ಮದ್ದೂರು: ಬೋನಿಗೆ ಬಿದ್ದ ಚಿರತೆ

ಮದ್ದೂರು, ಜ.25: ತಾಲೂಕಿನ ಯರಗನಹಳ್ಳಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಬುಧವಾರ ತಡರಾತ್ರಿ ಬಿದ್ದಿದೆ.
ಗ್ರಾಮದ ಶಿಂಷಾನದಿಯ ತಟದಲ್ಲಿರುವ ಜಮೀನಿನಲ್ಲಿ ಬೋನನ್ನು ಇಡಲಾಗಿತ್ತು. ಬೋನಿನಲ್ಲಿಟ್ಡಿದ್ದ ಮಾಂಸವನ್ನು ತಿನ್ನಲು ಬಂದ ವೇಳೆ ಚಿರತೆ ಸೆರೆಯಾಯಿತು. 15 ದಿನಳಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಕುರಿ, ಮೇಕೆಗಳನ್ನು ತಿಂದು ಹಾಕಿದ್ದ ಚಿರತೆಯನ್ನು ನೋಡಿದ್ದ ಗ್ರಾಮಸ್ಥರು ಚಿರತೆ ಹಿಡಿಯಲು ಒತ್ತಾಯಿಸಿ ಬುಧವಾರ ಗ್ರಾಮದ ಬಳಿ ರಸ್ತೆ ತಡೆ ನಡೆಸಿದ್ದರು.
ಸೆರೆ ಸಿಕ್ಕಿರುವ ಚಿರತೆ ಸುಮಾರು ಒಂದೂವರೆ ವರ್ಷದ್ದಾಗಿದ್ದು, ಮೇಲಾಧಿಕಾರಿಗಳ ಗಮನಕ್ಕೆ ತಂದು ಬಂಡೀಪುರ ಅಥವಾ ನಾಗರಹೊಳೆ ಅಭಯಾರಣ್ಯಕ್ಕೆ ಬಿಡಲಾಗುವುದು ಎಂದು ಆರ್ಎಫ್ಓ ಶಶಿಧರ ತಿಳಿಸಿದರು.
ಈ ಪ್ರದೇಶದಲ್ಲಿ ಇನ್ನೂ ಎರಡು ಅಥವಾ ಮೂರು ಚಿರತೆಗಳಿರುವ ಬಗ್ಗೆ ಮಾಹಿತಿ ಬಂದಿದ್ದು, ಅವುಗಳನ್ನೂ ಸೆರೆಹಿಡಿಯಲಾಗುವುದು, ಗ್ರಾಮಸ್ಥರು ಆತಂಕಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
Next Story





