ಜ. 21ರಿಂದ ಅತ್ತೂರು ಸಂತಲಾರೆನ್ಸ್ ಬಸಿಲಿಕಾದಲ್ಲಿ ವಾರ್ಷಿಕ ಮಹೋತ್ಸವ

ಕಾರ್ಕಳ, ಜ. 21: ಬಡವರನ್ನು ಆಧರಿಸುವವನು ಭಾಗ್ಯವಂತನು ಎಂಬ ಮಹೋತ್ಸವದ ವಿಷಯದೊಂದಿಗೆ ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವವು ಜ. 21ರಿಂದ 25ರ ವರೆಗೆ ನೆರವೇರಲಿದೆ.
ಅತ್ತೂರು ಚರ್ಚ್ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಂತ ಲಾರೆನ್ಸರ ಪುಣ್ಯ ಕ್ಷೇತ್ರವನ್ನು ಕ್ರಿಸ್ತ ಜಗದ್ಗುರು ಪೋಪ್ ಪ್ರಾನ್ಸಿಸ್ ಅವರು ಸಂತ ಲಾರೆನ್ಸ್ ಮಹಾದೇವಾಲಯ ಬಸಿಲಿಕ ಎಂದು ಅಧಿಕೃತ ಘೋಷಣೆ ಮಾಡಿದ ಸವಿನೆನಪಿಗಾಗಿ ಭಾರತ ಸರಕಾರದ ಅಂಚೆ ಇಲಾಖೆ ಸಂತ ಲಾರೆನ್ಸ್ ಪವಾಡ ಮೂರ್ತಿಯಿರುವ 5 ರೂ.ಯ ವಿಶೇಷ ಅಂಚೆ ಚೀಟಿ ಹಾಗೂ ಅಂಚೆ ಲಕೋಟೆಯು ಕೂಡಾ ಬಿಡುಗಡೆಗೊಂಡಿತು.
ಜ.21ರಂದು ಬೆಳಗ್ಗೆ 7.30 ಕ್ಕೆ ಬಸಿಲಿಕದ 43 ಅಡಿ ಎತ್ತರದ ಮಾನಸ್ಥಂಭದ ಉದ್ಘಾಟನೆ ಹಾಗೂ ಆಶೀರ್ವಚನ ನಡೆಯಲಿದೆ. ಮಾನಸ್ಥಂಭದಲ್ಲಿ ಬಾವುಟ ಏರಿಸಿ ದಿವ್ಯ ಬಲಿಪೂಜೆಯೊಂದಿಗೆ ಭ್ರಾತೃತ್ವದ ರವಿವಾರ ಆಚರಿಸಿ ದಿವ್ಯ ಪರಮ ಪ್ರಸಾದದ ಮೆರವಣಿಗೆಯೊಂದಿಗೆ ವಾರ್ಷಿಕ ಮಹೋತ್ಸವ ಪ್ರಾರಂಭಗೊಳ್ಳಲಿದೆ. ಮಧ್ಯಾಹ್ನ 3 ಗಂಟೆ ಹಾಗೂ 5 ಗಂಟೆಗೆ ಮಕ್ಕಳಿಗಾಗಿ ವಿಶೇಷ ಬಲಿಪೂಜೆ ಅರ್ಪಿಸಲಾಗುವುದು.
ಜ. 22ರಂದು ಬೆಳಗ್ಗೆ 10 ಗಂಟೆ ಹಾಗೂ ಮಧ್ಯಾಹ್ನ 3.30 ಗಂಟೆಗೆ ವ್ಯಾದಿಷ್ಠರಿಗಾಗಿ ವಿಶೇಷ ಬಲಿಪೂಜೆ, ಮಹೋತ್ಸವದ ದಿನಗಳಲ್ಲಿ ಕೊಂಕಣಿಯಲ್ಲಿ 33 ಹಾಗೂ ಕನ್ನಡದಲ್ಲಿ 10 ದಿವ್ಯ ಬಲಿಪೂಜೆ ನಡೆಯಲಿದೆ. ಶಿವಮೊಗ್ಗ, ಬೆಳ್ತಂಗಡಿ, ಮೈಸೂರು, ಮಂಗಳೂರು ಹಾಗೂ ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಆಗಮಿಸಿ ಬಲಿಪೂಜೆ ಅರ್ಪಿಸುವರು.
ಹಳೆಯ ಮತ್ತು ಹೊಸ ಇಗರ್ಜಿಗಳ ಒಳಗಡೆ, ಬಸಿಲಿಕದ ವಠಾರದಲ್ಲಿ 64 ಸಿ.ಸಿ ಕ್ಯಾಮರ, ಆಯಕಟ್ಟಿನ ಸ್ಥಳಗಳಲ್ಲಿ 32 ಸಿ.ಸಿ ಕ್ಯಾಮರ ಅಳವಡಿಸಲಾಗುವುದು. ಹರಕೆ ಹಾಕುವಲ್ಲಿ ಮತ್ತು ಮೊಂಬತ್ತಿ ಉರಿಸುವಲ್ಲಿ ಹೆಚ್ಚಿನ ಸ್ಥಳವಕಾಶ ಕಲ್ಪಿಸಲಾಗಿದೆ. ಕಥೋಲಿಕ್ ಕ್ರೈಸ್ತರಿಗೆ ದೇವಾಲಯದ ಬಲ ಬದಿ ಪವಾಡ ಮೂರ್ತಿಪ್ರತಿಷ್ಠಾಪಿಸಿದ ಪಕ್ಕದಲ್ಲಿ ಪಾಪನಿವೇದನೆಗೆ ವ್ಯವಸ್ಥೆ ಮಾಡಲಾಗಿದೆ. ಹಳೆದೇವಾಲಯದ ಒಳಗೆ ಪ್ರಾರ್ಥನೆಗಾಗಿ ಮಾತ್ರ ಅವಕಾಶ ನೀಡಲಾಗಿದೆ.
ಹಣ, ವಸ್ತು ರೂಪದ ಮೊಂಬತ್ತಿಗಳ ಹರಕೆಗಳನ್ನು ಹಳೆ ದೇವಾಲಯದ ಎಡಬದಿಯಲ್ಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಪೊಲೀಸ್ ಸೇವಾ ಕೇಂದ್ರದ ಪಕ್ಕದಲ್ಲಿ ಸುಮಾರು 40 ಹಾಗೂ ಗುರು ನಿವಾಸದ ಎಡಬದಿ 20 ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಅಂಗವಿಕಲರಿಗಾಗಿ ಪ್ರತ್ಯೇಕ ಹಾಗೂ ಅಶಕ್ತ ಹಿರಿಯರಿಗೆ ಕೊಮೊಡ್ ಮಾದರಿಯ ಶೌಚಾಲಯಗಳಿವೆ. ಬಾಂಬ್ ನಿಷ್ಕ್ರಿಯ ದಳ ಹಾಗೂ ರಿಸರ್ವ್ ಪೊಲೀಸ್ ತುಕಡಿಗಳಿದ್ದು, ಯಾತ್ರಾರ್ಥಿಗಳ ಸುರಕ್ಷಿತೆಯ ಹೊಣೆ ನಿರ್ವಹಿಸಲಿರುವರು.
ಕಾಬೆಟ್ಟು ದ್ವಾರದ ಮೂಲಕ ಬರುವ ವಾಹನಗಳ ದಟ್ಟಣೆಯಿಂದ ಆಗುವ ಅಡಚಣೆ ನಿವಾರಿಸಲು, ಪುಲ್ಕೇರಿಯಿಂದ ದೂಪದಕಟ್ಟೆ ಮೂಲಕ ವಾಹನಗಳನ್ನು ಕಳುಹಿಸಿ ಬಸಿಲಿಕದ ಸಮೀಪದಲ್ಲಿ ವಾಹನ ನಿಲುಗಡೆಗೆ 5 ಸ್ಥಳಗಳಲ್ಲಿ ವ್ಯವಸ್ಥೆ, ದ್ವಿಚಕ್ರ ವಾಹನಗಳಿಗೆ ಒಂದು ಕಡೆ ಪ್ರತ್ಯೇಕ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ದೂಪದಕಟ್ಟೆಯಿಂದ ಬರುವವರಿಗೆ, ದೂಪದಕಟ್ಟೆ ದ್ವಾರ ಪ್ರವೇಶಿಸುವಾಗ ಎಡಬದಿಗೆ ವಿಸ್ತಾರವಾದ ವಾಹನ ನಿಲುಗಡೆ ಸ್ಥಳ, ಗಾರ್ಡನ್ ಹೌಸ್ ಹತ್ತಿರ ತಿರುವಿನಲ್ಲಿ ಎಡಬದಿ ಹಾಗೂ ಗಾರ್ಡನ್ ಹೌಸ್ ದಾಟಿದ ನಂತರ ಎಡಬದಿಯಲ್ಲಿ ವಾಹನ ನಿಲುಗಡೆಗೆ ಅವಾಕಾಶ, ರೋಬರ್ಟ್ ನೊರೋನ್ಹರವರ ಜಾಗದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲಿ ತನಕ ರಿಕ್ಷಾ ಸಂಚಾರಕ್ಕೆ ಅವಕಾಶವಿದೆ.
ಕಾಬೆಟ್ಟು ಕಡೆಯಿಂದ ಬರುವ ವಾಹನಗಳಿಗೆ ಪ್ರಸಾದ್ ಟೈಲರ್ ಜಂಕ್ಷನ್ ದಾಟಿ ಬಲಬದಿಯಲ್ಲಿ ಹೈಸ್ಕೂಲು ಆಟದ ಮೈದಾನ ಹಾಗೂ ಚೇತನಹಳ್ಳಿ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ, ಸ್ಮಶಾನದ ಹತ್ತಿರ ಎಡಬದಿಯ ರಸ್ತೆಯಿಂದ ಬಂದರೆ ಪರ್ಪಲೆ ಗುಡ್ಡೆಯಲ್ಲಿ ಹೊಸದಾಗಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ವೆಹಿಕಲ್ ಪಾಸ್ ಹೊಂದಿದವರು ಕಾಬೆಟ್ಟು-ಅತ್ತೂರು ಕ್ವಾನ್ವೆಂಟ್ ಮಾರ್ಗವಾಗಿ ಬರಬಹುದು. ಪಾಸ್ ಹೊಂದಿದ ಎಲ್ಲಾ ವಾಹನಗಳಿಗೆ ದೇವಾಲಯದ ಎಡಬದಿಯ ಪರ್ಪಲೆ ಗುಡ್ಡದಲ್ಲಿ ನಿರ್ಮಿಸಿದ ಮೈದಾನಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ವೆಹಿಕಲ್ ಪಾಸ್ ಹೊಂದಿದ ವಾಹನ ಹಾಗೂ ಪರ್ಪಲ ಗುಡ್ಡೆಯ ಮೇಲೆ ನಿಲುಗಡೆ ಮಾಡಿದ ವಾಹನ ಬಂದ ಮಾರ್ಗವಾಗಿ ಹಿಂದಿರುಗಲು ಅವಕಾಶ ಇಲ್ಲ. ನಿಲುಗಡೆ ಸ್ಥಳದಿಂದ ಮುಂದೆ ಸಾಗಿ ಏಕಮುಖ ರಸ್ತೆಯ ಮೂಲಕ ಕಾರ್ಕಳ-ಪಡುಬಿದ್ರಿ ರಸ್ತೆಗೆ ಸಂಪರ್ಕ ಕಲ್ಪಿಸಲಾಗಿದೆ.
ಬಸಿಲಿಕದ ವಠಾರದಲ್ಲಿ ಅಧಿಕೃತ ಸ್ಟಾಲ್ನಲ್ಲಿ ಮಾತ್ರ ಮೊಂಬತ್ತಿ ಮಾರಾಟ ಮಾಡಲಾಗಿದೆ. ಅನಧಿಕೃತ ಮೊಂಬತ್ತಿ ಮಾರಾಟ ನಿಷೇದಿಸಲಾಗಿದೆ. ಭಿಕ್ಷಾಟನೆಯನ್ನು ಸಂಪೂರ್ಣ ನಿಷೇಧಿಸಲಾಗಿದ್ದು. ಹರಕೆ ರೂಪದಲ್ಲಿ ನೀಡುವ ದಾನವನ್ನು ಸಂಗ್ರಹಿಸಿ, ಜ.26ರಂದು ಮಧ್ಯಾಹ್ನ 12 ಗಂಟೆಗೆ ಊಟ ಸಹಿತ ಭಿಕ್ಷುಕರಿಗೆ ನೀಡಲಾಗುವುದು. ಕ್ಷೇತ್ರಕ್ಕೆ ಆಗಮಿಸುವ ಯಾತ್ರಿಕರ ಭೇಟಿಯು, ಆಧ್ಯಾತ್ಮಿಕ ನೆಮ್ಮದಿ, ಮಾನಸಿಕ ಸಂತೃಪ್ತಿ ಹಾಗೂ ಸ್ಮರಣೀಯವಾಗಲಿ ಎಂದು ಚರ್ಚ್ನ ಧರ್ಮಗುರು ವಂ.ಫಾ. ಜಾರ್ಜ್ ಡಿಸೋಜ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.







