ಬೀಡಿ ಕಾರ್ಮಿಕರ ವಿರೋಧ ಕಟ್ಟಿಕೊಳ್ಳುವುದು ಬೇಡ: ಮುಹಮ್ಮದ್ ರಫಿ
ಜ.30:ಬೀಡಿ ಕಾರ್ಮಿಕರ ಮತ್ತು ಕಂಟ್ರಾಕ್ಟ್ದಾರರ ಜಂಟಿ ಸಮಾವೇಶ
ಮಂಗಳೂರು, ಜ.25: ಕೇಂದ್ರ ಸರಕಾರವು 2020ರೊಳಗೆ ಧೂಮಪಾನ ಮುಕ್ತ ರಾಷ್ಟ್ರವಾಗಿಸುವ ಪಣ ತೊಟ್ಟಿವೆ. ಅದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಿದೆ. ಆದರೆ ಇದರಿಂದ ದೇಶದ ಸುಮಾರು 2 ಕೋಟಿ ಬೀಡಿ ಕಾರ್ಮಿಕರು ಅತಂತ್ರರಾಗುತ್ತಿದ್ದಾರೆ. ಅವರನ್ನು ಬೀದಿ ಪಾಲು ಮಾಡುವ ಬದಲು 2030 ಅಥವಾ 2040ರವರೆಗೆ ಕಾಲಾವಕಾಶ ಕೊಟ್ಟರೆ ಬೀಡಿ ಉದ್ಯಮವು ಅದಾಗಿಯೇ ನಾಶ ಹೊಂದಲಿದೆ. ಅದಕ್ಕಿಂತ ಮುನ್ನ ಬೀಡಿ ಉದ್ಯಮ ಮುಚ್ಚಿಸಿ ಬೀಡಿ ಕಾರ್ಮಿಕರ ವಿರೋಧ ಕಟ್ಟಿಕೊಳ್ಳುವುದು ಬೇಡ ಎಂದು ಸೌತ್ ಕೆನರಾ ಉಡುಪಿ ಜಿಲ್ಲಾ ಬೀಡಿ ಕಂಟ್ರಾಕ್ಟ್ದಾರರ ಯೂನಿಯನ್ನ ಕಾರ್ಯಾಧ್ಯಕ್ಷ ಮುಹಮ್ಮದ್ ರಫಿ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಬೀಡಿ ಉದ್ಯಮ ನಾಶದ ಅಂಚಿನಲ್ಲಿವೆ. ಅದಕ್ಕೆ ಪರ್ಯಾಯ ಉದ್ಯಮ ಸ್ಥಾಪಿಸುವುದು ಅಷ್ಟು ಸುಲಭದ ಕೆಲಸವೂಲ್ಲ. ಯುವ ಜನಾಂಗ ಧೂಮಪಾನದಿಂದ ದೂರ ಸರಿಯುತ್ತಿದೆ. ಗಾಂಜಾ, ಡ್ರಗ್ಸ್ ಜಾಲಕ್ಕೆ ಬಲಿಯಾಗುತ್ತಿದೆ. ಈ ಮಧ್ಯೆ ಸರಕಾರ ಕೊಟ್ಪಾ, ಜಿಎಸ್ಟಿ ಜಾರಿಗೊಳಿಸುವ ಮೂಲಕ ಬೀಡಿ ಉದ್ಯಮಕ್ಕೆ ಹೊಡೆತ ನೀಡಿದೆ. ನಿರುದ್ಯೋಗ ಭೀತಿ ಕಾಡಿದೆ. ಪೊಲೀಸ್ ಸಹಿತ ವಿವಿಧ ಇಲಾಖೆಗಳು ಅಂಗಡಿಗಳಲ್ಲಿ ಸಾರ್ವಜನಿಕವಾಗಿ ಬೀಡಿ ಮಾರಾಟ ಮಾಡಲಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಧೂಮಪಾನಿಗಳು ಕೂಡ ಕದ್ದುಮುಚ್ಚಿ ಬೀಡಿ ಸೇದುವಂತಹ ವಾತಾವರಣ ಸೃಷ್ಟಿಯಾಗಿದೆ. ಇದರಿಂದ ಭಾರೀ ಪರಿಣಾಮ ಎದುರಿಸಬೇಕಾದೀತು ಎಂದು ಮುಹಮ್ಮದ್ ರಫಿ ಹೇಳಿದರು.
ಜಿಲ್ಲೆಯಲ್ಲಿ ಸುಮಾರು 10 ಬೀಡಿ ಉದ್ಯಮ ಕಂಪೆನಿಗಳಿವೆ, 1 ಸಾವಿರಕ್ಕೂ ಅಧಿಕ ಗುತ್ತಿಗೆದಾರರಿದ್ದಾರೆ, 2.50ಲಕ್ಷಕ್ಕೂ ಅಧಿಕ ಬೀಡಿ ಕಾರ್ಮಿಕರಿದ್ದಾರೆ. ಬೀಡಿ ಉದ್ಯಮವನ್ನು ಜಿಎಸ್ಡಿ ಹೊಡೆತ, ಕೊಟ್ಪಾ ಕಾಯ್ದೆಯಿಂದ ಪಾರು ಮಾಡದಿದ್ದರೆ ಭವಿಷ್ಯದಲ್ಲಿ ಈ ಎಲ್ಲ ಕಾರ್ಮಿಕರ ಬದುಕು ಶೋಚನೀಯವಾಗಲಿದೆ. ಹಾಗಾಗಿ ಕೇಂದ್ರ ಮತ್ತು ರಾಜ್ಯವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು, ರಾಜಕಾರಣಿಗಳು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಮುಹಮ್ಮದ್ ರಫಿ ಹೇಳಿದರು.
ಜ.30ರಂದು ಸಮಾವೇಶ: ಸೌತ್ ಕೆನರಾ ಉಡುಪಿ ಜಿಲ್ಲಾ ಬೀಡಿ ಕಂಟ್ರಾಕ್ಟ್ದಾರರ ಯೂನಿಯನ್ನ ಸಮಾವೇಶವು ಜ.30ರಂದು ನಗರದ ಪುರಭವನದಲ್ಲಿ ನಡೆಯಲಿದೆ. ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಆಹಾರ ಸಚಿವ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ವಿಪಕ್ಷ ನಾಯಕ ಐವನ್ ಡಿಸೋಜ, ಶಾಸಕ ಬಿ.ಎ.ಮೊಯ್ದಿನ್ ಬಾವಾ, ಮೇಯರ್ ಕವಿತಾ ಸನಿಲ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಯೂನಿಯನ್ನ ಗೌರವಾಧ್ಯಕ್ಷ ಎಂ. ಸುರೇಶ್ಚಂದ್ರ ಶೆಟ್ಟಿ, ಅಧ್ಯಕ್ಷ ಹರೀಶ್ ಕೆ.ಎಸ್., ಪ್ರಧಾನ ಕಾರ್ಯದರ್ಶಿ ಕಿರಣ್ ಸುವರ್ಣ, ಸಲಹೆಗಾರ ದೇಜಪ್ಪ ಪೂಜಾರಿ, ಪ್ರಧಾನ ಸಂಘಟನಾ ಕಾರ್ಯದರ್ಶಿ ಅಸ್ಗರ್ ಅಲಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಭಾಸ್ಕರ ಕೆ.ಎಲ್. ತಲಪಾಡಿ, ಯು.ಎಚ್.ಅಬ್ದುಲ್ಲಾ ಉಳ್ಳಾಲ ಉಪಸ್ಥಿತರಿದ್ದರು.







