ಅಧಿಕಾರಿಗಳು ಸಭೆಗೆ ಸರಿಯಾದ ಮಾಹಿತಿ ನೀಡಬೇಕು: ಕವಿತಾ ಲಿಂಗರಾಜು
ಚಿಕ್ಕಮಗಳೂರು, ಜ.23: ಜಿಲ್ಲೆಯಲ್ಲಿ ಇರುವ ರಸಗೊಬ್ಬರ ಅಂಗಡಿಗಳು ಮತ್ತು ಸೊಸೈಟಿಗಳಲ್ಲಿ ರಸಗೊಬ್ಬರಗಳ ದರ ಪಟ್ಟಿಯನ್ನು ಕಡ್ಡಾಯವಾಗಿ ಹಾಕುವಂತೆ ಅಧಿಕಾರಿಗಳು ಸೂಚಿಸಬೇಕೆಂದು ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕವಿತಾ ಲಿಂಗರಾಜು ತಿಳಿಸಿದರು.
ಅವರು ಮಂಗಳವಾರ ಜಿಪಂ ಸಭಾಂಗಣದಲ್ಲಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿ ಇಲಾಖೆ ವತಿಯಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುವಂತೆ ಇಲಾಖೆಯ ಮಾಹಿತಿಯನ್ನು ಚುನಾಯಿತ ಪ್ರತಿನಿಧಿಗಳಿಗೆ ಮತ್ತು ರೈತರಿಗೆ ತಿಳಿಸಬೇಕೆಂದರು.
ಜಿಲ್ಲೆಯ ಕೆಲವು ರಸಗೋಬ್ಬರ ಅಂಗಡಿಗಳಲ್ಲಿ ದರ ಪಟ್ಟಿ ಹಾಕದೆ ರೈತರಿಂದ ಹೆಚ್ಚಿನ ಹಣ ಪಡೆಯುತ್ತಿದ್ದಾರೆಂದು ಆರೋಪಗಳು ಬಂದಿವೆ. ಅಧಿಕಾರಿಗಳು ತಕ್ಷಣವೇ ಎಲ್ಲಾ ರಸಗೋಬ್ಬರ ಅಂಗಡಿಗಳನ್ನು ಪರಿಶೀಲಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಕೆಲವು ಅಂಗನವಾಡಿ ಕೇಂದ್ರ ಮತ್ತು ಸರ್ಕಾರಿ ಕಟ್ಟಡಗಲನ್ನು ಲ್ಯಾಂಡ್ ಆರ್ಮಿ ಇಲಾಖೆ ವತಿಯಿಂದ ನಿರ್ಮಿಸಿರುವ ಕಾಮಗಾರಿಗಳು ಗುಣ ಮಟ್ಟದಲ್ಲಿ ನಿರ್ಮಿಸದೆ ಕ್ಯೂರಿಂಗ್ ಸಹ ಸರಿಯಾಗಿ ಮಾಡದೆ ಕಳಪೆ ಗುಣ ಮಟ್ಟದಿಂದ ಕಟ್ಟಡಗಳನ್ನು ನಿರ್ಮಿಸಿದ್ದಾರೆ ಎಂದು ಕೆ.ಹೆಚ್.ಮಹೇಂದ್ರ ತಿಳಿಸಿದರು.
ಎನ್.ಆರ್ ಪುರದಲ್ಲಿ ಕೃಷಿ ಇಲಾಖೆ ಇದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಸರ್ಕಾರದಿಂದ ಬರುವ ಅನುದಾನದ ಬಗ್ಗೆ ಮಾಹಿತಿ ನೀಡುವ ಅಧಿಕಾರಿಗಳು ಸಹ ಯಾವುದೇ ಪ್ರಯೋಜನವಿಲ್ಲ. ಜನರು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ. ತಕ್ಷಣವೇ ಸೂಕ್ತ ಅಧಿಕಾರಿಗಳನ್ನು ನೇಮಿಸಿ ರೈತರಿಗೆ ಅನುಕೂಲ ಮಾಡಿ ಕೊಡುವಂತೆ ಶಿಲ್ಪರವಿ ತಿಳಿಸಿದರು.
ರೇಷ್ಮೆ ಬೆಳೆ, ಬಂಗಾರದ ಬೆಳೆ ಎಂದು ಹೇಳುತ್ತಾರೆ. ಆದರೆ ರೇಷ್ಮೆ ಇಲಾಖೆ ವತಿಯಿಂದ ರೈತರಿಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತಿಲ್ಲ ಎಂದು ಕೆ.ಆರ್.ಪ್ರಭಾಕರ್ ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಕಾವೇರಿ ಲಕ್ಕಪ್ಪ, ಲೋಲಾಕ್ಷಿ ಬಾಯಿ, ಜಿಪಂ ಉಪಕಾರ್ಯದರ್ಶಿ ರಾಜಗೋಪಾಲ್ ಉಪಸ್ಥಿತರಿದ್ದರು.