ಪಾಕ್ ವಿರುದ್ಧ ಬಲೂಚ್ ಕಾರ್ಯಕರ್ತ ಮಾಡಿದ ಗಂಭೀರ ಆರೋಪವೇನು ?
ಕುಲಭೂಷಣ್ ಜಾಧವ್ ಪ್ರಕರಣ
ಹೊಸದಿಲ್ಲಿ, ಜ.20: ಸದ್ಯ ಗುಪ್ತಚರ ಮಾಹಿತಿದಾರ ಎಂಬ ಆರೋಪದಲ್ಲಿ ಬಂಧಿಯಾಗಿ ಪಾಕಿಸ್ತಾನದ ಜೈಲಿನಲ್ಲಿದ್ದು ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಕುಲಭೂಷಣ್ ಜಾಧವ್ ಅವರನ್ನು ಪಾಕಿಸ್ತಾನ ಸರಕಾರ ಮತ್ತು ಐಎಸ್ಐ ಸೂಚನೆಯಂತೆ ಅಪಹರಿಸಲಾಗಿದ್ದು ಅದಕ್ಕಾಗಿ ಪಾಕಿಸ್ತಾನ ಸರಕಾರ ಕೋಟಿಗಟ್ಟಲೆ ಹಣವನ್ನು ವ್ಯಯಿಸಿದೆ ಎಂದು ಬಲೂಚ್ ಕಾರ್ಯಕರ್ತ ಮಮ ಖಾದಿರ್ ಆರೋಪಿಸಿದ್ದಾರೆ. ಜಾಧವ್ರನ್ನು ಪಾಕಿಸ್ತಾನ ಸರಕಾರದ ಸೂಚನೆಯಂತೆ ಉಗ್ರ ಮುಲ್ಲಾ ಓಮರ್ ಇರಾನ್ನಿಂದ ಅಪಹರಣ ಮಾಡಿದ್ದ. ಅದಕ್ಕಾಗಿ ಆತನಿಗೆ ಬೃಹತ್ ಮೊತ್ತದ ಹಣವನ್ನು ನೀಡಲಾಗಿತ್ತು. ನಂತರ ಜಾಧವ್ರನ್ನು ಕ್ವೆಟ್ಟದ ಮೂಲಕ ಇಸ್ಲಾಮಾಬಾದ್ಗೆ ಕೊಂಡೊಯ್ದು ಅಲ್ಲಿ ಪಾಕಿಸ್ತಾನ ಪರ ಹೇಳಿಕೆಗಳನ್ನು ನೀಡುವಂತೆ ಅವರಿಗೆ ಒತ್ತಡ ಮತ್ತು ಹಿಂಸೆಯನ್ನು ನೀಡಲಾಗಿತ್ತು ಎಂದು ಖಾದಿರ್ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬಲೂಚಿಸ್ತಾನದಲ್ಲಿ ಯಾರು ನಾಪತ್ತೆಯಾದರೂ ಅಥವಾ ಹತ್ಯೆಯಾದರೂ ಅದರ ಹಿಂದೆ ಪಾಕಿಸ್ತಾನ ಮತ್ತು ಅದರ ಐಎಸ್ಐಯಂಥ ಸಂಸ್ಥೆಗಳಿರುತ್ತವೆ. ಪಾಕಿಸ್ತಾನವು ಭಯೋತ್ಪಾದನೆಯ ಕಾರ್ಖಾನೆಯನ್ನು ನಡೆಸುತ್ತಿದ್ದು ಹಾಫೀಝ್ ಸಯೀದ್ ಮತ್ತು ಸಯೀದ್ ಸಲೂಹುದ್ದೀನ್ರಂಥವರನ್ನು ಉತ್ಪಾದಿಸಿದೆ ಎಂದು ಅವರು ತಿಳಿಸಿದ್ದಾರೆ.
ಜಾಧವ್ ಇರಾನ್ನಲ್ಲಿ ವ್ಯವಹಾರವನ್ನು ಹೊಂದಿದ್ದರು. ಅವರನ್ನು ಅಲ್ಲಿಂದಲೇ ಅಪಹರಣ ಮಾಡಲಾಗಿದೆ ಎಂದು ಭಾರತವು ಹೇಳಿಕೊಂಡೇ ಬಂದಿದೆ. ಆದರೆ ಪಾಕಿಸ್ತಾನವು ಈ ಹೇಳಿಕೆಯನ್ನು ತಳ್ಳಿಹಾಕುತ್ತಿದ್ದು ಜಾಧವ್ ಬಲೂಚಿಸ್ತಾನದಲ್ಲಿ ಪತ್ತೆಯಾಗಿದ್ದರು ಎಂದು ತಿಳಿಸಿದೆ. ಸದ್ಯ ಖಾದಿರ್ ಹೇಳಿಕೆಯು ಭಾರತದ ಹೇಳಿಕೆಯೊಂದಿಗೆ ತಾಳೆಯಾಗುತ್ತಿದೆ.
ಪಾಕಿಸ್ತಾನದ ಹೇಳಿಕೆಗೆ ಎದಿರೇಟು ನೀಡಿರುವ ಖಾದಿರ್, ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ನಿರ್ಮಾಣವಾಗುತ್ತಿರುವ ಪ್ರದೇಶವಾದ ಗ್ವದರ್ಗೆ ಪ್ರವೇಶಿಸಬೇಕಾದರೆ ಸ್ಥಳೀಯ ವ್ಯಕ್ತಿಗಳು ಕೂಡಾ ನಾಲ್ಕು ಚೆಕ್ಪೋಸ್ಟ್ಗಳನ್ನು ದಾಟಬೇಕಾಗುತ್ತದೆ. ಹಾಗಾಗಿ ಒಬ್ಬ ಹೊರಗಿನ ವ್ಯಕ್ತಿ ಅಲ್ಲಿ ನೆಲೆಸುವುದನ್ನು ನಿರೀಕ್ಷಿಸಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಕೆಲವೇ ವಾರಗಳಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಜಾಧವ್ ಅವರ ಪ್ರಕರಣ ವಿಚಾರಣೆಗೆ ಬರಲಿದೆ. ಪಾಕಿಸ್ತಾನವು ಈಗಾಗಲೇ ಜಾಧವ್ ಅವರ ನಾಲ್ಕು ವಿಡಿಯೊಗಳನ್ನು ಬಿಡುಗಡೆ ಮಾಡಿದೆ.