ವಿದ್ಯಾರ್ಥಿನಿ ಸಾವು ಖಂಡಿಸಿ ಎಸ್ಡಿಪಿಐ-ಪಿಐಎಫ್ಐ ಪ್ರತಿಭಟನೆ
ಜಿಲ್ಲಾಡಳಿತದಿಂದ 7.5 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರು, ಜ.25: ಕೆ.ಆರ್.ಪೇಟೆಯ ಅಲ್ಪಸಂಖ್ಯಾತ ಮಾದರಿ ವಸತಿ ಪ್ರೌಢಶಾಲೆಯಲ್ಲಿ ಶಿಕ್ಷಕನೊಬ್ಬರಿಂದ ಕಿರುಕುಳಕ್ಕೆ ಒಳಗಾಗಿ ಸಾವನ್ನಪ್ಪಿರುವ ವಿದ್ಯಾರ್ಥಿನಿ ಝೈಬುನ್ನಿಸಾ ಘಟನೆಯನ್ನು ಖಂಡಿಸಿ ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಗಾರದ ಮುಂದೆ ಎಸ್ಡಿಪಿಐ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿನಿ ಸಾವಿಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು, ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು. ಅಲ್ಲಿಯವರೆಗೆ ಮೃತ ವಿದ್ಯಾರ್ಥಿನಿಯ ಶವವನ್ನು ಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಈ ವೇಳೆ ಆಗ್ರಹಿಸಿದರು.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ಅಲ್ಪಸಂಖ್ಯಾತ ಮಾದರಿ ವಸತಿ ಶಾಲೆಯಲ್ಲಿ ಬುಧವಾರ ಇಂಗ್ಲೀಷ್ ಶಿಕ್ಷಕ ರವಿ ಎಂಬಾತನಿಂದ ಮೂರು ತಿಂಗಳು ಮಾನಸಿಕ ಮತ್ತು ದೈಹಿಕ ಚಿತ್ರ ಹಿಂಸೆ ಅನುಭವಿಸಿ ಝೈಬುನ್ನಿಸಾ ಜ.24ರ ಸಂಜೆ ನಿಗೂಢವಾಗಿ ಸಾವನ್ನಪ್ಪಿರುವ ಘಟನೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು, ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಕಾರ್ಯಕರ್ತರು ಸೇರಿದಂತೆ ಮೃತ ವಿದ್ಯಾರ್ಥಿನಿಯ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದರು.
ಶಿಕ್ಷಕನ ಚಿತ್ರಹಿಂಸೆಯನ್ನು ಈ ಮೊದಲೇ ವಿದ್ಯಾರ್ಥಿನಿ ವಸತಿ ಶಾಲೆಯ ಸಿಬ್ಬಂದಿಯೊಂದಿಗೆ ಹೇಳಿಕೊಂಡಿದ್ದು, ಈ ಸಂದರ್ಭ ಯಾರೊಂದಿಗೂ ಈ ಬಗ್ಗೆ ದೂರು ಕೊಡದಂತೆ ಮತ್ತು ದೂರು ನೀಡಿದಲ್ಲಿ ಶಾಲೆಗೆ ಧಕ್ಕೆ ಬರುತ್ತದೆ ಎಂದು ವಿದ್ಯಾರ್ಥಿನಿಗೆ ಹೇಳಿದ್ದರು. ಆದರೂ ವಿದ್ಯಾರ್ಥಿಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲದಿರುವುದು ಖಂಡನೀಯ ಎಂದರು.
ಇದೇ ವೇಳೆ ಪ್ರತಿಭಟನಾಕಾರರ ಮನವೊಲಿಸಲು ಮಂಡ್ಯ ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಪೊಲೀಸರು ಹರಸಾಹಸ ಪಟ್ಟರು. ಕೊನೆಗೆ ಸಂಜೆ ವೇಳೆಗೆ ಮಂಡ್ಯ ಎಸಿ ಮೃತ ಕುಟುಂಬಕ್ಕೆ 7.5 ಲಕ್ಷ ಪರಿಹಾರ ನೀಡುವುದಾಗಿ ಹೇಳಿದ ಅವರು, ವಿದ್ಯಾರ್ಥಿನಿ ಸಾವಿಗೆ ಕಾರಣರಾದವರ ಮೇಲೆ ಕ್ರಮ ಜರಗಿಸುವ ಭರವಸೆ ನೀಡಿದ ಮೇಲೆ ಮೃತ ವಿದ್ಯಾರ್ಥಿಯ ಶವವನ್ನು ಮೃತರ ಪೋಷಕರು ವಶಕ್ಕೆ ಪಡೆದರು.
ಪ್ರತಿಭಟನೆಯಲ್ಲಿ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ಜಿಲ್ಲಾಧ್ಯಕ್ಷ ಕೌಸರ್ ಬೇಗ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಅಝಂ ಪಾಷ, ತಬ್ರೇಝ್ ಸೇಟ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.