ಚಿಕ್ಕಮಗಳೂರು: ‘ತ್ರಿವರ್ಣ ನಡಿಗೆ’ ಸಂವಿಧಾನ ರಕ್ಷಿಸಿ ದೇಶ ಉಳಿಸಿ ಅಭಿಯಾನ
![ಚಿಕ್ಕಮಗಳೂರು: ‘ತ್ರಿವರ್ಣ ನಡಿಗೆ’ ಸಂವಿಧಾನ ರಕ್ಷಿಸಿ ದೇಶ ಉಳಿಸಿ ಅಭಿಯಾನ ಚಿಕ್ಕಮಗಳೂರು: ‘ತ್ರಿವರ್ಣ ನಡಿಗೆ’ ಸಂವಿಧಾನ ರಕ್ಷಿಸಿ ದೇಶ ಉಳಿಸಿ ಅಭಿಯಾನ](/images/placeholder.jpg)
ಚಿಕ್ಕಮಗಳೂರು, ಜ.26: ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ “ತ್ರಿವರ್ಣ ನಡಿಗೆ ” ಸಂವಿಧಾನ ರಕ್ಷಿಸಿ ದೇಶ ಉಳಿಸಿ ಅಭಿಯಾನ ನಡೆಸಿದರು.
ತಾಲೂಕು ಕಛೇರಿ ಆವರಣದಿಂದ 600 ಅಡಿಯಷ್ಟು ಉದ್ದದ ತ್ರಿವರ್ಣ ಧ್ವಜದೊಂದಿಗೆ ಪಾದಯಾತ್ರೆ ನಡೆಸಿದ ಕಾರ್ಯಕರ್ತರು ಮಹಾತ್ಮ ಗಾಂಧಿ ಪಾರ್ಕ್ಗೆ ತೆರಳಿ ರಾಷ್ಟ್ರಪಿತನ ಪುತ್ಥಳಿ ಎದುರು ಸಂವಿಧಾನ ರಕ್ಷಿಸುವ ಕುರಿತು ಪ್ರಮಾಣ ವಚನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್.ವಿಜಯ್ ಕುಮಾರ್ ಮಾತನಾಡಿ, ಎಲ್ಲರಿಗೂ ಸಮಪಾಲು, ಸಮಬಾಳು ಸಂವಿಧಾನದ ಆಶಯವಾಗಿದ್ದರೂ ಅದಕ್ಕೆ ತದ್ವಿರುದ್ದವಾದ ಬೆಳವಣಿಗೆಗಳು ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಹೆಚ್ಚುತ್ತಿದ್ದು, ಇದರಿಂದಾಗಿ ಭಾವೈಕ್ಯತೆಗೆ ಧಕ್ಕೆಯುಂಟಾಗಿದೆ ಎಂದು ವಿಷಾದಿಸಿದರು.
ಯುವ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ವಿ.ತ್ರಿಭುವನ್ ಗೌಡ ಮಾತನಾಡಿ, ಸಂಘ ಪರಿವಾರದ ಮುಖಂಡರು ಸಂವಿಧಾನದ ಕಗ್ಗೊಲೆಗೆ ಮುಂದಾಗಿರುವುದು ದುರಂತ. ಸಂವಿಧಾನ ವಿರೋಧಿ ಚಟುವಟಿಕೆಗಳು ಸಂಘ ಪರಿವಾರದಿಂದ ದೇಶದಲ್ಲಿ ಪ್ರತಿದಿನ ನಡೆಯುತ್ತಿದ್ದು, ಅದನ್ನು ಸಮರ್ಥವಾಗಿ ತಡೆಗಟ್ಟುವ ಮೂಲಕ ಯುವಜನತೆ ಸಂವಿಧಾನವನ್ನು ರಕ್ಷಿಸಬೇಕು. ಸೌಹಾರ್ದತೆಯನ್ನು ಉಳಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಕೆ.ವಿ.ಶಿವಕುಮಾರ್ ಮಾತನಾಡಿ ಸಂವಿಧಾನವನ್ನು ತಿದ್ದುಪಡಿ ಅಥವಾ ಬದಲಾಯಿಸುವುದು ಅಕ್ಷಮ್ಯ ಅಪರಾಧವಾಗಿದ್ದು, ಇದರಿಂದ ದೇಶದಲ್ಲಿ ಅರಾಜಕತೆವುಂಟಾಗುತ್ತದೆ ಎಂದು ಎಚ್ಚರಿಸಿದರು.
ಪಕ್ಷದ ಮುಖಂಡರಾದ ಸಚ್ಚಿನ್ ಮೀಗಾ, ಸವಿತಾ ರಮೇಶ್, ನಾಗರತ್ನ, ಸಚ್ಚಿನ್ ಸಿಂಗ್, ಹೊನ್ನೇಶ್, ಸಮೀರ್, ಜೋಹರ್, ಸಿ.ಸಿ.ಮಧು, ಜೆ.ವಿನಾಯಕ, ರಾಹಿಲ್ ಷರೀಫ್, ರೂಬಿನ್ ಮೋಸೆಸ್, ಮಂಜೇಗೌಡ, ಕಾರ್ತಿಕ್ ಚೆಟ್ಟಿಯಾರ್, ಹಿರೇಮಗಳೂರು ರಾಮಚಂದ್ರ, ಹರ್ಷ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.