ಮುಸ್ಲಿಮ್ ಪುರುಷರನ್ನು ಜೈಲಿಗಟ್ಟಿ, ಮಹಿಳೆಯರನ್ನು ಬೀದಿಪಾಲು ಮಾಡಲು ತ್ರಿವಳಿ ತಲಾಖ್ ತಂತ್ರ: ಉವೈಸಿ ಆರೋಪ
ಔರಂಗಾಬಾದ್, ಜ.23: ತ್ರಿವಳಿ ತಲಾಖ್ ಮಸೂದೆ ಮುಸ್ಲಿಮರ ವಿರುದ್ಧದ ಪಿತೂರಿಯಾಗಿದ್ದು ಸಮುದಾಯದ ಪುರುಷರನ್ನು ಶಿಕ್ಷಿಸುವ ಉದ್ದೇಶ ಹೊಂದಿದೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಉವೈಸಿ ಆರೋಪಿಸಿದ್ದಾರೆ.
ತ್ರಿವಳಿ ತಲಾಖ್ ಮಸೂದೆ ಕುರಿತು ಕೇಂದ್ರ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ‘ಪದ್ಮಾವತ್’ ಸಿನೆಮದ ಕುರಿತು ಸಮಿತಿಯೊಂದನ್ನು ರಚಿಸಲಾಗುತ್ತದೆ. ಆದರೆ ತ್ರಿವಳಿ ತಲಾಖ್ ವಿಷಯದಲ್ಲಿ ಯಾಕೆ ಸಮಿತಿ ರಚಿಸಲಾಗಿಲ್ಲ ಎಂದು ಪ್ರಶ್ನಿಸಿದರು.
ಸೋಮವಾರ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ತ್ರಿವಳಿ ತಲಾಖ್ ಮಸೂದೆಯ ಮೂಲಕ ಮುಸ್ಲಿಮ್ ಮಹಿಳೆಯರನ್ನು ಬೀದಿಪಾಲು ಮಾಡಿ , ಮುಸ್ಲಿಮ್ ಪುರುಷರನ್ನು ಜೈಲಿಗೆ ಕಳಿಸುವ ಪಿತೂರಿ ನಡೆಸಲಾಗಿದೆ ಎಂದು ದೂರಿದರು.
ಇದೇ ಸಂದರ್ಭ ಅವರು, ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ಪಡೆಯುವವರನ್ನು ಸಾಮಾಜಿಕ ಬಹಿಷ್ಕಾರಕ್ಕೆ ಗುರಿಪಡಿಸುವಂತೆ ಮುಸ್ಲಿಮ್ ಸಮುದಾಯವನ್ನು ಕೋರಿದರು. ಅಲ್ಲದೆ ಮುಂಬರುವ ಬಜೆಟ್ನಲ್ಲಿ 2,000 ಕೋಟಿ ರೂ. ಮೊತ್ತವನ್ನು ಮುಸ್ಲಿಮ್ ಮಹಿಳೆಯರಿಗೆ ನಿಗದಿಗೊಳಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದರು.
ಬಿಜೆಪಿಯು ಮುಸ್ಲಿಮ್ ಮುಕ್ತ ಭಾರತದ ಕನಸು ಕಾಣುತ್ತಿದೆ. ಆದರೆ ಇದೆಂದೂ ಸಾಧ್ಯವಾಗದು . ಮುಸ್ಲಿಮ್ ಹಾಗೂ ದಲಿತ ಸಮುದಾಯದವರು ಎಚ್ಚೆತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು . ಕೇಂದ್ರ ಸರಕಾರವು ಸಾವರ್ಕರ್ ಅವರ ಸಿದ್ಧಾಂತವನ್ನು ಬಲವಂತವಾಗಿ ಹೇರಲು ಬಯಸುತ್ತಿದೆ. ಆದರೆ ಗೋಳ್ವಾಲ್ಕರ್, ಹೆಡ್ಗೆವಾರ್ ಮತ್ತು ಸಾವರ್ಕರ್ ಅವರ ಚಿಂತನೆಯನ್ನು ನಾವು ಒಪ್ಪುವುದಿಲ್ಲ ಎಂದು ಉವೈಸಿ ಹೇಳಿದರು. ದೇಶಕ್ಕಾಗಿ ಏನನ್ನೂ ಮಾಡದ ಪ್ರಧಾನಿ ನರೇಂದ್ರ ಮೋದಿ, ಇತರರು ಮಾಡಿದ ಕೆಲಸದ ಶ್ರೇಯಸ್ಸನ್ನು ತಾನು ಪಡೆಯಲು ಬಯಸುತ್ತಾರೆ ಎಂದು ಆರೋಪಿಸಿದರು.
ಜನವರಿ 1ರಂದು ನಡೆದ ಕೋರೆಗಾಂವ್ ಭೀಮಾ ಹಿಂಸಾಚಾರ ಪ್ರಕರಣದಲ್ಲಿ ಶಿವಪ್ರತಿಷ್ಠಾನದ ಸಂಭಾಜಿ ಭಿಡೆ ಹಾಗೂ ‘ಹಿಂದೂ ಏಕತಾ ಅಘಾದಿ’ಯ ಮಿಲಿಂದ್ ಎಕ್ಬೋಟೆಯನ್ನು ಇನ್ನೂ ಯಾಕೆ ಬಂಧಿಸಲಾಗಿಲ್ಲ ಎಂದವರು ಪ್ರಶ್ನಿಸಿದರು.