದ ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ತನ್ನನ್ನು ಹಾಳು ಮಾಡುವುದರ ಜೊತೆಗೆ ದೇಶ ಹಾಳು ಮಾಡುತ್ತೆ ಎಂಬುದನ್ನು ಮೊದಲೇ ಅರಿತಿದ್ದ ಗಾಂಧೀಜಿ, ಕಾಂಗ್ರೆಸ್ ವಿಸರ್ಜನೆ ಮಾಡಲು ಹೇಳಿದ್ದರು. ನೆಹರು ಸಂತಾನ ಹೇಗೆ ನಡೆದುಕೊಳ್ಳುತ್ತೆ ಎಂಬುದು ಗಾಂಧೀಜಿ ಮನಗಂಡಿದ್ದರು. ಇಂದಿನ ಅವಾಂತರಗಳನ್ನು ನೋಡುತ್ತಿದ್ದೇವೆ. ಹಿಂದೂ ಸಮಾಜದ ಸಂಘಟನೆಯೇ ನಮ್ಮ ಪರಮ ಧ್ಯೇಯ, ಕೇವಲ ರಾಜಕಾರಣ ಮಾಡುವುದೇ ನಮ್ಮ ಗರಿಯಲ್ಲ. ಸಮಾಜವನ್ನು ಒಟ್ಟಾಗಿ ಕಟ್ಟಬೇಕೆನ್ನುವುದೇ ನಮ್ಮ ಧ್ಯೇಯ. ಚುನಾವಣೆ ಎಂದರೆ ದುಡ್ಡು ಮತ್ತು ಜಾತಿ ಎಂಬುದನ್ನು ಅರಿತಿದ್ದೇವೆ. ಅಭ್ಯರ್ಥಿಗಳೂ ಅದನ್ನು ತಿಳಿದಿದ್ದಾರೆ. ನಮ್ಮಲ್ಲಿನ ಉಡಾಫೆಯನ್ನು ಬದಿಗಿಟ್ಟು ಎಲ್ಲರೂ ಒಟ್ಟಾಗಿ ಕೆಲಸ ಮಾಡಿದಲ್ಲಿ ಗೆಲುವು ಸಾಧ್ಯ. ಒಡೆದು ಚೂರು ಚೂರಾಗಿ ಹೋಗುವ ಸಮಾಜ ದಲ್ಲಿ ಶಕ್ತಿ ತರಬೇಕಾದರೆ ಜಾತಿ ಮತ್ತು ದುಡ್ಡಿನ ರಾಜಕಾರಣದಿಂದ ಹೊರಬರಬೇಕು ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮುಖಂಡರಾದ ಲಾಲಾಜಿ ಆರ್ ಮೆಂಡನ್, ಗುರ್ಮೆ ಸುರೇಶ್ ಶೆಟ್ಟಿ, ಶ್ಯಾಮಲಾ ಎಸ್ ಕುಂದರ್, ಸತ್ಯಜಿತ್ ಸುರತ್ಕಲ್, ಕುತ್ಯಾರು ನವೀನ್ ಶೆಟ್ಟಿ, ಯಶಪಾಲ್ ಸುವರ್ಣ, ಜಿಪಂ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಸದಸ್ಯೆ ಗೀತಾಂಜಲಿ ಸುವರ್ಣ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮುರಲೀಧರ ಪೈ ಇದ್ದರು.







