ನನ್ನ ಆತ್ಮಕತೆ 'ಸಾಲ ಮೇಳದ ಸಂಗ್ರಾಮ' ಜ.26ರಂದು ಬಿಡುಗಡೆ: ಜನಾರ್ದನ ಪೂಜಾರಿ
ಮಂಗಳೂರು, ಜ.22: 'ಸಾಲ ಮೇಳದ ಸಂಗ್ರಾಮ' ಎಂಬ ಹೆಸರಿನ ನನ್ನ ಆತ್ಮಕಥೆಯನ್ನು ಜ.26ರ ಪ್ರಜಾಪ್ರಭುತ್ವ ದಿನದಂದು ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ನಾನೇ ಬಿಡುಗಡೆ ಮಾಡುವುದಾಗಿ ಕಾಂಗ್ರೆಸ್ ಮುಖಂಡ, ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಒಂಬತ್ತು ಅಧ್ಯಾಯಗಳನ್ನು ಒಳಗೊಂಡಿರುವ 210 ಪುಟಗಳನ್ನು ಈ ಪುಸ್ತಕ ಒಳಗೊಂಡಿದೆ. ಇಂಗ್ಲಿಷ್, ಹಿಂದಿಯ ಅನುವಾದಿತ ಕೃತಿಯೂ ಇದೇ ಸಂದರ್ಭ ಬಿಡುಗಡೆ ಮಾಡುವ ಗುರಿ ಹೊಂದಿದ್ದೇನೆ. ನನ್ನ ಅನುಭವಗಳನ್ನು ಪತ್ರಕರ್ತ ಲಕ್ಷ್ಮಣ ಕೊಡಸೆ ಅಕ್ಷರ ರೂಪಕ್ಕಿಳಿಸಿದ್ದಾರೆ. ಸಂತೋಷ್ ಕುಮಾರ್ ಮತ್ತು ದೀಪಕ್ ಪೂಜಾರಿ ಪುಸ್ತಕದ ಪ್ರಕಾಶಕರಾಗಿದ್ದಾರೆ ಎಂದವರು ವಿವರಿಸಿದರು.
ಆತ್ಮಕಥೆಯಲ್ಲಿ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಪಿ.ವಿ.ನರಸಿಂಹ ರಾವ್ ಅವರೊಂದಿಗಿನ ಒಡನಾಟ ಹಾಗೂ ನನ್ನ ಬದುಕಿನ ಬಾಲ್ಯದ ವಿವರಗಳ ಜೊತೆಗೆ ಸಮಕಾಲೀನ ರಾಜಕೀಯ, ಚರಿತ್ರೆಯ ಸಂಗತಿಗಳನ್ನು ನನಗೆ ನೆನಪಿರುವಷ್ಟರವರೆಗೆ ದಾಖಲಿಸಿದ್ದೇನೆ. ದಲಿತ ಮಹಿಳೆಯ ಪಾದ ಪೂಜೆ ಮಾಡಿರುವುದನ್ನು, ವಿಧವೆಯರಿಗೆ ಗೌರವ ಸಲ್ಲಿಸಿರುವುದನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದೇನೆ ಎಂದು ಪೂಜಾರಿ ತಿಳಿಸಿದರು.