ಪ್ರವಾಸೋದ್ಯಮದ ಹೆಸರಿನಲ್ಲಿ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ : ಶಾಸಕ ಕೆ.ಜಿ.ಬೋಪಯ್ಯ
![ಪ್ರವಾಸೋದ್ಯಮದ ಹೆಸರಿನಲ್ಲಿ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ : ಶಾಸಕ ಕೆ.ಜಿ.ಬೋಪಯ್ಯ ಪ್ರವಾಸೋದ್ಯಮದ ಹೆಸರಿನಲ್ಲಿ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ : ಶಾಸಕ ಕೆ.ಜಿ.ಬೋಪಯ್ಯ](https://www.varthabharati.in/sites/default/files/images/articles/2018/01/21/Z PRAJASATHYA 1.jpg)
ಮಡಿಕೇರಿ, ಜ.21 : ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ವಿಶಿಷ್ಟ ಸಂಸ್ಕೃತಿ, ಆಚಾರ, ವಿಚಾರಗಳನ್ನು ಹೊಂದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮದ ಹೆಸರಿನಲ್ಲಿ ನಮ್ಮತನವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಬಾಲಭವನ ಸಭಾಂಗಣದಲ್ಲಿ ಪ್ರಜಾಸತ್ಯ ದಿನಪತ್ರಿಕೆಯ ವತಿಯಿಂದ ನಡೆದ ‘ವಿಷನ್ ಕೊಡಗು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಸಕರು ಮಾತನಾಡಿದರು. ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ರೆಸಾರ್ಟ್, ಹೋಂ ಸ್ಟೇಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರೊಂದಿಗೆ ನಮ್ಮತನವೂ ಮರೆಯಾಗುತ್ತಿದೆ. ಇಲ್ಲಿನ ಆಚಾರ ವಿಚಾರಗಳನ್ನು ಬಿಟ್ಟು ಬೇರೆ ಯಾವುದೋ ಸಂಸ್ಕೃತಿಗೆ ಆಕರ್ಷಿತರಾಗುತ್ತಿದ್ದೇವೆ ಎಂದು ಶಾಸಕ ಬೋಪಯ್ಯ ವಿಷಾದಿಸಿದರು.
ಸ್ಥಳೀಯ ಸಂಸ್ಕೃತಿಗೆ ಪೂರಕವಾದ ಮತ್ತು ಕೃಷಿ ಪ್ರಧಾನ ಜಿಲ್ಲೆಗೆ ಹತ್ತಿರವಾದ ಪ್ರವಾಸೋದ್ಯಮ ಹಾಗೂ ಯೋಜನೆಗಳು ಜಾರಿಯಾಗಬೇಕೆಂದು ಅಭಿಪ್ರಾಯಪಟ್ಟರು. ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲ ಕೇವಲ ಕೊಡಗು ಜಿಲ್ಲೆಗೆ ಮಾತ್ರ ಸೇರಿದ ಪುಣ್ಯ ಕ್ಷೇತ್ರವಲ್ಲ. ಇಡೀ ದಕ್ಷಿಣ ಭಾರತಕ್ಕೆ ಎರಡೂ ಕ್ಷೇತ್ರಗಳು ಪವಿತ್ರ ಕ್ಷೇತ್ರಗಳಾಗಿವೆ. ಆದರೆ, ಇಂದು ಈ ಕ್ಷೇತ್ರದಲ್ಲಿ ಪ್ರವಾಸಿಗರು ಮೋಜು ಮಸ್ತಿಯಲ್ಲಿ ತೊಡಗುತ್ತಿದ್ದಾರೆ. ಪ್ರವಾಸೋದ್ಯಮ ಬೆಳೆಯುವುದರೊಂದಿಗೆ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಪಾವಿತ್ರ್ಯತೆಯೂ ಉಳಿಯಬೇಕೆಂದು ಬೋಪಯ್ಯ ತಿಳಿಸಿದರು.
ಕೃಷಿಯೇ ಮೂಲವಾಗಿದ್ದ ಕೊಡಗಿನಲ್ಲಿ ಇಂದು ಕೃಷಿ ಚಟುವಟಿಕೆ ಕ್ಷೀಣಿಸುತ್ತಿದೆ. ಈ ಬಗ್ಗೆ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ. ಜಿಲ್ಲೆಯ ಜನ ತಲೆ ತಲಾಂತರಗಳಿಂದ ಪರಿಸರವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಇಂದು ಎಲ್ಲಿಂದಲೋ ಬಂದವರು ಪರಿಸರ ಸಂರಕ್ಷಣೆಯ ಬಗ್ಗೆ ನಮಗೆ ಪಾಠ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಗ್ರಾಮಸ್ಥರು ದೇವರ ಕಾಡುಗಳನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ. ಆದರೆ, ಅರಣ್ಯ ಇಲಾಖಾ ವ್ಯಾಪ್ತಿಗೆ ಒಳಪಟ್ಟ ದೇವರ ಕಾಡುಗಳನ್ನು ಹುಡುಕ ಬೇಕಾದ ದುಸ್ಥಿತಿ ಬಂದೊದಗಿದೆ. ಗ್ರಾಮಗಳ ಮೇಲೆ ನಿರಂತರವಾಗಿ ವನ್ಯ ಜೀವಿಗಳು ದಾಳಿ ನಡೆಸುತ್ತಿರುವುದರಿಂದ ರೈತರು ಕೃಷಿ ಚಟುವಟಿಕೆಯಿಂದ ದೂರ ಸರಿಯುತ್ತಿದ್ದಾರೆ. ತಮ್ಮ ಬಳಿ ಇರುವ ಜಮೀನನ್ನು ವನ್ಯ ಜೀವಿಗಳಿಗೆ ಬಿಟ್ಟುಕೊಟ್ಟು ವಲಸೆ ಹೋಗುವ ಪರಿಸ್ಥಿತಿ ಬಂದೊದಗಿದೆ. ಕೃಷಿ ಫಸಲನ್ನು ಗ್ರಾಮದಿಂದ ಪಟ್ಟಣಕ್ಕೆ ತರಲು ಅಗತ್ಯವಿರುವ ರಸ್ತೆ ಅಥವಾ ವಾಹನದ ವ್ಯವಸ್ಥೆಯೇ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಇಲ್ಲವಾಗಿದೆ. ಚುನಾವಣೆ ಬಂದಾಗ ರಾಜಕೀಯ ಮಾಡಬೇಕೇ ಹೊರತು ಜನ ಸಾಮಾನ್ಯರ ಸಮಸ್ಯೆಗಳಲ್ಲಿ ರಾಜಕಾರಣ ಬೆರೆಸಬಾರದೆಂದು ಬೋಪಯ್ಯ ಹೇಳಿದರು.
ಅಧಿಕಾರಿಗಳು ಬದ್ಧತೆ ತೋರಿದರೆ ಪ್ರತಿಯೊಂದು ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತದೆ. ಆದರೆ, ಕೊಡಗು ಜಿಲ್ಲೆಯಲ್ಲಿ ಅಧಿಕಾರಿಗಳ ಕೊರತೆ ಒಟ್ಟು ಸಮಸ್ಯೆಯನ್ನು ದ್ವಿಗುಣಗೊಳಿಸಿದೆ. ನಿವೃತ್ತಿ ಹಂತದ ಮತ್ತು ಕೆಲಸ ಮಾಡಲು ಸಾಧ್ಯವಾಗದ ಅಧಿಕಾರಗಳನ್ನು ಸರ್ಕಾರ ನಿಯೋಜನೆ ಮಾಡುತ್ತಿದೆಯೆಂದು ಬೋಪಯ್ಯ ಆರೋಪಿಸಿದರು.
ಹಿರಿಯ ವಕೀಲರು ಹಾಗೂ ಕಾಂಗ್ರೆಸ್ ಮುಖಂಡರಾದ ಹೆಚ್.ಎಸ್.ಚಂದ್ರಮೌಳಿ ಮಾತನಾಡಿ, ರಾಜಕಾರಣವನ್ನು ವೃತ್ತಿಯನ್ನಾಗಿ ಮಾಡಿಕೊಂಡಿರುವ ವ್ಯಕ್ತಿಗಳಿಂದ ಕೊಡಗು ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳು ಪರಿಹಾರವಾಗದೆ ಹಾಗೇ ಉಳಿದುಕೊಂಡಿವೆ ಎಂದು ಅಭಿಪ್ರಾಯಪಟ್ಟರು. ಇಲ್ಲಿನ ರಾಜಕಾರಣಿಗಳಲ್ಲಿ ಇಚ್ಛಾಶಕ್ತಿಯ ಕೊರತೆ ಇದೆ. ಜನರ ಭಾವನೆಗಳಿಗೆ ಸ್ಪಂದಿಸುವ ಶಾಸಕರ ಅಗತ್ಯವಿದೆ. ಜಿಲ್ಲೆಯಲ್ಲಿ ದಂಧೆ, ಲೂಟಿ ನಡೆಯುತ್ತಿದ್ದೂ ಎಲ್ಲರೂ ಮೂಕ ಪ್ರೇಕ್ಷಕರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜನಸಾಮಾನ್ಯರ ಮೇಲೆ ಸವಾರಿ ಮಾಡುವ ರಾಜಕಾರಣಿಗಳಿಂದ ಕೊಡಗಿನ ಹಿತರಕ್ಷಣೆ ಸಾಧ್ಯವಿಲ್ಲ. ಕೊಡಗು ಜಿಲ್ಲೆಯಿಂದ ಐಎಎಸ್, ಐಪಿಎಸ್ನಂತಹ ಉನ್ನತ ಹುದ್ದೆಯನ್ನು ಅಲಂಕರಿಸುವ ವಿದ್ಯಾರ್ಥಿಗಳು ಹೊರ ಹೊಮ್ಮುತ್ತಿಲ್ಲ. ಸಂವಿಧಾನದಲ್ಲಿ ಸಾಕಷ್ಟು ಅವಕಾಶಗಳನ್ನು ನೀಡಲಾಗಿದೆ. ಇದನ್ನು ಪ್ರತಿಯೊಬ್ಬರು ಬಳಸಿಕೊಳ್ಳಬೇಕು. ಜನರಿಗೆ ನೆಮ್ಮದಿ ತರುವ ಶಾಸಕರು ಬೇಕೇ ಹೊರತು, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯತ್ ಬಗ್ಗೆ ಪ್ರಸ್ತಾಪಿಸುವ ಶಾಸಕರುಗಳ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ನಮ್ಮ ಪಕ್ಷದ ಪ್ರಣಾಳಿಕೆ ತಯಾರಾಗುವ ಹಂತದಲ್ಲಿದೆ. ಕೊಡಗು ಜಿಲ್ಲೆಗೆ ಏನು ಆಗಬೇಕು ಎನ್ನುವುದನ್ನು ಜನರೆ ಮನವಿ ರೂಪದಲ್ಲಿ ನೀಡಿದರೆ ಅದನ್ನು ಪ್ರಣಾಳಿಕೆಯಲ್ಲಿ ಸೇರ್ಪಡೆಗೊಳಿಸಿ ಈಡೇರಿಸುವ ಪ್ರಯತ್ನ ಮಾಡುವುದಾಗಿ ಚಂದ್ರಮೌಳಿ ಭರವಸೆ ನೀಡಿದರು. ಇಚ್ಛಾಶಕ್ತಿಯ ರಾಜಕಾರಣಿಗಳ ಕೊರತೆಯಿಂದ ದೇಶದ ಜನ ಹತಾಶರಾಗಿದ್ದು, ಗುಜರಾತ್ ಚುನಾವಣೆ ಸಂದರ್ಭ ಸುಮಾರು 5 ಲಕ್ಷ ಮತಗಳು ನೋಟಾಕ್ಕೆ ಬಿದ್ದಿರುವುದೆ ಇದಕ್ಕೆ ಸಾಕ್ಷಿಯಾಗಿದೆ ಎಂದು ಚಂದ್ರಮೌಳಿ ತಿಳಿಸಿದರು.
ಮಾಜಿ ಸಚಿವ ಬಿ.ಎ.ಜೀವಿಜಯ ಮಾತನಾಡಿ, ಜನರು ನೀಡಿದ ಅಧಿಕಾರವನ್ನು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಯಾರು ದುರುಪಯೋಗ ಪಡಿಸಬಾರದೆಂದರು. ಜನಸೇವೆಗೆ ಇಚ್ಛಾಶಕ್ತಿ ಮುಖ್ಯವೆಂದು ಅವರು ಅಭಿಪ್ರಾಯಪಟ್ಟರು.
ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸಂಕೇತ್ ಪೂವಯ್ಯ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯೋಜನೆಯನ್ನು ರೂಪಿಸುವ ಸಂದರ್ಭ ಜಿಲ್ಲೆಯ ಜನರ ಅಭಿಪ್ರಾಯಗಳಿಗೆ ಮನ್ನಣೆ ನೀಡುತ್ತಿಲ್ಲವೆಂದು ಟೀಕಿಸಿದರು. ಇಂದು ಜಿಲ್ಲೆಯಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗದ ಮೇಲಿನ ನಂಬಿಕೆ ದೂರವಾಗಿದ್ದು, ಜನರು ನ್ಯಾಯಾಂಗ ಮತ್ತು ಪತ್ರಿಕಾರಂಗದ ಮೇಲೆ ಮಾತ್ರ ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆಂದು ಹೇಳಿದರು.
ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ಸಂಸದರಿಲ್ಲ. ವಿಧಾನಸಭಾ ಕ್ಷೇತ್ರವನ್ನು ಕೂಡ ಪುನರ್ವಿಂಗಡಿಸಿ ಕೇವಲ ಎರಡು ಕ್ಷೇತ್ರಗಳನ್ನು ಮಾಡಲಾಗಿದೆ. ಆದರೆ, ಗೋವಾದಂತಹ ರಾಜ್ಯದಲ್ಲಿ 35 ರಿಂದ 40 ಸಾವಿರ ಜನಸಂಖ್ಯೆಗೆ ಒಬ್ಬ ಶಾಸಕನ ಆಯ್ಕೆಯಾಗುತ್ತಿದೆ. ಒಟ್ಟಿನಲ್ಲಿ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದ್ದು, ಈ ಬಗ್ಗೆ ಜನ ಒಗ್ಗೂಡಿ ಸಮಿತಿಯೊಂದನ್ನು ರಚಿಸಿ ಪ್ರಗತಿಗಾಗಿ ಹೋರಾಡಬೇಕಾಗಿದೆ ಎಂದು ಸಂಕೇತ್ ಪೂವಯ್ಯ ತಿಳಿಸಿದರು.
ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಪದ್ಮಿನಿ ಪೊನ್ನಪ್ಪ ಮಾತನಾಡಿ, ಜಿಲ್ಲೆಯ ರಸ್ತೆಗಳ ಅಬಿವೃದ್ಧಿಗೆ ನಾಲ್ಕು ಗಡಿ ಚೆಕ್ ಪೋಸ್ಟ್ಗಳಲ್ಲಿ ಸುಂಕ ಸಂಗ್ರಹಿಸುವ ವ್ಯವಸ್ಥೆಯಾಗಬೇಕೆಂದು ಸಲಹೆ ನೀಡಿದರು. ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕೂಡ ಪ್ರವೇಶ ಶುಲ್ಕವನ್ನು ಸಂಗ್ರಹಿಸಬೇಕೆಂದರು. ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದಿಂದಾಗಿ ಕೆರೆಗಳು ಮುಚ್ಚಲ್ಪಡುತ್ತಿವೆ. ಕೆರೆಗಳಿಗೆ ಪುನರ್ಜೀವ ನೀಡಲು ಮಳೆಗಾಲದಲ್ಲಿ ತುಂಬಿ ಹರಿಯುವ ಕಾವೇರಿ ನದಿ ನೀರನ್ನು ಕೆರೆಗಳಿಗ ಭರ್ತಿ ಮಾಡಬೇಕು ಮತ್ತು ಆ ಮೂಲಕ ಅಂತರ್ಜಲವನ್ನು ಹೆಚ್ಚಿಸುವ ಅಗತ್ಯವಿದೆ ಎಂದರು.
ಕೊಡಗಿನ ಹಕ್ಕೊತ್ತಾಯಗಳನ್ನು ಮಂಡಿಸಲು ಕುಂದುಕೊರತೆ ನಿವಾರಣಾ ಸಮಿತಿಯನ್ನು ರಚಿಸುವಂತೆ ಪದ್ಮಿನಿ ಪೊನ್ನಪ್ಪ ಸಲಹೆ ನೀಡಿದರು.
ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಅವರು ಸಮಾರೋಪ ಭಾಷಣ ಮಾಡಿ, ಕೊಡಗು ಜಿಲ್ಲೆ ಸಮರ್ಥ ನಾಯಕರಿಲ್ಲದೆ ಅನಾಥವಾಗಿದ್ದು, ಅಸಹಾಯಕತೆ ವ್ಯಕ್ತಪಡಿಸುವ ಜನಪ್ರತಿನಿಧಿಗಳ ಅಗತ್ಯ ಈ ಜಿಲ್ಲೆಗೆ ಇಲ್ಲವೆಂದರು. ನಮ್ಮನ್ನು ಸಮಾಧಾನ ಪಡಿಸುವ ಅಗತ್ಯವಿಲ್ಲ, ಬದಲಿಗೆ ಸಮಸ್ಯೆಗಳ ವಿರುದ್ಧ ಗುಡುಗುವ ಮತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತಹ ಹೋರಾಟಕ್ಕೆ ಇಳಿಯುವ ಜನಪ್ರತಿನಿಧಿಗಳು ಬರಬೇಕು ಎಂದರು.
ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯ್ಲಿ ಹೊರತು ಪಡಿಸಿದಂತೆ ಇಲ್ಲಿಯವರೆಗೆ ಯಾವೊಬ್ಬ ಜನಪ್ರತಿನಿಧಿಯೂ ಕೊಡಗಿನ ಅಭಿವೃದ್ಧಿಗಾಗಿ ಪ್ರತ್ಯೇಕ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವ ಕಾಳಜಿ ತೋರಿಲ್ಲ. ಕೊಡಗಿನ ಪರವಾಗಿ ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರು ಗುಡುಗುತ್ತಿದ್ದರು ಎಂದು ಜ್ಞಾಪಿಸಿಕೊಂಡ ಜಿ.ರಾಜೇಂದ್ರ, ಕೊಡಗು ಜಿಲ್ಲೆಯಲ್ಲಿ ಇಚ್ಛಾಶಕ್ತಿಯ ನಾಯಕತ್ವದ ಕೊರತೆ ಇದೆ ಎಂದರು. ಮಡಿಕೇರಿ ನಗರದ ರಸ್ತೆಗಳು
ಮುಖ್ಯಮಂತ್ರಿ ಬರುವ ಸಂದರ್ಭ ದುರಸ್ತಿ ಕಂಡವು. ಆದರೆ, ಇದೀಗ ರಾಜಾಸೀಟು ವ್ಯಾಪ್ತಿಯ ರಸ್ತೆಯನ್ನು ಸಂಪೂರ್ಣವಾಗಿ ಅಗೆದು ಹಾಕಲಾಗಿದೆ. ಯುಜಿಡಿ ಹೆಸರಿನಲ್ಲಿ ಕೋಟಿ ಕೋಟಿ ಹಣ ಏನಾಗುತ್ತಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಇದನ್ನೆಲ್ಲ ಕೇಳುವವರು ಯಾರು ಎಂದು ಪ್ರಶ್ನಿಸಿದ ಜಿ.ರಾಜೇಂದ್ರ ಕೊಡಗು ಅನಾಥವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರದ ಖಾತೆಯಲ್ಲಿ ಹಣವಿದ್ದರು ಅಭಿವೃದ್ಧಿಗೆ ಖರ್ಚಾಗುತ್ತಿಲ್ಲ. ಇಲ್ಲಿನ ಅವ್ಯವಸ್ಥೆಗಳ ಬಗ್ಗೆ ಮುಖ್ಯಮಂತ್ರಿಗಳು ಬಂದಾಗಲೆಲ್ಲ ಮನವಿ ನೀಡುತ್ತಲೆ ಬರಲಾಗಿದೆ. ಆದರೆ, ಇಲ್ಲಿಯವರೆಗೆ ಯಾವುದೇ ಸ್ಪಂದನೆ ದೊರೆತ್ತಿಲ್ಲ. ಈ ಹಿಂದಿನ ಸರ್ಕಾರ 1800 ಕೋಟಿ ಮತ್ತು ಈಗಿನ ಸರ್ಕಾರ ಕೋಟಿ ಕೋಟಿ ನೀಡಿದೆಯೆಂದು ಹೇಳಲಾಗುತ್ತಿದೆ. ಆದರೆ, ಈ ಕೋಟಿ ಎಲ್ಲಿಗೆ ಹೋಗುತ್ತಿದೆ ಎಂದು ಜಿ.ರಾಜೇಂದ್ರ ಪ್ರಶ್ನಿಸಿದರು.
ಕೊಡಗಿನಲ್ಲಿ ಪ್ರಶ್ನೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಸಂಘ ಸಂಸ್ಥೆಗಳ ಹೋರಾಟ ತಮ್ಮ ಗುಂಪಿನ ಕೆಲಸ ಕಾರ್ಯಗಳು ಪೂರ್ಣಗೊಳ್ಳುವವರೆಗೆ ಮಾತ್ರ ಸೀಮಿತವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ಬಂದು ಇಷ್ಟು ವರ್ಷವೆ ಆಗಿದ್ದರು ಮುಜರಾಯಿ ಸಚಿವರು ಜಿಲ್ಲೆಗೆ ಭೇಟಿ ನೀಡಿಲ್ಲವೆಂದು ಆರೋಪಿಸಿದರು. ಮುಜರಾಯಿ ಸಚಿವರ ಹೆಸರೇ ಏನೆಂದು ಯಾರಿಗೂ ತಿಳಿದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಜಾಸತ್ಯ ದಿನಪತ್ರಿಕೆಯ ಸಂಪಾದಕರಾದ ಡಾ.ಬಿ.ಸಿ.ನವೀನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಪ್ರಭ ದಿನಪತ್ರಿಕೆಯ ಬ್ಯೂರೋ ಮುಖ್ಯಸ್ಥ ಅಂಶಿ ಪ್ರಸನ್ನ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.