ಹಾಜಿ ಹಮೀದ್ ಕಂದಕ್ ನಿಧನಕ್ಕೆ ಗಣ್ಯರು, ಸಂಘಸಂಸ್ಥೆಗಳಿಂದ ಸಂತಾಪ

ಮಂಗಳೂರು, ಜ.24: ಬುಧವಾರ ಸಂಜೆ ಕಾರ್ಯಕ್ರಮವೊಂದರಲ್ಲಿ ತೀವ್ರ ಅಸ್ವಸ್ಥಗೊಂಡು ನಿಧನರಾದ ಹಿರಿಯ ಮುಸ್ಲಿಂ ಹಾಗೂ ಸಾಮಾಜಿಕ ಧುರೀಣ ಹಾಜಿ ಹಮೀದ್ ಕಂದಕ್ (68) ಅವರಿಗೆ ವಿವಿಧ ಸಂಘಟನೆ ಹಾಗೂ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಂತಾಪ: ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಸಚಿವ ಯು.ಟಿ.ಖಾದರ್, ಮಾಜಿ ಸಚಿವ ಬಿ.ಎ.ಮೊಹಿದಿನ್, ಶಾಸಕ ಬಿ.ಎ.ಮೊಯ್ದಿನ್ ಬಾವಾ, ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹೀಂ, ಜೆಡಿಎಸ್ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್, ಜೆಡಿಎಸ್ ದ.ಕ.ಜಿಲ್ಲಾಧ್ಯಕ್ಷ ವಿಟ್ಲ ಮುಹಮ್ಮದ್ ಕುಂಞಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್, ಸೆಂಟ್ರಲ್ ಕಮಿಟಿಯ ಪದಾಧಿಕಾರಿಗಳಾದ ಹಾಜಿ ಮುಹಮ್ಮದ್ ಮಸೂದ್, ಹಾಜಿ ಮುಹಮ್ಮದ್ ಹನೀಫ್, ಹಾಜಿ ಇಬ್ರಾಹೀಂ ಕೋಡಿಜಾಲ್, ಬಾಷಾ ತಂಙಳ್, ಮಾಜಿ ಮೇಯರ್ ಕೆ. ಅಶ್ರಫ್, ಎಫ್ಐ ದ.ಕ. ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ್, ರಾಜ್ಯ ಹಜ್ ಕಮಿಟಿಯ ಸದಸ್ಯ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಡಿಕೆಎಸ್ಸಿ ಅಧ್ಯಕ್ಷ ಕೆ.ಎಸ್.ಆಟಕ್ಕೋಯ ತಂಙಳ್, ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಹಾಜಿ ಕಿನ್ಯಾ, ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್. ಮುಹಮ್ಮದ್ ಮಸೂದ್, ಅಲ್ ಇಹ್ಸಾನ್ ಎಜುಕೇಶನ್ ಸೆಂಟರ್ನ ವ್ಯವಸ್ಥಾಪಕ ಮುಸ್ತಫಾ ಸಅದಿ, ಮುಸ್ಲಿಂ ವರ್ತಕರ ಸಂಘದ ಅಧ್ಯಕ್ಷ ಅಲಿ ಹಸನ್, ಯಾಸೀನ್ ಕುದ್ರೋಳಿ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ನಗರ ಅಧ್ಯಕ್ಷ ಮುಹಮ್ಮದ್ ಕುಂಞಿ, ಹಾಜಿ ಹೈದರ್ ಪರ್ತಿಪ್ಪಾಡಿ, ಫಾರೂಕ್ ಉಳ್ಳಾಲ್, ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ, ಕೆಪಿಸಿಸಿ ಕಾರ್ಯದರ್ಶಿ ಟಿ.ಎಂ.ಶಹೀದ್, ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ಮಾಜಿ ಸಚಿವ ಬಿ.ಎ.ಮೊಹಿದಿನ್, ಪಿಎಫ್ಐ ದ.ಕ. ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ್, ರಾಜ್ಯ ಹಜ್ ಕಮಿಟಿಯ ಸದಸ್ಯ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಡಿಕೆಎಸ್ಸಿ ಅಧ್ಯಕ್ಷ ಕೆ.ಎಸ್.ಆಟಕ್ಕೋಯ ತಂಙಳ್, ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಹಾಜಿ ಕಿನ್ಯಾ, ಅಲ್ ಇಹ್ಸಾನ್ ಎಜುಕೇಶನ್ ಸೆಂಟರ್ನ ವ್ಯವಸ್ಥಾಪಕ ಮುಸ್ತಫಾ ಸಅದಿ, ಝವಾಜ್ ಚಾರೀಟೇಬಲ್ ಟ್ರಸ್ಟ್ ಕರ್ನಾಟಕ ಮತ್ತಿತರರು ಸಂತಾಪ ಸೂಚಿಸಿದ್ದಾರೆ.
ಜನತಾ ದಳ ಮತ್ತು ಕಾಂಗ್ರೆಸ್ ಪಕ್ಷದ ಮೂಲಕ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದ ಅವರು ಪಕ್ಷದ ವಿವಿಧ ಹುದ್ದೆಗಳ ಜವಾಬ್ದಾರಿ ನಿರ್ವಹಿಸಿದ್ದರು. ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗೆ ಜನತಾ ದಳ ಪಕ್ಷದಿಂದ ಸ್ಪರ್ಧಿಸಿದ್ದರು. ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಿರಿಯ ರಾಜಕಾರಣಿಗಳ ಸಖ್ಯ ಬೆಳೆಸಿದ್ದರು.
ಬಡವರ, ನೊಂದವರ ಧ್ವನಿಯಾಗಿದ್ದ ಹಮೀದ್ ಕಂದಕ್ ರವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಮುಲ್ಕಿ ಕೇಂದ್ರ ಮಸೀದಿ ಅಧ್ಯಕ್ಷ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಇಕ್ಬಾಲ್ ಅಹ್ಮದ್ ಮುಲ್ಕಿ, ದ.ಕ. ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ರಿಯಾಝ್ ಎಚ್. ಕಾರ್ನಾಡ್, ಎಂ.ಬಿ. ಖಾನ್, ಹರೀಶ್ ಪುತ್ರನ್, ಜೀವನ್ ಕೆ.ಶೆಟ್ಟಿ, ಜೆಡಿಎಸ್ ಅ.ಸ.ಘಟಕ ಉಪಾಧ್ಯಕ್ಷ ನಿಸಾರ್ ಅಹ್ಮದ್, ಅಬ್ದುಲ್ ಖಾದರ್, ನೂರುಲ್ಲಾ ಶೇಕ್, ರಂಜನ್ ಶೆಟ್ಟಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಅಂಜುಮಾನ್ ಖಾದಿಮೀನ್ ಮುಸ್ಲಿಮ್ ಎಸೋಸಿಯೇಶನ್ನ ಅಧ್ಯಕ್ಷರಾಗಿ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷರಾಗಿ, ಅಹಿಂದ ಜನಚಳವಳಿಯ ಉಪಾಧ್ಯಕ್ಷರಾಗಿ, ಕರ್ನಾಟಕ ಮುಸ್ಲಿಂ ಪರಿಷತ್ ಅಧ್ಯಕ್ಷರಾಗಿ, ಪಂಪ್ವೆಲ್ನ ಮಸ್ಜಿದುತ್ತಖ್ವಾದ ಟ್ರಸ್ಟಿಯಾಗಿ, ಅಖಿಲ ಭಾರತ ಬ್ಯಾರಿ ಪರಿಷತ್ ಮತ್ತು ಕೇಂದ್ರ ಸಾಹಿತ್ಯ ಪರಿಷತ್ ಹಾಗೂ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರಲ್ಲದೆ ಹಲವು ಸಾಮಾಜಿಕ, ಧಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.
ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಸ್ಥಾಪನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ವ್ಯಾಪಾರಿಗಳ ಪರವಾಗಿ ಹೋರಾಟ ಮಾಡುವ ಮೂಲಕ ಗಮನ ಸೆಳೆದಿದ್ದರು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದ ಅವರು ಸಮಾಜದ ಹಿತದೃಷ್ಟಿಯಿಂದ ನೀಡುತ್ತಿದ್ದ ಸಲಹೆಗಳ ಮೂಲಕ ಯುವ ಜನಾಂಗಕ್ಕೂ ಚಿರಪರಿಚಿತರಾಗಿದ್ದರು.
ನಗರದ ಗೋರಿಗುಡ್ಡ ಬಳಿಯ ನಿವಾಸಿಯಾಗಿದ್ದ ಮೃತರು ಪತ್ನಿ, ಐವರು ಪುತ್ರರು ಹಾಗೂ ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ದಫನ ಕಾರ್ಯವು ಜ.25ರಂದು ಅಸರ್ನಮಾಝ್ ಬಳಿಕ ಉಳ್ಳಾಲದ ಕೇಂದ್ರ ಜುಮಾ ಮಸೀದಿಯ ವಠಾರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕಾರ್ಯಕ್ರಮದಲ್ಲಿ ಅಸ್ವಸ್ಥ: ನಗರದ ಖಾಸಗಿ ಹೊಟೇಲ್ನಲ್ಲಿ ಬುಧವಾರ ಸಂಜೆ ಅಹಿಂದ ಜನಚಳವಳಿ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ವಿಚಾರ ಸಂಕಿರಣ ನಡೆಯುತ್ತಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು ಭಾಷಣ ಮಾಡುವಾಗಲೇ ತೀವ್ರ ಅಸ್ವಸ್ಥಗೊಂಡರು. ತಕ್ಷಣ ಅಲ್ಲಿದ್ದ ಇತರರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸ್ವಲ್ಪ ಹೊತ್ತಿನಲ್ಲೇ ನಿಧನರಾದರು.
ಕಾರ್ಯಕ್ರಮದಲ್ಲಿ ಅತ್ಯಂತ ಲವಲವಿಕೆಯಿಂದಲೇ ಪಾಲ್ಗೊಂಡಿದ್ದರು. ತನ್ನ ಭಾಷಣದ ಸರದಿ ಬಂದಾಗ ಎರಡು ನಿಮಿಷ ಚೆನ್ನಾಗಿ ಮಾತನಾಡಿದ್ದ ಅವರು ಬಳಿಕ ತೊದಲತೊಡಗಿದರು. ಕ್ಷಣಾರ್ಧದಲ್ಲಿ ಎದೆನೋವಾಗುತ್ತಿದೆ ಎನ್ನುತ್ತಲೇ ಕುಸಿದರು. ತಕ್ಷಣ ನಾವು ನೆರವಿಗೆ ಧಾವಿಸಿ ಆಸ್ಪತ್ರೆಗೆ ದಾಖಲಿಸಿದೆವು ಕಾರ್ಯಕ್ರಮದ ಸಂಘಟಕರು ಪತ್ರಿಕೆಗೆ ತಿಳಿಸಿದ್ದಾರೆ.







