ಮೃತ ದೀಪಕ್ ರಾವ್, ಬಶೀರ್ ನಿವಾಸಗಳಿಗೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ
ದೀಪಕ್ ರಾವ್, ಬಶೀರ್ ನಿವಾಸದಲ್ಲಿ ಮಾಜಿ ಪ್ರಧಾನಿ ದೇವೇಗೌಡ
ಮಂಗಳೂರು, ಜ. 21: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕಾಟಿಪಳ್ಳದ ದೀಪಕ್ ರಾವ್ ಹಾಗೂ ಆಕಾಶಭವನದ ಅಬ್ದುಲ್ ಬಶೀರ್ ಅವರ ಮನೆಗಳಿಗೆ ರವಿವಾರ ಭೇಟಿ ನೀಡಿದರು.
ದೀಪಕ್ ಅವರ ತಾಯಿ ಹಾಗೂ ಬಶೀರ್ ಅವರ ಕುಟುಂಬಗಳಿಗೆ ಸಾಂತ್ವನ ಹೇಳಿ ಸಮಾಧಾನದ ಮಾತುಗಳನ್ನಾಡಿದರು. ಅಲ್ಲದೆ, ಘಟನೆ ನಡೆದ ಸಂದರ್ಭದಲ್ಲೇ ಭೇಟಿ ನೀಡಬೇಕೆಂದು ಬಯಸಿದ್ದೆ. ಬರಲು ಸಾಧ್ಯವಾಗಲಲ್ಲಿ ಎಂದರು.
ದೀಪಕ್, ಬಶೀರ್ ಅವರ ಕುಟುಂಬದ ಸದ್ಯದ ಸ್ಥಿತಿಯ ಬಗ್ಗೆ ದೇವೇಗೌಡರು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್ ಅವರಿಂದ ಮಾಹಿತಿ ಪಡೆದುಕೊಂಡರು.
ಭೇಟಿಯ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್, ರಾಜ್ಯ ಕಾರ್ಯದರ್ಶಿ ಅಬ್ದುಲ್ ರವೂಫ್ ಪುತ್ತಿಗೆ, ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ, ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ಎಂ.ಕೆ. ಅಬ್ದುಲ್ ಖಾದರ್, ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ, ಜಿಲ್ಲಾ ಉಪಾಧ್ಯಕ್ಷ ರಘುನಾಥ್ ಪೈ, ಕಾರ್ಯಾಧ್ಯಕ್ಷ ರಾಮ ಗಣೇಶ್, ಯುವ ಜನತಾದಳ ದ.ಕ. ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ಡಿ.ಪಿ. ಹಮ್ಮಬ್ಬ, ಉಪೇಂದ್ರ ನಾಯಕ್, ಜಾಫರ್, ಮುಮ್ತಾಝ್ ಅಲಿ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ವಸಂತ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.