ಅತ್ತೂರು ಪುಣ್ಯಕ್ಷೇತ್ರ ಬಸಿಲಿಕಾದ ವಾರ್ಷಿಕ ಮಹೋತ್ಸವ ಆರಂಭ
ಕಾರ್ಕಳ, ಜ.21: ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರ ಬಸಿಲಿಕಾದ ಐದು ದಿನಗಳ ವಾರ್ಷಿಕ ಮಹೋತ್ಸವವು ರವಿವಾರ ಆರಂಭಗೊಂಡಿತು.
ಮುಂಜಾನೆ ನಡೆದ ಸಹೋದರತ್ವದ ರವಿವಾರದ ಸಂಭ್ರಮದ ಬಲಿಪೂಜೆ ಯನ್ನು ಶಿವಮೊಗ್ಗದ ವಂ.ವೀರೇಶ್ ಮೊರಾಸ್ ಅರ್ಪಿಸಿ, ಆನಂತರ ನಡೆದ ದಿವ್ಯ ಪರಮಪ್ರಸಾದದ ಮೆರವಣಿಗೆಯ ಮುಂದಾಳತ್ವವನ್ನು ವಹಿಸಿದರು. ಹಬ್ಬದ ಮೊದಲ ದಿನವನ್ನು ಪುಟಾಣಿ ಮಕ್ಕಳಿಗಾಗಿ ಸಮರ್ಪಿಸುವ ವಾಡಿಕೆಯಂತೆ ದಿನದ ಎರಡು ಬಲಿಪೂಜೆಗಳನ್ನು ಮಕ್ಕಳಿಗಾಗಿ ಅರ್ಪಿಸಲಾಯಿತು.
ಕಪುಚಿನ್ ಗುರು ವಂ.ಜೇಸನ್ ಪಾಯ್ಸ ಹಾಗೂ ಶಿವಮೊಗ್ಗದ ಧರ್ಮಾ ಧ್ಯಕ್ಷ ಅ.ವಂ.ಡಾ.ಫ್ರಾನ್ಸಿಸ್ ಸೆರಾವೊ ಮಕ್ಕಳಿಗಾಗಿ ಬಲಿಪೂಜೆ ಅರ್ಪಿಸಿದರು. ಬಳಿಕ ಮಾತನಾಡಿದ ಅ.ವಂ.ಡಾ.ಫ್ರಾನ್ಸಿಸ್ ಸೆರಾವೊ, ಬಡವರಿಗೆ ಮಾಡುವ ಸಹಾಯ ಎಂದಿಗೂ ವ್ಯರ್ಥವಾಗು ವುದಿಲ್ಲ. ಬಡವರು ಹಾಗೂ ನಿರಾಶ್ರೀತರಿಗೆ ಸಹಾಯ ಮಾಡುವುದು ಐಚ್ಛಿಕ ವಿಚಾರವಲ್ಲ, ಬದಲಾಗಿ ಅದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ರಾಜ್ಯಸಭಾ ಸದಸ್ಯ ಆಸ್ಕರ್ ಫೆೆರ್ನಾಂಡಿಸ್ ಹಾಗೂ ಬ್ಲೋಸಂ ಫೆರ್ನಾಂಡಿಸ್ ಬೆಳಗ್ಗಿನ ವಿಶೇಷ ಪೂಜೆಯಲ್ಲಿ ಹಾಜರಿದ್ದರು. ಉಡುಪಿಯ ಎಸ್ಪಿ ಲಕ್ಷಣ್ ನಿಂಬರ್ಗಿ, ಹೆಚ್ಚುವರಿ ಎಸ್ಪಿ ಕುಮಾರ್ ಚಂದ್ರ ಹಾಗೂ ಎಎಸ್ಪಿ ರಿಶಿಕೇಶ್ ಸೋನಾವನಿ ಆಗಮಿಸಿದರು.
ಐದು ದಿನಗಳ ಮಹೋತ್ಸವಕ್ಕಾಗಿ ಎಲ್ಲಾ ಸಿದ್ಧತೆಗಳು ನಡೆದಿದ್ದು, ಸುಮಾರು 500ರಷ್ಟು ಸ್ವಯಂಸೇವಕರು ನೇಮಿಸಲಾಗಿದೆ. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಧರ್ಮಗುರುಗಳು ಕ್ರೈಸ್ತ ಭಕ್ತಾದಿಗಳಿಗೆ ಪಾಪ ನಿವೇದನೆಯ ಸಂಸ್ಕಾರ ವನ್ನು ನೀಡಿದರು. ಉಡುಪಿಯ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಲೋಬೋ ಬೆಳಗ್ಗಿ ನಿಂದಲೇ ಪುಣ್ಯಕ್ಷೇತ್ರದಲ್ಲಿದ್ದು ಮುಂದಿನ ಐದು ದಿನಗಳ ಕಾರ್ಯಕ್ರಮಗಳ ಮೇಲ್ವಿಚಾರಣೆಯನ್ನು ನಡೆಸಲಿರುವರು.
ಕಪುಚಿನ್ ಗುರು ಅಭ್ಯರ್ಥಿಗಳು
ಪುಣ್ಯಕ್ಷೇತ್ರದಲ್ಲಿ ಸೇವಾ ಕಾರ್ಯವನ್ನು ನಡೆಸಲು ರಾಯಚೂರಿನ ಪೋತ್ನಾಳ ದಿಂದ ಬಂದ ಕಪುಚಿನ್ ಸಭೆಯ ಗುರು ಅ್ಯರ್ಥಿಗಳು ತಮ್ಮ ಕಂದು ಬಣ್ಣದ ನಿಲುವಂಗಿಗಳನ್ನು ಧರಿಸಿ ಪುಣ್ಯಕ್ಷೇತ್ರದಲ್ಲಿ ಭಕ್ತಾಧಿಗಳಿಗೆ ಹೂ-ತೀರ್ಥ ಪ್ರಸಾದ ವನ್ನು ವಿತರಿಸಿ ಎಲ್ಲರ ಗಮನವನ್ನು ಸೆಳೆದರು. ಫ್ರಾನ್ಸಿಸ್ಕನ್ ಕಪುಚಿನ್ ಸಭೆಯ ಇವರನ್ನು ಸೇವೆಯನ್ನು ಭಕ್ತಾಧಿಗಳು ಶ್ಲಾಘಿಸಿದರು.