ಮಂಗಳೂರು: ಸರ್ವಿಸ್ ಬಸ್ ನಿಲ್ದಾಣವನ್ನು ಪಂಪ್ವೆಲ್ಗೆ ಸ್ಥಳಾಂತರಿಸಿ
ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಆಗ್ರಹ

ಮಂಗಳೂರು, ಜ.19: ಪಂಪ್ವೆಲ್ನಲ್ಲಿ ಸರ್ವೀಸ್ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಇನ್ನೂ ಪೂರ್ತಿಗೊಂಡಿಲ್ಲ. ಅಲ್ಲದೆ ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ವಿವಿಧ ರಸ್ತೆಗಳಲ್ಲಿ ಆಗಿಂದಾಗ್ಗೆ ಟ್ರಾಫಿಕ್ ಬ್ಲಾಕ್ ಆಗುತ್ತಿದೆ. ಹಾಗಾಗಿ ಪ್ರಾಯೋಗಿಕವಾಗಿ ಒಂದು ತಿಂಗಳ ಮಟ್ಟಿಗೆ ಸ್ಟೇಟ್ ಬ್ಯಾಂಕ್ ಸಮೀಪವಿರುವ ಸರ್ವಿಸ್ ಬಸ್ ನಿಲ್ದಾಣವನ್ನು ಪಂಪ್ವೆಲ್ಗೆ ಸ್ಥಳಾಂತರಿಸ ಬೇಕು ಎಂದು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಜರಗಿಸಲಾಗುವುದು ಎಂದರು.
ಕುಂಜತ್ತಬೈಲ್ನ ಅತ್ರೆಬೈಲ್ಗೆ ಬಸ್ ಓಡಿಸಲು ಪರವಾನಿಗೆ ಇದ್ದರೂ ಬಸ್ ಮಾಲಕರು ಬಸ್ಗಳನ್ನು ಅಲ್ಲಿ ತನಕ ಓಡಿಸುತ್ತಿಲ್ಲ. ಕುಂಜತ್ತಬೈಲ್ನಿಂದಲೇ ಬಸ್ಗಳು ವಾಪಸಾಗುತ್ತಿವೆ. ಇದರಿಂದ ತಮಗೆ ಸಮಸ್ಯೆಯಾಗಿದೆ ಎಂದು ಅತ್ರೆಬೈಲ್ನ ಸಾರ್ವಜನಿಕರು ದೂರು ನೀಡಿದರು. ಈ ಕುರಿತು ಅತ್ರೆಬೈಲ್ಗೆ ಪರವಾನಿಗೆ ಹೊಂದಿರುವ ಬಸ್ ಮಾಲಕರ ಸಭೆಯನ್ನು ಕರೆದು ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ವಿವರಿಸಿದರು.
ಬಸ್ ಸಿಬ್ಬಂದಿಗೆ ತರಬೇತಿ: ಮಂಗಳಾದೇವಿಗೆ ಹೋಗುವ 27 ನಂಬ್ರದ ಬಸ್ಸೊಂದರ ಕಂಡಕ್ಟರ್ ಒಬ್ಬರು ಬಾಕಿ ಚಿಲ್ಲರೆ ಹಣ ಪಾವತಿಗೆ ಸಂಬಂಧಿಸಿ ಪ್ರಯಾಣಿಕರಿಗೆ ಹೀನಾಯವಾಗಿ ಬೈದು ನಿಂದಿಸಿದ ಬಗ್ಗೆ ಮಹಿಳಾ ಪ್ರಯಾಣಿಕರೊಬ್ಬರು ದೂರು ನೀಡಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಖಾಸಗಿ ಸಿಟಿ ಬಸ್ಗಳ ಸಿಬ್ಬಂದಿಗೆ ಪ್ರಯಾಣಿಕರ ಜತೆ ಯಾವ ರೀತಿ ವರ್ತಿಸಬೇಕೆಂಬ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಸಲಾಗುವುದು. ಈ ಬಗ್ಗೆ ಬಸ್ ಮಾಲಕರ ಸಂಘದ ಜತೆ ಚರ್ಚೆ ನಡೆಸಲಾಗಿದೆ ಎಂದರು.
ಬೇರೆ ಬಸ್ಸಿನ ಟಿಕೆಟ್ ನೀಡಿದರೆ ಕ್ರಮ: ರೂಟ್ ನಂ. 15ಎ ಬಸ್ಸಿನ ಕಂಡಕ್ಟರ್ ಪ್ರಯಾಣಿಕರು ಟಿಕೆಟ್ ಕೇಳಿದರೆ ಬೇರೊಂದು ಬಸ್ಸಿನ ಟಿಕೆಟ್ ನೀಡುತ್ತಿದ್ದಾರೆ ಎಂದು ವ್ಯಕ್ತಿಯೊಬ್ಬರು ದೂರು ನೀಡಿದರು. ಬೇರೆ ಬಸ್ಸಿನ ಟಿಕೆಟ್ ನೀಡಿದರೆ ಅಂತಹ ಬಸ್ ನಿರ್ವಾಹಕ/ ಮಾಲಕರ ವಿರುದ್ಧ ವಂಚನೆ ಕೇಸು ದಾಖಲಿಸುವಂತೆ ಆಯುಕ್ತರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಎಕ್ಸ್ಟ್ರಾ ಫಿಟ್ಟಿಂಗ್ ಎಲ್ಇಡಿ ಲೈಟ್ಗಳ ವಿರುದ್ಧ ಕ್ರಮ : ಕೆಲವು ವಾಹನಗಳ ಮಾಲಕರು ತಮ್ಮ ವಾಹನಗಳಿಗೆ ಇನ್ಬಿಲ್ಟ್ ಇರುವ ಹೆಡ್ಲೈಟ್ಗಳ ಹೊರತಾಗಿ ಹೆಚ್ಚುವರಿಯಾಗಿ ಎಲ್ಇಡಿ ಬಲ್ಬ್ ಹೊಂದಿರುವ ಲೈಟ್ಗಳನ್ನು ಫಿಟ್ಟಿಂಗ್ ಮಾಡಿದ್ದು, ಅವುಗಳ ಪ್ರಖರ ಬೆಳಕಿನಿಂದಾಗಿ ರಸ್ತೆಯಲ್ಲಿ ಇತರ ವಾಹನಗಳನ್ನು ಚಲಾಯಿಸಲು ಅಸಾಧ್ಯವಾಗುತ್ತಿದೆ ಎಂದು ಸಾರ್ವಜನಿಕರು ದೂರಿದರು. ಈ ಬಗ್ಗೆ ವಿಶೇಷ ಕಾರ್ಯಾಚರಣೆ ನಡೆಸಿ ಎಕ್ಸ್ಟ್ರಾ ಫಿಟ್ಟಿಂಗ್ ಮಾಡಿದ ವಾಹನಗಳ ವಿರುದ್ದ ಕೇಸು ದಾಖಲಿಸಲಾಗುವುದು ಎಂದು ಕಮಿಷನರ್ ತಿಳಿಸಿದರು.
ಇದು 68ನೆ ಫೋನ್ ಇನ್ ಕಾರ್ಯಕ್ರಮವಾಗಿದ್ದು, 30 ಕರೆಗಳು ಬಂದವು. ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್, ಎಸಿಪಿಗಳಾದ ವೆಲೆಂಟೈನ್ ಡಿಸೋಜಾ ಮತ್ತು ಮಂಜುನಾಥ ಶೆಟ್ಟಿ , ಟ್ರಾಫಿಕ್ ಎಸ್ಸೈ ಮೋಹನ್ ಕೊಟ್ಟಾರಿ, ಎಎಸ್ಸೈ ಯೂಸ್ು, ಹೆಚ್ಸಿ ಪುರುಷೋತ್ತಮ, ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಉಪಸ್ಥಿತರಿದ್ದರು.







