ವೃದ್ಧೆಗೆ ಗುಂಡಿನ ಮಳೆಗೆರೆದು ಹತ್ಯೆ: ಸಿಸಿಟಿವಿಯಲ್ಲಿ ಸೆರೆಯಾದ ದುಷ್ಕೃತ್ಯ
# ಮಹಿಳೆಯ ಪುತ್ರನನ್ನೂ ಗುಂಡಿಕ್ಕಿ ಸಾಯಿಸಿದ ದುಷ್ಕರ್ಮಿಗಳು
ಮೀರತ್, ಜ.25: ತನ್ನ ಮನೆಯ ಹೊರಗೆ ಮಂಚವೊಂದರಲ್ಲಿ ಕುಳಿತಿದ್ದ 60 ವರ್ಷದ ಮಹಿಳೆಯೊಬ್ಬಳ ಮೇಲೆ ಮೂವರು ದುಷ್ಕರ್ಮಿಗಳು ಗುಂಡಿನ ಮಳೆಗೆರೆದು ಹತ್ಯೆಗೈದ ಭೀಭತ್ಸ ಘಟನೆ ಆ ಮನೆಯ ಹೊರಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದುಷ್ಕರ್ಮಿಗಳು ನಂತರ ಮಹಿಳೆಯ ಮಗನನ್ನೂ ಕಾರೊಂದರೊಳಗೆ ಗುಂಡಿಕ್ಕಿ ಸಾಯಿಸಿದ್ದಾರೆ. ಆಸ್ತಿ ವಿವಾದವೇ ಈ ಕೃತ್ಯಕ್ಕೆ ಕಾರಣವಿರಬಹುದೆಂದು ಶಂಕಿಸಲಾಗಿದೆ.
ನಿಚ್ಚೆತ್ತರ್ ಕೌರ್ ಎಂಬ ಮಹಿಳೆ ಇನ್ನೊಬ್ಬಳು ಮಹಿಳೆಯೊಂದಿಗೆ ಮನೆಯ ಹೊರಗೆ ಇರುವ ಎರಡು ಮಂಚಗಳಲ್ಲಿ ಕುಳಿತಿದ್ದಾಗ ದೇಶಿ ನಿರ್ಮಿತ ಪಿಸ್ತೂಲೊಂದನ್ನು ಕೈಯಲ್ಲಿ ಹಿಡಿದಿದ್ದ ವ್ಯಕ್ತಿಯೊಬ್ಬ ಆಗಮಿಸಿ ಆಕೆಯ ಎದೆಯತ್ತ ಕೇವಲ ಎರಡು ಅಡಿ ಅಂತರದಿಂದ ಗುಂಡಿಕ್ಕಿದ್ದಾನೆ. ಮಹಿಳೆ ಮಂಚಕ್ಕುರುಳುತ್ತಿದ್ದಂತೆಯೇ ಇನ್ನಿಬ್ಬರು ಅಲ್ಲಿಗೆ ಬಂದು ಆಕೆಯತ್ತ ಗುಂಡು ಹಾರಿಸಿದ್ದಾರೆ. ದುಷ್ಕರ್ಮಿಗಳಲ್ಲೊಬ್ಬ ಕೊನೆಗೆ ಮಹಿಳೆಯ ತಲೆಯನ್ನು ಗುರಿಯಾಗಿಸಿ ಗುಂಡಿಕ್ಕಿದ್ದಾನೆ. ಆತನಂತೆಯೇ ಇತರ ಇಬ್ಬರೂ ಆಕೆಯ ತಲೆಗೆ ಗುಂಡು ಹಾರಿಸಿದ್ದಾರೆ. ಇದೇ ವೇಳೆ ಅಲ್ಲಿದ್ದ ಇನ್ನೊಬ್ಬಳು ಮಹಿಳೆಯನ್ನು ಸ್ಥಳ ಬಿಟ್ಟು ತೆರಳುವಂತೆ ಹೇಳಿದ್ದಾರೆ. ಕೃತ್ಯದ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.
ಎಲ್ಲಾ ದುಷ್ಕರ್ಮಿಗಳು ತಮ್ಮ ಮುಖವನ್ನು ಕರ್ಚೀಫಿನಿಂದ ಮುಚ್ಚಿಕೊಂಡಿದ್ದರು.
ಇಂದು(ಗುರುವಾರ) ಮಹಿಳೆ ಮತ್ತಾಕೆಯ ಮಗ ಆಕೆಯ ಪತಿಯ ಕೊಲೆ ಸಂಬಂಧ ಕೋರ್ಟಿಗೆ ಸಾಕ್ಷಿ ಹೇಳಲು ಹೋಗುವವರಿದ್ದರು. ಮಹಿಳೆಯ ಪತಿಯನ್ನು 2016ರಲ್ಲಿ ಜಮೀನು ವಿವಾದವೊಂದಕ್ಕೆ ಸಂಬಂಧಿಸಿದಂತೆ ಹತ್ಯೆಗೈಯಲಾಗಿತ್ತು ಈ ಸಂಬಂಧ ಅವರ ಕುಟುಂಬದ ಕೆಲವರು ಈಗಾಗಲೇ ಜೈಲಿನಲ್ಲಿದ್ದಾರೆ. ಕೋರ್ಟಿನಲ್ಲಿ ಸಾಕ್ಷಿ ನುಡಿಯದಂತೆ ಮಹಿಳೆ ಮತ್ತಾಕೆಯ ಮಗನಿಗೆ ಈಗಾಗಲೇ ಹಲವರು ಎಚ್ಚರಿಕೆ ನೀಡಿದ್ದರೆನ್ನಲಾಗಿದೆ.
ಘಟನೆ ಸಂಬಂಧ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಕರ್ತವ್ಯ ಲೋಪ ಆರೋಪದ ಮೇಲೆ ಐದು ಮಂದಿ ಪೊಲೀಸ್ ಸಿಬ್ಬಂದಿಯನ್ನೂ ಸೇವೆಯಿಂದ ವಜಾಗೊಳಿಸಲಾಗಿದೆ.