ಬಂಟ್ವಾಳ: ಅಭಿವೃದ್ಧಿ ಬಿಂಬಿಸುವ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಸಚಿವ ರೈ
.jpg)
ಬಂಟ್ವಾಳ, ಜ. 25: ಕಳೆದ ನಾಲ್ಕುವರೆ ವರ್ಷದಲ್ಲಿ ಬಂಟ್ವಾಳ ಕ್ಷೇತ್ರದ ಅಭಿವೃದ್ಧಿಗೆಂದು ತನ್ನ ಶಾಸಕತ್ವದ ಅವಧಿಯಲ್ಲಿ ವಿವಿಧ ಮೂಲಗಳಿಂದ ಒದಗಿಸಲಾದ 1 ಸಾವಿರ ಕೋಟಿ ರೂ.ವಿನ ಯೋಜನೆ ಅನುಷ್ಠಾನಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳ ಪ್ರವಾಸಿ ಬಂಗ್ಲೆಯಲ್ಲಿ ಗುರುವಾರ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಪಯಣ, ಕ್ಷೇತ್ರದ ಅಭಿವೃದ್ಧಿಗೆ ದೂರದೃಷ್ಟಿಯ ಯೋಜನೆಗಳನ್ನು ಬಿಂಬಿಸುವ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಕ್ಷೇತ್ರದಲ್ಲಿ ಹಲವು ಅಭೂತಪೂರ್ವವಾಗಿ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಂಡಿದ್ದರೆ, ಇನ್ನು ಕೆಲವು ಪ್ರಗತಿಯಲ್ಲಿದೆ ಎಂದು ಹೇಳಿದರು.
ಇದೇ ಸಂದರ್ಭ ತನ್ನ ವಿರೋಧಿಗಳಿಗೆ ತಿರುಗೇಟು ನೀಡಿದ ಸಚಿವ ರೈ, ಇದೇ ಸಂದರ್ಭ ತನ್ನ ವಿರೋಧಿಗಳಿಗೆ ತಿರುಗೇಟು ನೀಡಿದ ಸಚಿವ ರೈ, ಚುನಾವಣಾ ಸಂದರ್ಭದಲ್ಲಿ ಟೀಕೆ-ಟಿಪ್ಪಣಿ ಮಾಡುವ ವಿರೋಧಿಗಳಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡದ್ದೇ ನನ್ನ ಉತ್ತರವಾಗಿರುತ್ತದೆ ಎಂದ ಅವರು, ತಾನ್ನ ತನ್ನ ಮೊಬೈಲ್ನಲ್ಲಿ ಫೇಸ್ಬುಕ್, ವಾಟ್ಸ್ಆಪ್ ಖಾತೆ ಹೊಂದಿಲ್ಲ. ನನ್ನ ಫೇಸ್ಬುಕ್, ವಾಟ್ಸ್ಆಪ್ಗಳೆಲ್ಲವೂ ತನ್ನ ಕಾರ್ಯಕರ್ತರೇ ಆಗಿದ್ದಾರೆ. ತನು ಮತೀಯ ಸಾಮರಸ್ಯಕ್ಕೆ ಕೆಲಸ ಮಾಡಿದವನು. ನನ್ನನ್ನು ನ್ಯೂಕ್ಲಿಯರ್ ಬಾಂಬ್ ಎನ್ನುವವರನ್ನು ದೇವರು ನೋಡಿಕೊಳ್ಳುತ್ತಾರೆ ಎಂದರು.
ಕ್ಷೇತ್ರ ವ್ಯಾಪ್ತಿಯ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ನದಿಯಿಂದ ನೀರೆತ್ತಿ ಶುದ್ಧೀಕರಿಸಿ ನೀಡುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಸುಮಾರು 125 ಕೋಟಿ ರೂ ವೆಚ್ಚದಲ್ಲಿ 5 ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅಲ್ಲದೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ಟಾಸ್ಕ್ಪೋರ್ಸ್ ಮೂಲಕ 2.05 ಕೋಟಿ ರೂ ವೆಚ್ಚದಲ್ಲಿ 239 ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಪುರಸಭೆಯ 2ನೇ ಹಂತದ ಒಳಚರಂಡಿ ಯೋಜನೆ ಮಂಜೂರಾಗಿದ್ದು ರೂ.56 ಕೋಟಿ 54 ಲಕ್ಷ ಅನುದಾನ ನಿಗದಿಪಡಿಸಲಾಗಿದೆ ಎಂದರು.
5 ಕೋಟಿ ರೂ. ವೆಚ್ಚದಲ್ಲಿ ಪಂಜೆಮಂಗೇಶರಾಯ ಭವನ ನಿರ್ಮಾಣಕ್ಕೆ ಶೀಘ್ರದಲ್ಲೇ ಚಾಲನೆ ದೊರಕಲಿದ್ದು, ಬೆಂಜನಪದವಿನಲ್ಲಿ ತಾಲೂಕು ಕ್ರೀಡಾಂಗಣದ ಕಾಮಗಾರಿ ಆರಂಭವಾಗಲಿದೆ. ಸಿಆರ್ಎಫ್ ಯೋಜನೆಯಲ್ಲಿಯೂ ತಾಲೂಕಿನಲ್ಲಿ ಅತೀ ಹೆಚ್ಚು ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದ ಅವರು, ನಮ್ಮ ಗ್ರಾಮ ನಮ್ಮ ರಸ್ತೆ ಮೂಲಕವೂ ಅನೇಕ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ ಎಂದರು.
ರಸ್ತೆ ದುರಸ್ತಿಗೆ ವಿಶೇಷ ಆಸ್ಥೆ ವಹಿಸಲಾಗಿದ್ದು, ಜಿಲ್ಲಾ ಪಂಚಾಯತ್ ರಸ್ತೆಗಳನ್ನು ಒನ್ಟೈಮ್ ಡೆವಲಪ್ಮೆಂಟ್ ಯೋಜನೆಯಲ್ಲಿ ಲೋಕೋಪಯೋಗಿ ಇಲಾಖೆಯ ಮೂಲಕ ಅಬಿವೃದ್ಧಿಗೊಳಿಸಲಾಗಿದೆ. ಪಶ್ಚಿಮವಾಹಿನಿ ಯೋಜನೆಗೆ 100ಕೋಟಿ ಪ್ರಸ್ತಾವನೆ ಸಲ್ಲಿಸಿದ್ದು, ಹೆಚ್ಚುವರಿಯಾಗಿ 200 ಕೋಟಿ ಅನುದಾನ ಮಂಜೂರಾತಿ ದೊರಕಿದ್ದು, 100 ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿದೆ ಎಂದ ಅವರು, 94ಸಿ ಮತ್ತು 94ಸಿಸಿ ಮೂಲಕ ಬಂಟ್ವಾಳ ತಾಲೂಕಿನಲ್ಲಿ 20 ಸಾವಿರ ಕುಟುಂಬಗಳಿಗೆ ಹಕ್ಕು ಪತ್ರ ನೀಡಲಾಗಿದೆ. ರಾಜ್ಯದಲ್ಲೇ ಅತಿ ಹೆಚ್ಚು ಹಕ್ಕು ಪತ್ರ ವಿತರಣೆಯಾದ ತಾಲೂಕು ಬಂಟ್ವಾಳ ಎಂದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ.ಪದ್ಮಶೇಖರ ಜೈನ್, ಮಂಜುಳಾ ಮಾವೆ, ಎಂ.ಎಸ್.ಮಹಮ್ಮದ್ ಬಂಟ್ವಾಳ ಪುರಸಭೆ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಉಪಾದ್ಯಕ್ಷ ಮಹಮ್ಮದ್ ನಂದರಬೆಟ್ಟು, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ತಾಪಂ ಸದಸ್ಯ ಸಂಜೀವ ಪೂಜಾರಿ, ಮಲ್ಲಿಕಾ ಶೆಟ್ಟಿ, ಗೇರು ಅಭಿವೃದ್ಧಿ ನಿಗಮ ಸದಸ್ಯ ಜಗದೀಶ ಕೊಯ್ಲ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್ಮಾನ್, ಪ್ರಮುಖರಾದ ವೆಂಕಪ್ಪ ಪೂಜಾರಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಾಸು ಪೂಜಾರಿ, ಜಯಂತಿ ಪೂಜಾರಿ, ಜನಾರ್ದನ ಚಂಡ್ತಿಮಾರ್ ಮೊದಲಾದವರು ಉಪಸ್ಥಿತರಿದ್ದರು.







