ಚಿಕ್ಕಮಗಳೂರು: ನಿವೇಶನಕ್ಕೆ ಭೂಮಿ ಮಂಜೂರಾತಿಗೆ ಒತ್ತಾಯಿಸಿ ಡಿಸಿಗೆ ಮನವಿ
![ಚಿಕ್ಕಮಗಳೂರು: ನಿವೇಶನಕ್ಕೆ ಭೂಮಿ ಮಂಜೂರಾತಿಗೆ ಒತ್ತಾಯಿಸಿ ಡಿಸಿಗೆ ಮನವಿ ಚಿಕ್ಕಮಗಳೂರು: ನಿವೇಶನಕ್ಕೆ ಭೂಮಿ ಮಂಜೂರಾತಿಗೆ ಒತ್ತಾಯಿಸಿ ಡಿಸಿಗೆ ಮನವಿ](https://www.varthabharati.in/sites/default/files/images/articles/2018/01/24/tegur villegers manavi.jpg)
ಚಿಕ್ಕಮಗಳೂರು, ಜ.24: ನಿವೇಶನ ರಹಿತರ ಅನುಕೂಲಕ್ಕಾಗಿ ಮೂರುಮನೆಹಳ್ಳಿ ವ್ಯಾಪ್ತಿಯ ಸ.ನಂ.303ರ 5.29 ಎಕರೆ ಗೋಮಾಳ ಜಾಗದಲ್ಲಿ 2 ಎಕರೆ ಜಮೀನು ಮಂಜೂರು ಮಾಡಿ ನಿವೇಶನ ಒದಗಿಸಿಕೊಡುವಂತೆ ಒತ್ತಾಯಿಸಿ ತೇಗೂರು ಗ್ರಾಪಂ ವ್ಯಾಪ್ತಿಯ ಮೂರುಮನೆಹಳ್ಳಿ ಜನರು ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಮೂರು ಮನೆ ಹಳ್ಳಿಯಲ್ಲಿ ವಾಸಿಸುವ ಜನರಲ್ಲಿ ಸುಮಾರು 50 ಕುಟುಂಬಗಳು ಸಂಪೂರ್ಣ ನಿವೇಶನ ರಹಿತರಾಗಿ ಬದುಕುತ್ತಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುವ ಜನರು ಬದುಕು ಕಟ್ಟಿಕೊಳ್ಳುವುದೇ ದುಸ್ತರವಾಗಿದೆ. ಹಳ್ಳಿಯ ಜನರಿಗೆ ಉಳಿದುಕೊಳ್ಳಲು ಸ್ವಂತ ವಾಸದ ಮನೆ ಇಲ್ಲದಿರುವುದು ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕೂಲಿ ಆದಾಯ ನಿತ್ಯದ ಜೀವನ, ವಿದ್ಯಾಭ್ಯಾಸ, ಇತರೆ ಖರ್ಚುಗಳಿಗೆ ಸಾಲುತ್ತಿಲ್ಲವಾದ್ದರಿಂದ ನಾವು ನಿವೇಶನ ಖರೀದಿಸಿ ಮನೆ ಕಟ್ಟಿಕೊಳ್ಳಲು ಸಾದ್ಯವಾಗುತ್ತಿಲ್ಲ. ಆದುದರಿಂದ ಮೂರು ಮನೆಹಳ್ಳಿ ವ್ಯಾಪ್ತಿಯ ಸ.ನಂ.303ರ 5.29 ಎಕರೆ ಗೋಮಾಳ ಜಾಗದಲ್ಲಿ 2 ಎಕರೆ ಜಮೀನು ಮಂಜೂರು ಮಾಡಿದರೆ ಸ್ಥಳೀಯರಿಗೆ ನಿವೇಶನದ ಭಾಗ್ಯ ದೊರೆಯಬಹುದು ಎಂದು ಒತ್ತಾಯಿಸಿದ್ದಾರೆ.
ಈ ಸಮಯದಲ್ಲಿ ಗ್ರಾಮಸ್ಥರಾದ ಮಹಾಲಕ್ಷ್ಮಿ, ಗಾಯತ್ರಿ, ಲಕ್ಷ್ಮಿ, ಶಾರದ, ರತ್ನಮ್ಮ, ಭಾರತಿ, ಪ್ರೇಮಾ, ಮಂಜುಳಾ, ನಾಗರತ್ನ, ರಾಧಾ, ದೀಪಾ ಮತ್ತಿತರರಿದ್ದರು.