ನಾಳೆ ಕಳಸಾ- ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ಕರ್ನಾಟಕ ಬಂದ್

ಬೆಂಗಳೂರು, ಜ.24: ಕಳಸಾ-ಬಂಡೂರಿ , ಮಹದಾಯಿ ಯೋಜನೆಗೆ ಜಾರಿಗೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಗುರುವಾರ ಕರ್ನಾಟಕ ಬಂದ್ ಗೆ ಕರೆ ನೀಡಿದೆ.
ಬೆಳಗ್ಗೆ 6ರಿಂದ ಸಂಜೆ 6 ರ ತನಕ ನಡೆಯಲಿರುವ ಬಂದ್ ನಿಂದಾಗಿ ಜನಜೀವನ ಅಸ್ತವ್ಯಸ್ಥಗೊಳ್ಳುವ ಸಾಧ್ಯತೆ ಕಂಡು ಬಂದಿದೆ. ಕರ್ನಾಟಕ ಬಂದ್ ಗೆ ನಾನಾ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದೆ. ರಾಜ್ಯ ಸರಕಾರಿ ನೌಕರರ ಸಂಘ, ಲಾರಿ , ಆಟೋ ಚಾಲಕರ ಸಂಘ, ಖಾಸಗಿ ಶಾಲೆಗಳ ಒಕ್ಕೂಟ, ಫಿಲ್ಮ್ ಛೇಂಬರ್ ಬೆಂಬಲ ವ್ಯಕ್ತಪಡಿಸಿ.
ಕರ್ನಾಟಕ ಬಂದ್ ಬಗ್ಗೆ ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಹೋರಾಟಗಾರರು ಬಂದ್ ಬೆಂಬಲಿಸಿ ಗುರುವಾರ ಬೆಂಗಳೂರಿನ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ತನಕ ರ್ಯಾಲಿ ನಡೆಯಲಿದೆ ಎಂದರು.
ಮಹದಾಯಿಯೋಜನೆಗೆ ಆಗ್ರಹಿಸಿ 900 ದಿನಗಳ ಹೋರಾಟ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಐದು ಬಾರಿ ಬಂದು ಹೋಗಿದ್ದರೂ ಸಮಸ್ಯೆ ಪರಿಹಾರಕ್ಕೆ ಅವರು ಯತ್ನಿಸಿಲ್ಲ. ಬಿಜೆಪಿ ಅವರ ಗಮನ ಸೆಳೆದಿಲ್ಲ. ಇದೀಗ ಬಿಜೆಪಿಯು ಬಂದ್ ರಾಜಕೀಯ ಪ್ರೇರಿತ ಎಂದು ಹೇಳುತ್ತಿದೆ. ಇದು ರಾಜಕೀಯ ಪ್ರೇರಿತ ಬಂದ್ ಅಲ್ಲ. ಸಾರ್ವಜನಿಕ ಬಂದ್ ಎಂದು ಹೇಳಿರುವ ಕನ್ನಡ ಚಳವಳಿಯ ವಾಟಾಲ್ ನಾಗರಾಜ್ ಅವರು ಪ್ರಧಾನಿ ಮಧ್ಯಪ್ರವೇಶದ ಬಗ್ಗೆ ಬಿಜೆಪಿ ಭರವಸೆ ನೀಡಿದರೆ ಬಂದ್ ಕರೆಯನ್ನು ವಾಪಸ್ ಪಡೆಯುವುದಾಗಿ ತಿಳಿಸಿದ್ದಾರೆ.
ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು, ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿದೆ. ಮೊದಲ ಮತ್ತು ಎರಡನೇ ವರ್ಷದ ಪಿಯುಸಿ ಪ್ರಾಕ್ಟಿಕಲ್ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಪಿಯು ಮಂಡಳಿ ತಿಳಿಸಿದೆ
ಹಾಸನದಲ್ಲಿ ಬಂದ್ ಇಲ್ಲವೆಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಬಂದ್ ಇಲ್ಲ , ಬಂದ್ ಗೆ ಜಿಲ್ಲೆಯಲ್ಲಿ ಯಾವುದೇ ಸಂಘಟನೆ ಕರೆ ನೀಡಿಲ್ಲ. ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿಲ್ಲ ಎಂದು ಜಿಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಸ್ಪಷ್ಟಪಡಿಸಿದ್ದಾರೆ.
ಬಂದ್ ಗೆ ಮೈಸೂರಿನಲ್ಲಿ ವಿರೋಧ ವ್ಯಕ್ತವಾಗಿದೆ. ಮಂಡ್ಯದಲ್ಲಿ ಬಂದ್ ಬಗ್ಗೆ ಗೊಂದಲ ಉಂಟಾಗಿದೆ. ಶಿವಮೊಗ್ಗದಲ್ಲಿ ಬಂದ್ ಇಲ್ಲ ಎಂದು ಅಪರ ಜಿಲ್ಲಾಧಿಕಾರಿ ಹೇಳಿದ್ದಾರೆ. ತುಮಕೂರು, ದಾವಣಗೆರೆ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ನೀಡಲಾಗಿಲ್ಲ.
ರಾಜ್ಯದಲ್ಲಿ ಪೆಟ್ರೋಲ್ ಬಂಕ್ ಗಳು ಬಂದ್ ಇಲ್ಲ. ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ಗಳು ಎಂದಿನಂತೆ ಓಡಾಟ ನಡೆಸಲಿವೆ. ಕಲ್ಲು ತೂರಾಟ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗುವ ವಾತಾವರಣ ಸೃಷ್ಟಿಯಾದರೆ ಬಸ್ ಗಳ ಓಡಾಟ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ 50 ಕೆಎಸ್ ಆರ್ ಪಿ ತುಕಡಿ, 15 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಹೋಮ್ ಗಾರ್ಡ್ಸ್, ಕೆಎಆರ್ ತುಕಡಿಯನ್ನು ನಿಯೋಜಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ







