ಗ್ರಾಮಸಭೆಗಳು ಸದೃಢವಾಗಬೇಕಾಗಿರುವುದು ಇಂದಿನ ಅಗತ್ಯ: ಆಸ್ಕರ್
ಉಡುಪಿ, ಜ.23: ಪ್ರಸ್ತುತ ಗ್ರಾಮಸಭೆಗಳು ಇನ್ನಷ್ಟು ಸದೃಢವಾಗಬೇಕಾದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುತ್ತಿವೆ. ಕೆಳಮಟ್ಟದಲ್ಲಿ ಅಭಿವೃದ್ಧಿ ಕೆಲಸವಾದಾಗ ಮಾತ್ರವೇ ಗ್ರಾಮ ಸ್ವರಾಜ್ ಪರಿಕಲ್ಪನೆ ಸಾಕಾರಗೊಳ್ಳಲು ಸಾಧ್ಯ ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದ್ದಾರೆ.
ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಇತ್ತೀಚೆಗೆ ಆಯೋಜಿಸಲಾದ ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡುತಿದ್ದರು.
ರಾಜೀವ್ ಗಾಂಧಿ ಪಂಚಾಯತ್ರಾಜ್ ಸಂಘಟನೆಯ ರಾಜ್ಯ ಸಂಚಾಲಕ ಬಿ.ಎಂ.ಸಂದೀಪ್ ಮಾತನಾಡಿ ಸಂವಿಧಾನದ ತಿದ್ದುಪಡಿಯಿಂದ ಅಲ್ಪಸಂಖ್ಯಾ ತರು ಮತ್ತು ದಲಿತರು ಸಹ ಇಂದು ಚುನಾಯಿತರಾಗುತ್ತಿದ್ದಾರೆ. ಪಂಚಾ ಯತ್ ಮಟ್ಟದಲ್ಲಿ ಮಾಹಿತಿ ಸಂಗ್ರಹಿಸಿ ಜನರೊಂದಿಗೆ ಚರ್ಚಿಸಿ ನಂತರ ರಾಜ್ಯದ ಜನಪ್ರತಿನಿಧಿಗಳೊಂದಿಗೆ ಕೂಡಿ ಹೊಸ ಕಾನೂನುಗಳನ್ನು ರಚಿಸಲಾ ಗುತ್ತದೆ. ಈ ರೀತಿಯಾಗಿ ಪಂಚಾಯತಿಗೆ ಎಲ್ಲಾ ಅಧಿಕಾರವನ್ನು ನೀಡಲಾಗಿದೆ ಎಂದು ಹೇಳಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಗೌರವ ಸಲಹೆಗಾರ ಬಿ.ನರಸಿಂಹ ಮೂರ್ತಿ, ಬ್ಲೋಸಂ ಫೆರ್ನಾಂಡಿಸ್, ಜಿಲ್ಲಾ ಉಸ್ತುವಾರಿ ಡಾ. ಸುನೀತ ಶೆಟ್ಟಿ, ಸಹಸಂಯೋಜಕಿ ಮೇರಿ ಡಿಸೋಜ, ವಾಣಿ ಶೆಟ್ಟಿ, ನಾಗೇಶ್ ಉದ್ಯಾವರ, ಬ್ಲಾಕ್ ಸಂಯೋಜಕ ವೈ.ಬಿ.ರಾಘವೇಂದ್ರ, ಸೂರ್ಯ ಸಾಲ್ಯಾನ್, ವಿನಾಯಕ ರಾವ್, ಉದಯ ಶೆಟ್ಟಿ, ಸುರೇಶ್ ಶೆಟ್ಟಿ, ಭಾನು ಭಾಸ್ಕರ್, ದಿನೇಶ್ ಕೋಟ್ಯಾನ್, ಸತೀಶ್ ಜಪ್ತಿ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಸಂಯೋಜಕಿ ರೋಶನಿ ಒಲಿವರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.