‘ಮಲ್ಪೆಬೀಚ್ ಅಭಿವೃದ್ದಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ’

ಉಡುಪಿ, ಜ.25: ಮಲ್ಪೆ ಬೀಚ್ ಅಭಿವೃದ್ದಿ ಕುರಿತಂತೆ ಸಭೆಯಲ್ಲಿ ತೆಗೆದು ಕೊಳ್ಳುವ ನಿರ್ಧಾರಗಳನ್ನು ಹಾಗೂ ಕಾಮಗಾರಿಗಳನ್ನು ಶೀಘ್ರದಲ್ಲಿ ಕಾರ್ಯ ರೂಪಕ್ಕೆ ತರುವಂತೆ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ, ಕ್ರೀಡಾ ಸಚಿವ ಪ್ರಮೋದ್ ಮದ್ವರಾಜ್ ತಿಳಿಸಿದ್ದಾರೆ.
ಗುರುವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಲ್ಪೆಅಭಿವೃದ್ದಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಲ್ಪೆ ಬೀಚ್ನ ಪಾರ್ಕಿಂಗ್ ಪ್ರದೇಶದಲ್ಲಿ ಶೌಚಾಲಯ ನಿರ್ಮಿಸುವಂತೆ ಕೆಆರ್ಐಡಿಎಲ್ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಫೆ. ಒಳಗೆ ಕಾಮಗಾರಿ ಪೂರ್ಣಗೊಳಿಸುವಂತೆ, ಮಲ್ಪೆಯ ಬಲರಾಮ ಸರ್ಕಲ್ ಬಳಿ ಬಸ್ ನಿಲ್ದಾಣ ನಿರ್ಮಿಸುವ ಕುರಿತಂತೆ ಸ್ಥಳ ಪರಿಶೀಲನೆ ನಡೆಸುವಂತೆ ಸೂಚಿಸಿದರು. ಬೀಚ್ ಅಭಿವೃದ್ದಿ ಕುರಿತಂತೆ ನಗರಸಭಾ ಸದಸ್ಯ ಪ್ರಶಾಂತ್ ಅಮೀನ್ ನೀಡಿರುವ ಪಟ್ಟಿಯಲ್ಲಿರುವ ಕಾಮಗಾರಿಗಳನ್ನು ಶೀಘ್ರ ಕಾರ್ಯರೂಪಕ್ಕೆ ತರುವಂತೆ ಪೌರಾಯುಕ್ತ ಮಂಜುನಾಥಯ್ಯರಿಗೆ ಪ್ರಮೋದ್ ಸೂಚಿಸಿದರು.
ಮಲ್ಪೆ ಬೀಚ್ನಲ್ಲಿರುವ ವೇದಿಕೆ ಬಳಿ 2 ಗ್ರೀನ್ರೂಂ ನಿರ್ಮಿಸುವಂತೆ ಹಾಗೂ ಅಲ್ಲಿರುವ ಶೌಚಾಲಯ ಬಳಿ ಬಯೋ ಡೈಜೆಸ್ಟ್ ನಿರ್ಮಿಸುವಂತೆ ಸೂಚಿಸಿದ ಸಚಿವರು, ಸೈಂಟ್ ಮೇರಿಸ್ ದ್ವೀಪದಲ್ಲಿರುವ ಆಹಾರ ಮಳಿಗೆಗಳಲ್ಲಿ ನಿಗದಿಪಡಿಸಿದ ದರಗಳ ಕುರಿತು ದರಪಟ್ಟಿಯನ್ನು ಪ್ರದರ್ಶಿಸುವಂತೆ ತಿಳಿಸಿದರು. ದ್ವೀಪಕ್ಕೆ ಆಗಮಿಸುವ ಪ್ರವಾಸಿಗರಿಗೆ ಆಹಾರದ ಕೊರತೆಯಾಗದಂತೆ ಹಾಗೂ ಬೀಚ್ ಮತ್ತು ದ್ವೀಪದ ನೈಸರ್ಗಿಕ ಸೌಂದರ್ಯ ಹಾಳಾಗದಂತೆ ಎಚ್ಚರ ವಹಿಸುವಂತೆ, ಪ್ರವಾಸಿಗರಿಗೆ ಪೂರಕ ವಾತಾವರಣ ನಿರ್ಮಿಸುವಂತೆ ತಿಳಿಸಿದರು.
ಮಲ್ಪೆ ಬೀಚ್ನಲ್ಲಿರುವಎಲ್ಲಾ ಅಂಗಡಿಗಳಿಗೆ ಪ್ರತ್ಯೇಕ ನಂಬರ್ ನೀಡುವಂತೆ ಸೂಚಿಸಿದ ಸಚಿವರು, ಬೀಚ್ ಅಭಿವೃದ್ದಿ ಸಮಿತಿ ಕಚೇರಿ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತರಿಗೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ನಗರಸಭೆ ಆಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ಇತರರು ಉಪಸ್ಥಿತರಿದ್ದರು.







