ಅವೈಜ್ಞಾನಿಕ ಮೀನುಗಾರಿಕೆ: ಮಲ್ಪೆ ಮೀನುಗಾರರ ಸಂಧಾನ ಯಶಸ್ವಿ
ಟ್ರಾಲ್ಬೋಟು ಮುಷ್ಕರ ವಾಪಾಸ್: ಲೈಟ್ ಫಿಶಿಂಗ್ಗೆ ತಿಂಗಳ ಗಡುವು

ಮಲ್ಪೆ, ಜ.24: ಅವೈಜ್ಞಾನಿಕ ಮೀನುಗಾರಿಕೆಗೆ ಸಂಬಂಧಿಸಿ ಮೀನುಗಾರರ ಸಂಘಟನೆಗಳ ನಡುವೆ ತಲೆದೋರಿರುವ ಸಂಘರ್ಷವನ್ನು ಇಂದು ಮಲ್ಪೆ ಮೀನು ಗಾರರ ಸಂಘದ ಸಮುದಾಯ ಭವನದಲ್ಲಿ ಕರೆಯಲಾದ ಸಂಧಾನ ಸಭೆಯಲ್ಲಿ ಇತ್ಯರ್ಥ ಪಡಿಸಲಾಗಿದ್ದು, ಕಳೆದ 17ದಿನಗಳಿಂದ ಮಲ್ಪೆ ಆಳ ಸಮುದ್ರ ಟ್ರಾಲ್ ಬೋಟು ಮೀನುಗಾರರ ಸಂಘ ನಡೆಸುತ್ತಿರುವ ಮುಷ್ಕರವನ್ನು ಕೈಬಿಡಲಾಗಿದೆ.
ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಧ್ಯಸ್ಥಿತಿಕೆಯಲ್ಲಿ ಮಲ್ಪೆ ಮೀನುಗಾರರ ಸಂಘ ಕರೆದ ಸಭೆಯಲ್ಲಿ ಮಲ್ಪೆ ಆಳ ಸಮುದ್ರ ಟ್ರಾಲ್ ಬೋಟು ಮೀನುಗಾರರ ಸಂಘ ಮತ್ತು ಪರ್ಸಿನ್ ಮೀನುಗಾರರ ಸಂಘದ ನಡುವಿನ ಬಿಕ್ಕಟ್ಟನ್ನು ಸಂಧಾನದ ಮೂಲಕ ಬಗೆಹರಿಸಲಾಯಿತು.
ಫೆಬ್ರವರಿ ಅಂತ್ಯದೊಳಗೆ ಬೆಳಕಿನ ಮೀನುಗಾರಿಕೆಯನ್ನು ಸ್ಥಗಿತಗೊಳಿಸುವು ದಾಗಿ ಪರ್ಸಿನ್ ಮೀನುಗಾರರು ಒಪಿದ್ದು, ಅದರಂತೆ ಮಲ್ಪೆ ಆಳ ಸಮುದ್ರ ಟ್ರಾಲ್ ಬೋಟು ಮೀನುಗಾರರ ಸಂಘ ಕಳೆದ 17 ದಿನಗಳಿಂದ ಮಲ್ಪೆ ಬಂದರಿ ನಲ್ಲಿ ಬೋಟುಗಳನ್ನು ನಿಲ್ಲಿಸಿ ನಡೆಸುತ್ತಿರುವ ಮುಷ್ಕರವನ್ನು ಕೈಬಿಟ್ಟು, ನಾಳೆ ಯಿಂದ ಮೀನುಗಾರಿಕೆ ತೆರಳುವುದಾಗಿ ನಿರ್ಧರಿಸಿದೆ.
ಈ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ‘ಅವೈಜ್ಞಾನಿಕ ಮೀನುಗಾರಿಕೆ ವಿರೋಧಿಸಿ ಆಳ ಸಮುದ್ರ ಟ್ರಾಲ್ ಬೋಟು ಮೀನುಗಾರರು ಮುಷ್ಕರ ನಡೆಸುತ್ತಿದ್ದರು. ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮೀನುಗಾರರ ಸಂಘದ ಈ ಹಿಂದೆ ಎರಡು ಬಾರಿ ಸಭೆ ಕರೆದರೂ ಫಲಕಾರಿಯಾಗಿರಲಿಲ್ಲ. ಇಂದು ಕರೆದ ಸಭೆ ಯಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಸಲಹೆ ಸೂಚನೆಯಂತೆ ಮೀನುಗಾರರ ಸಂಘದ ನೇತೃತ್ವದಲ್ಲಿ ಚರ್ಚೆ ನಡೆಸಿ ಒಮ್ಮತದ ತೀರ್ಮಾನಕ್ಕೆ ಬರಲಾಯಿತು’ ಎಂದರು.
‘ಆಳಸಮುದ್ರ ಮೀನುಗಾರರು ನಡೆಸುತ್ತಿರುವ ಮುಷ್ಕರವನ್ನು ಇಂದೇ ವಾಪಾಸ್ಸು ಪಡೆದು ನಾಳೆಯಿಂದ ಮೀನುಗಾರಿಕೆ ತೆರಳಬೇಕು. ಸರಕಾರದ ಆದೇಶ ದಂತೆ ಬುಲ್ಟ್ರಾಲ್ ಮೀನುಗಾರಿಕೆ ಮಾಡಬಾರದು. ಪರ್ಸಿನ್ ಹಾಗೂ ಆಳ ಸಮುದ್ರ ಬೋಟು ಮೀನುಗಾರರ ಸಂಘದದವರು ಹೊಂದಾ ಣಿಕೆಯಲ್ಲಿ ಯಾವುದೇ ವೈಮನ್ನಸ್ಸು ಇಟ್ಟುಕೊಳ್ಳದೆ ಒಂದಾಗಿರಬೇಕೆಂದು ಸಭೆ ಯಲ್ಲಿ ತಿರ್ಮಾನಿಸಲಾಯಿತು’ ಎಂದು ಅವರು ಹೇಳಿದರು.
ಬುಲ್ಟ್ರಾಲ್, ಬೆಳಕು ಮೀನುಗಾರಿಕೆ, ಪಚ್ಚೆಲೆ ಹಾಗೂ ಕಪ್ಪೆ ಬಂಡಾಸು ಹಿಡಿಯುವುದನ್ನು ನಿಷೇಧಿಸಿ ಸರಕಾರ ಆದೇಶ ಹೊರಡಿಸಿದ್ದು, ಅದನ್ನು ಸಂಪೂರ್ಣವಾಗಿ ಪಾಲಿಸುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು. ಇಲ್ಲಿನ ಎಲ್ಲ ತೀರ್ಮಾನಕ್ಕೆ ಪರ್ಸಿನ್ ಸಂಘದವರು ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಫೆಬ್ರವರಿ ಕೊನೆಯವರೆಗೆ ಬೆಳಕಿನ ಮೀನುಗಾರಿಕೆ ನಡೆಸಲು ಪರ್ಸಿನ್ ಬೋಟುಗಳಿಗೆ ಅವಕಾಶ ನೀಡಲಾಗಿದೆ. ಮುಂದಿನ ವರ್ಷದಿಂದ ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ನಿರ್ಧರಿಸಲಾಗಿದೆ ಎಂದರು.
ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ನಾಳೆಯಿಂದ ಒಳ್ಳೆಯ ರೀತಿಯಲ್ಲಿ ಮೀನುಗಾರಿಕೆ ನಡೆದು ಸೌಹಾರ್ದ ವಾತಾವರಣ ಮಲ್ಪೆಯಲ್ಲಿ ಸೃಷ್ಟಿಯಾಗಲಿದೆ ಎಂಬುದು ನಮ್ಮ ವಿಶ್ವಾಸ ಎಂದು ಅವರು ತಿಳಿಸಿದರು.
ಮೀನುಗಾರಿಕೆ ಸಮಸ್ಯೆಗೆ ಸಂಬಂಧಿಸಿ ಯಾವುದೇ ಮೀನುಗಾರ ಸಂಘಟನೆ ಗಳು ಮಾಧ್ಯಮಗಳಿಗೆ ಹೇಳಿಕೆ ನೀಡಬಾರದು. 22 ಸಂಘಟನೆಗಳನ್ನು ಒಳ ಗೊಂಡ ಮಾತೃ ಸಂಸ್ಥೆ ಮಲ್ಪೆ ಮೀನುಗಾರರ ಸಂಘದ ಮೂಲಕವೇ ಸಮಸ್ಯೆ ಯನ್ನು ಚರ್ಚಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡಬೇಕೆಂದು ತೀರ್ಮಾನಿ ಸಲಾಗಿದೆ ಎಂದು ಅಧ್ಯಕ್ಷ ಸತೀಶ್ ಕುಂದರ್ ಹೇಳಿದರು.
ಸಂಧಾನ ಸಭೆಯಲ್ಲಿ ಮಲ್ಪೆ ಮೀನುಗಾರರ ಸಂಘದ ಉಪಾಧ್ಯಕ್ಷರುಗಳಾದ ಹರೀಶ್ಚಂದ್ರ ಕಾಂಚನ್, ಸಂತೋಷ್ ಸಾಲ್ಯಾನ್, ವಿನಯ ಕರ್ಕೇರ, ಪ್ರಧಾನ ಕಾರ್ಯದರ್ಶಿ ಗೋಪಾಲ್ ಆರ್.ಕೆ., ಜತೆ ಕಾರ್ಯದರ್ಶಿ ಶಿವಾನಂದ್, ಕೋಶಾಧಿಕಾರಿ ಸೋಮನಾಥ್ ಕಾಂಚನ್, ಆಳಸಮುದ್ರ ಮೀನುಗಾರಿಕೆ ಸಂಘದ ಕಿಶೋರ್ ಡಿ.ಸುವರ್ಣ, ಅಧ್ಯಕ್ಷ ಪರ್ಸಿನ್ ಸಂಘದ ಅಧ್ಯಕ್ಷ ಯಶೋಧರ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.
ಹೇಳಿಕೆ ನೀಡಲು ಸಚಿವರ ನಿರಾಕರಣೆ
ಸಚಿವ ಪ್ರಮೋದ್ ಮಧ್ವರಾಜ್ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಸಭೆಯು ಯಶಸ್ವಿಯಾಗಿದ್ದು, ಆದರೆ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಲು ಸಚಿವರು ನಿರಾಕರಿಸಿದರು.
ಸಭೆ ಮುಗಿಸಿ ಹೊರ ಬಂದ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿಸಿದ ಸುದ್ದಿಗಾರರಿಗೆ, ‘ನಾನು ಯಾವುದೇ ಹೇಳಿಕೆ ನೀಡುವುದಿಲ್ಲ. ಎಲ್ಲವೂ ಮೀನುಗಾರರ ಸಂಘದ ಅಧ್ಯಕ್ಷರು ನೀಡುತ್ತಾರೆ’ ಎಂದು ಹೇಳಿ ಅಲ್ಲಿಂದ ಮುಂದೆ ಸಾಗಿದರು.
ಸಭೆಯ ಹಿನ್ನೆಲೆಯಲ್ಲಿ ಸಮುದಾಯ ಭವನದ ಹೊರಗಡೆ ಎರಡು ಸಂಘಟನೆಗಳ ನೂರಾರು ಸಂಖ್ಯೆಯ ಮೀನುಗಾರರು ನೆರೆದಿದ್ದು, ಮುಂಜಾಗ್ರತಾ ಕ್ರಮವಾಗಿ ಮಲ್ಪೆ ಬಂದರಿನಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸೇರಿದಂತೆ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು. ಉಡುಪಿ ಪೊಲೀಸ್ ವೃತ್ತ ನಿರೀಕ್ಷಕ ನವೀನ್ಚಂದ್ರ ಜೋಗಿ, ಮಲ್ಪೆ ಠಾಣಾಧಿಕಾರಿ ಮಧು ಸ್ಥಳದಲ್ಲಿ ಹಾಜರಿದ್ದರು.







