ಗುಂಡ್ಲುಪೇಟೆ: 87 ಲಕ್ಷ ರೂಪಾಯಿ ವೆಚ್ಚದ ಡಾರ್ಮೇಟರಿ ನಿರ್ಮಾಣಕ್ಕೆ ಭೂಮಿ ಪೂಜೆ
ಗುಂಡ್ಲುಪೇಟೆ,ಜ.22: ಬರಗಿಯ ಕಾಡಂಚಿನ ಪ್ರದೇಶದಲ್ಲೂ ಆಶ್ರಮ ಶಾಲೆ ತೆರೆಯಲು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಗೀತಾ ಮಹದೇವ ಪ್ರಸಾದ್ ಅವರು ತಿಳಿಸಿದರು.
ತಾಲ್ಲೂಕಿನ ಮದ್ದೂರು ಕಾಲೋನಿಯಲ್ಲಿ ಇರುವ ಗಿರಿಜನ ಆಶ್ರಮಶಾಲೆಯಲ್ಲಿ 87 ಲಕ್ಷ ರೂಪಾಯಿ ವೆಚ್ಚದ ಡಾರ್ಮೇಟರಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲೂಕಿನ ಕಾಡಂಚಿನ ಪ್ರದೇಶದಲ್ಲಿ ಹಲವಾರು ಹಳ್ಳಿಗಳು ಮತ್ತು ಹಾಡಿಗಳು ಇವೆ. ಇಲ್ಲಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಸರ್ಕಾರ ಆಶ್ರಮ ಶಾಲೆಗಳನ್ನು ತೆರೆದಿದೆ. ಪ್ರಸ್ತುತ ಬಂಡೀಪುರ ಮತ್ತು ಮದ್ದೂರು ಕಾಲೋನಿಯಲ್ಲಿ ಶಾಲೆಗಳಿದ್ದು, ಬರಗಿ ಸುತ್ತಮುತ್ತಲು 12ಕ್ಕೂ ಹೆಚ್ಚು ಹಾಡಿಗಳು ಇರುವುದರಿಂದ ಅಲ್ಲೂ ಸಹ ಆಶ್ರಮ ಶಾಲೆ ತೆರೆಯುವ ಯೋಚನೆ ಇದೆ ಎಂದರು,
ಗಿರಿಜನ ಮಕ್ಕಳು ಆಧುನಿಕ ಜಗತ್ತಿನಲ್ಲಿ ಮುಖ್ಯವಾಹಿನಿಗೆ ಬರಲು ಶಿಕ್ಷಣವೇ ಪ್ರಮುಖ ಸಾಧನ. ಆದ್ದರಿಂದ ಗಿರಿಜನರು ತಮ್ಮ ಮೂಲ ಸಂಸ್ಕೃತಿಯನ್ನು ಬಿಟ್ಟುಕೊಡದೆ ಶಿಕ್ಷಣವನ್ನು ಸಂಪಾದಿಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಸಚಿವರು ಕಿವಿಮಾತು ಹೇಳಿದರು.
ಜಿಲ್ಲಾ ಪಂಚಾಯತ್ ಸದಸ್ಯ ಮಳವಳ್ಳಿ ಚನ್ನಪ್ಪ, ಗ್ರಾಪಂ ಅಧ್ಯಕ್ಷ ರಾಜೇಶ್ ಮಾತನಾಡಿದರು. ಎಪಿಎಂಸಿ ಅಧ್ಯಕ್ಷ ಬಿ.ಕೆ.ಶಿವಪ್ಪ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಎಚ್.ಎನ್.ನಟೇಶ್, ಜಿಪಂ ಸದಸ್ಯ ಬೊಮ್ಮಯ್ಯ, ತಾಪಂ ಇಓ ಡಾ.ಕೃಷ್ಣಮೂರ್ತಿ, ಸರ್ಕಲ್ ಇನ್ಸ್ ಪೆಕ್ಟರ್ ಎಚ್.ಎನ್.ಬಾಲಕೃಷ್ಣ ಮತ್ತಿತರರು ಹಾಜರಿದ್ದರು