ಉಡುಪಿ: ವಾಕ್, ಶ್ರವಣದೋಷ ಉಳ್ಳವರೊಂದಿಗೆ ಸಂವಾದ

ಉಡುಪಿ, ಜ.20: ವಾಕ್ ಹಾಗೂ ಶ್ರವಣ ದೋಷವುಳ್ಳವರೊಂದಿಗೆ ವ್ಯವಹರಿಸುವಾಗ ತಾಳ್ಮೆ ಅತೀ ಮುಖ್ಯ ಎಂದು ಖ್ಯಾತ ಹೃದ್ರೋಗ ತಜ್ಞರಾದ ಡಾ.ಅಶೆಕ್ ಕುಮಾರ್ ವೈ.ಜಿ ಹೇಳಿದ್ದಾರೆ.
ಶನಿವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಭಾರತೀಯ ರೆಡ್ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ, ಡಿಡಿಆರ್ಸಿ ಉಡುಪಿ ಜಿಲ್ಲೆ, ವಾಗ್ಜೋತಿ ಶ್ರವಣದೋಷವುಳ್ಳ ಮಕ್ಕಳ ವಸತಿ ಶಾಲೆ ಮೂಡುಬಗೆ ಅಂಪಾರು, ಡೆಪ್ ವೆಲ್ಫೇರ್ ಅಸೋಸಿಯೇಶನ್ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಅರಿವಿನ ಸಿಂಚನ ಯೋಜನೆಯಡಿ ಉಡುಪಿ ರೆಡ್ಕ್ರಾಸ್ ಸಂಸ್ಥೆ ಅಜ್ಜರಕಾಡಿನಲ್ಲಿ ನಡೆದ ವಾಕ್ ಮತ್ತು ಶ್ರವಣದೋಷ ಉಳ್ಳವರೊಂದಿಗೆ ಸಂವಾದ ಹಾಗೂ ಇಲಾಖಾ ಯೋಜನೆಗಳ ಬಗ್ಗೆ ಒಂದು ದಿನದ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಶ್ರವಣ ದೋಷವುಳ್ಳವರೊಂದಿಗೆ ವ್ಯವಹರಿಸುವುದು ತುಂಬಾ ಕಷ್ಟ. ಇದಕ್ಕೆ ಹೆಚ್ಚಿನ ತಾಳ್ಮೆ ಅಗತ್ಯ.ಈ ನಿಟ್ಟಿನಲ್ಲಿ ಇವರಿಗೆ ತಮ್ಮದೇ ದಾಟಿಯಲ್ಲಿ ಸನ್ನೆ ಭಾಷೆಯ ಮೂಲಕ ತರಬೇತಿಯನ್ನು ನೀಡುವ ಕೆಲಸವನ್ನು ಸಂಬಂಧಿತ ಅಧ್ಯಾಪಕರು ಮಾಡಿ, ಇವರ ಉತ್ತಮ ಭವಿಷ್ಯಕ್ಕೆ ನೆರವಾಗಬೇಕು ಎಂದರು.
ಮೂಡುಬಗೆ ವಾಗ್ಝೋತಿ ಶ್ರವಣದೋಷವುಳ್ಳ ಮಕ್ಕಳ ವಸತಿ ಶಾಲೆಯ ಮುಖ್ಯೋಪಾಧ್ಯಾಯ ರವೀಂದ್ರ ಹೆಚ್ ಮಾತನಾಡಿ, ಶ್ರವಣ ದೋಷವುಳ್ಳ ಹಾಗೂ ವಾಕ್ದೋಷವುಳ್ಳ ಮಕ್ಕಳು ಸನ್ನೆ ಭಾಷೆಯನ್ನೇ ಅವರ ಮಾತೃಭಾಷೆ ಎಂದು ತಿಳಿದುಕೊಂಡಿರುತ್ತಾರೆ. ಇಂಥವರೊಂದಿಗೆ ಸನ್ನೆಬಾಷೆಯ ಮೂಲಕ ಮಾತನಾಡಲು ಇಚ್ಛಿಸುತ್ತಾರೆ. ಈ ಸನ್ನೆ ಭಾಷೆಯನ್ನು ವ್ಯವಸ್ಥಿತವಾಗಿ ಉಪಯೋ ಗಿಸಲು ಆಂಗ್ಲ ಭಾಷೆಯಲ್ಲಿ ಸನ್ನೆ ಭಾಷೆ ಅಭಿವೃದ್ಧಿಗೊಳ್ಳುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಸಭಾಪತಿ ಡಾ.ಉಮೇಶ್ ಪ್ರಭು, ಉಡುಪಿ ಡೆಪ್ ವೆಲ್ಫೇರ್ ಅಸೋಸಿಯೇಶನ್ನ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಉಪಸ್ಥಿತರಿದ್ದರು.
ಜಿಲ್ಲಾ ವಿಕಲಚೇತನರ ಸಬಲೀಕರಣ ಅಧಿಕಾರಿ ನಿರಂಜನ್ ಭಟ್ ಸ್ವಾಗತಿಸಿ, ಬಾಲಕೃಷ್ಣ ವಂದಿಸಿದರು. ಜಯರಾಮ ಆಚಾರ್ಯ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.







