ಉಡುಪಿ: ಎಸ್ಸಿ/ಎಸ್ಟಿ ಉಪಯೋಜನೆ ಪ್ರಗತಿ ಪರಿಶೀಲನೆ
ಉಡುಪಿ, ಜ.19: ಗಾಪಂ ವ್ಯಾಪ್ತಿಯ ಶೇ.25, ಪಟ್ಟಣ ಪಂಚಾಯತ್ ಮತ್ತು ಪುರಸಭೆ, ನಗರಸಭೆ ವ್ಯಾಪ್ತಿಯ ಶೇ.24.10 ಕಾಯ್ದಿರಿಸಿದ ಅನುದಾನವನ್ನು ಸಮಯ ಮಿತಿಯೊಳಗೆ ಕ್ರಿಯಾಯೋಜನೆಯಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗೆ ಬಳಸಿದ ಸವಿವರ ವರದಿಯನ್ನು ಎರಡು ದಿನದೊಳಗೆ ನೀಡಲು ಜಿಲ್ಲಾಧಿಕಾರಿ ಪ್ರಿಾಂಕ ಮೇರಿ ಫ್ರಾನ್ಸಿಸ್ ಆದೇಶಿಸಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯ ಪ್ರತಿ ಗ್ರಾಪಂನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ.25ರ ಯೋಜನೆಯಡಿ ಕೈಗೊಂಡ ಕ್ರಮಗಳು ಹಾಗೂ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದ್ದು, ಅನುಷ್ಠಾನದ ವರದಿ ನೀಡಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಪ್ರತಿ ಪಂಚಾಯತ್ಗಳು ಎಷ್ಟು ಯಶಸ್ವಿಯಾಗಿ ಜಾಗೃತಿ ಕಾರ್ಯಕ್ರಮಗಳು ನಡೆಸಿವೆ ಎಂಬ ಬಗ್ಗೆ ತಾಲೂಕಿನ ಇಒಗಳು ಪರಿಶೀಲಿಸಿ, ವರದಿಯನ್ನು ಸಲ್ಲಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಕುಂದು ಕೊರತೆ ಸಭೆಯಲ್ಲಿ ಬಂದ ದೂರುಗಳಿಗೆ ಸಂಬಂಧಿಸಿದಂತೆ ಕೈಗೊಳ್ಳಲಾದ ಕ್ರಮಗಳ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ಪಡೆದರಲ್ಲದೆ, ಸಮಸ್ಯೆಗಳ ತೀವ್ರತೆ ಅರಿತು ಸ್ಪಂದಿಸಲು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.
ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿವಾನಂ ಕಾಪಶಿ ಉಪಸ್ಥಿತರಿದ್ದರು.







