ಪ್ರಜಾಪ್ರಭುತ್ವ ಉಳಿಸುವ ಕಡೆಗೆ ಆನೆಯ ನಡಿಗೆ: ಮಡಿಕೇರಿಯಲ್ಲಿ ಜಾಗೃತಿ ಸಭೆ

ಮಡಿಕೇರಿ, ಜ.19 : ಬಹುಜನ ಸಮಾಜ ಪಾರ್ಟಿಯ ಮುಖಂಡರಾದ ಮಾಯಾವತಿ ಅವರ ಜನ್ಮ ದಿನ ಮತ್ತು ಗಣರಾಜ್ಯೋತ್ಸವದ ಅಂಗವಾಗಿ ಬಿಎಸ್ಪಿ ರಾಜ್ಯ ಘಟಕ “ಪ್ರಜಾಪ್ರಭುತ್ವ ಉಳಿಸುವ ಕಡೆಗೆ ಆನೆಯ ನಡಿಗೆ” ಎಂಬ ಘೋಷ ವಾಕ್ಯದೊಂದಿಗೆ ಆರಂಭಿಸಿರುವ ಜನಜಾಗೃತಿ ಜಾಥಾ ಇಂದು ಮಡಿಕೇರಿ ನಗರಕ್ಕೆ ಆಗಮಿಸಿತು.
ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಮೆರವಣಿಗೆ ಮೂಲಕ ಸಾಗಿದ ಸಂಘಟನಕಾರರು ಜನರಲ್ ತಿಮ್ಮಯ್ಯ ವೃತ್ತದಲ್ಲಿ ಸಭೆ ನಡೆಸಿದರು.
ಜ.26 ರಂದು ಮೈಸೂರು ನಗರದಲ್ಲಿ ಜಾಗೃತಿ ಜಾಥಾದ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಪ್ರಮುಖರು ತಿಳಿಸಿದರು. ಸಂವಿಧಾನದ ಆಶಯದಂತೆ, ಸರ್ವ ಸಮುದಾಯಗಳು ತಮ್ಮ ಜನಸಂಖ್ಯೆಗನುಗುಣವಾಗಿ ಹಕ್ಕು ಅಧಿಕಾರಗಳನ್ನು ಪಡೆದುಕೊಂಡು ಸ್ವಾವಲಂಬಿಗಳಾಗಿ ಬದುಕಬೇಕಾಗಿತ್ತು. ಆದರೆ ಕಾಂಗ್ರೆಸ್, ಬಿಜೆಪಿಯಂತಹ ಸಂವಿಧಾನ ವಿರೋಧಿಗಳನ್ನು ಬೆಂಬಲಿಸಿದ ಪರಿಣಾಮವಾಗಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಂಚಿನಲ್ಲಿದೆ ಎಂದು ಮುಖಂಡರು ಟೀಕಿಸಿದರು.
ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಜಾಗೃತರಾಗಬೇಕಾಗಿದೆ ಎಂದರು. ಬಿಎಸ್ಪಿಯ ರಾಜ್ಯಾಧ್ಯಕ್ಷರಾದ ಎನ್.ಮಹೇಶ್, ಪ್ರಮುಖರಾದ ಸೋಮಶೇಖರ್, ಜಿಲ್ಲಾಧ್ಯಕ್ಷರಾದ ಪ್ರೇಮ್ಕುಮಾರ್, ಪ್ರಧಾನ ಕಾರ್ಯದರ್ಶಿ ಮೊಹಮದ್ ಮತ್ತಿತರರು ಹಾಜರಿದ್ದರು.





