ರೈತರನ್ನು ಅಪ್ಪಿಕೊಳ್ಳಿ ಎಂದ ಕಾಂಗ್ರೆಸ್ ಅಧ್ಯಕ್ಷ
ಮೋದಿಯ ಆಲಿಂಗನ ರಾಜತಾಂತ್ರಿಕತೆಗೆ ರಾಹುಲ್ ಅಣಕ
ಹೊಸದಿಲ್ಲಿ,ಜ.22: ಜಾಗತಿಕ ನಾಯಕರನ್ನು ಭೇಟಿಯಾಗುವಾಗ ಅವರನ್ನು ಪ್ರಧಾನಿ ನರೇಂದ್ರ ಮೋದಿ ಆಲಿಂಗಿಸಿಕೊಳ್ಳುತ್ತಿರುವುದಕ್ಕಾಗಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸೋಮವಾರ ವ್ಯಂಗ್ಯಭರಿತವಾದ ಕವನವೊಂದನ್ನು ಟ್ವೀಟ್ ಮಾಡಿದ್ದಾರೆ. ‘ತನ್ನನ್ನು ಸಾಮಾನ್ಯ ಮನುಷ್ಯನೆಂದು ಕರೆದುಕೊಳ್ಳುವ ವ್ಯಕ್ತಿಯು, ವಿಶೇಷ ವ್ಯಕ್ತಿಗಳನ್ನು ಮಾತ್ರ ಅಪ್ಪಿಕೊಳ್ಳುತ್ತಾರೆ. ಮೋದಿಜಿಯವರಿಂದ ಆಲಿಂಗನ ಪಡೆಯಲಿರುವವರ ಪಟ್ಟಿಯಲ್ಲಿ ರೈತರು ಹಾಗೂ ಸೈನಿಕರು ಕೂಡಾ ಇರಬೇಕಾಗಿದೆ’ ಎಂದು ರಾಹುಲ್ ಟ್ವೀಟಿಸಿದ್ದಾರೆ.
ಜಾಗತಿಕ ನಾಯಕರನ್ನು ಆಲಿಂಗಿಸಿಕೊಳ್ಳುವ ಬಗ್ಗೆ ಮೋದಿಯವರನ್ನು ಇತ್ತೀಚೆಗೆ ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ಪ್ರಶ್ನಿಸಲಾಗಿತ್ತು. ಅದಕ್ಕವರು, ನಾನೋರ್ವ ಸಾಮಾನ್ಯ ಮನುಷ್ಯ ನಾಗಿದ್ದು, ನಿಗದಿತ ಶಿಷ್ಟಾಚಾರಗಳ ಬಗ್ಗೆ ತನಗೆ ಅರಿವಿಲ್ಲ. ಇದು ತನ್ನ ಶಕ್ತಿಯೂ ಆಗಿದೆಯೆಂದು ಅವರು ಹೇಳಿದ್ದಾರೆ. ತನ್ನ ಮುಕ್ತ ನಡ ವಳಿಕೆಯು ಜಾಗತಿಕ ನಾಯಕರ ಮೆಚ್ಚುಗೆ ಗಳಿಸಿದೆಯೆಂದವರು ಹೇಳಿದ್ದರು.
ಕಳೆದ ವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಭಾರತಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ, ಕಾಂಗ್ರೆಸ್ ಪಕ್ಷವು ಹಗ್ಪ್ಲೊಮಸಿ(‘ಅಲಿಂಗನ ರಾಜತಾಂತ್ರಿಕತೆ) ಎಂಬ ಹ್ಯಾಶ್ಟ್ಯಾಗ್ ನೊಂದಿಗೆ ಮೋದಿ, ಜಾಗತಿಕ ನಾಯಕರನ್ನು ಆಲಿಂಗಿಸುವ ವಿಡಿಯೋವೊಂದನ್ನು ಪ್ರಸಾರ ಮಾಡಿತ್ತು.