'ಪದ್ಮಾವತ್'ಗೆ ತಪ್ಪದ ಕರ್ನಿ ಕಾಟ
ಅಹ್ಮದಾಬಾದ್, ಜ.25: 'ಪದ್ಮಾವತ್' ಚಿತ್ರ ರಾಷ್ಟ್ರವ್ಯಾಪಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವ ನಡುವೆಯೇ ಕರ್ನಿ ಸೇನಾ ಪ್ರತಿಭಟನೆಯ ಭೀತಿಯಿಂದ ನಾಲ್ಕು ರಾಜ್ಯಗಳ ಮಲ್ಟಿಪ್ಲೆಕ್ಸ್ಗಳಲ್ಲಿ ಈ ಚಿತ್ರ ಪ್ರದರ್ಶಿಸುವುದಿಲ್ಲ ಎಂದು ಅಖಿಲ ಭಾರತ ಮಲ್ಟಿಪ್ಲೆಕ್ಸ್ ಮಾಲಕರ ಸಂಘ ಪ್ರಕಟಿಸಿದೆ.
ಗುಜರಾತ್ನಲ್ಲಿ ರಾತ್ರೋರಾತ್ರಿ ಹಿಂಸಾಚಾರ ನಡೆದ ಬೆನ್ನಲ್ಲೇ ದಿಲ್ಲಿ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಹರ್ಯಾಣದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆದಿದ್ದು, ಸಿನಿಮ ಮಂದಿರಗಲಿಗೆ ಗರಿಷ್ಠ ಭದ್ರತೆ ಒದಗಿಸುವುದಾಗಿ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆದರೆ ಬಿಜೆಪಿ ಆಡಳಿತದ ನಾಲ್ಕು ರಾಜ್ಯಗಳಲ್ಲಿ ಅಂದರೆ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಗೋವಾದ ಮಲ್ಟಿಪ್ಲೆಕ್ಸ್ಗಳಲ್ಲಿ ಪದ್ಮಾವತ್ ಪ್ರದರ್ಶನ ಇರುವುದಿಲ್ಲ ಎಂದು ಸಂಘ ಸ್ಪಷ್ಟಪಡಿಸಿದೆ.
ರಾಣಿ ಪದ್ಮಿನಿಯನ್ನು ಚಿತ್ರದಲ್ಲಿ ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆಪಾದಿಸಿ ರಜಪೂತ ಸಂಘಟನೆಗಳು ಪ್ರತಿಭಟನೆಗೆ ಇಳಿದಿವೆ. ದಿಲ್ಲಿಯಿಂದ 15 ಕಿಲೋಮೀಟರ್ ದೂರದಲ್ಲಿ 25 ಪ್ರಯಾಣಿಕರಿದ್ದ ಹರ್ಯಾಣ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿಗೆ ಬೆಂಕಿ ಹಚ್ಚಲಾಗಿದೆ. ಗುರಗಾಂವ್ನಲ್ಲಿ ಶಾಲಾ ಬಸ್ಸಿಗೆ ಕಲ್ಲು ತೂರಲಾಗಿದ್ದು, ಕೆಲ ಮಕ್ಕಳಿಗೆ ಗಾಯಗಳಾಗಿವೆ,
ಲಕ್ನೋದಲ್ಲಿ ಯುವಕನೊಬ್ಬ ಆತ್ಮಾಹುತಿಗೆ ಯತ್ನಿಸಿದ್ದಾನೆ. ಜೈಪುರ ಹಾಗೂ ಮಥುರಾದಲ್ಲಿ ರಸ್ತೆ ಹಾಗೂ ರಥಲು ಸಂಚಾರ ಅಸ್ತವ್ಯಸ್ತವಾಗಿದೆ. ಭೋಪಾಲ್ನಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿದ್ದರೆ, ಮೀರತ್ ಹಾಗೂ ಎತ್ವಾದಲ್ಲಿ ಕಲ್ಲು ತೂರಾಟದ ಘಟನೆಗಳು ನಡೆದಿವೆ. ಲಕ್ನೋ ಹಾಗೂ ಇಂಧೋರ್ನಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.