ಹನೂರು: ವಿವಿಧೆಡೆ 69ನೇ ಗಣರಾಜ್ಯೋತ್ಸವ ಆಚರಣೆ
ಹನೂರು,ಜ.26: 69ನೇ ಗಣರಾಜ್ಯೋತ್ಸವವನ್ನು ತಾಲೂಕಿನ ವಿವಿಧೆಡೆಗಳಲ್ಲಿ ಧ್ವಜಾರೋಹಣ ನೆರವೇರಿಸಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಚರಣೆ ಮಾಡಲಾಯಿತು.
ಹನೂರು ಪಟ್ಟಣ ಪಂಚಾಯತ್ ನಲ್ಲಿ ಪ.ಪಂ ಅಧ್ಯಕ್ಷೆ ಮಮತಾ ಮಹಾದೇವು ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಮಾತನಾಡಿದ ಮಮತಾ ಮಾಹದೇವು,ಪ್ರತಿಯೊಬ್ಬರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಅರಿತು ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಮತ್ತು ದೇಶಕ್ಕಾಗಿ ದುಡಿದ ಹಲವಾರು ಮಹಾಪುರುಷರನ್ನು ನೆನಪಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ.ಪಂ ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ಬಾಲರಾಜ್ನಾಯ್ಡು, ನಾಗಣ್ಣ, ಕಿರಿಯ ಅಭಿಯಂತರ ಶಿವಶಂಕರ್ಆರಾಧ್ಯ, ನಂಜುಂಡಶೆಟ್ಟಿ, ಸಿಬ್ಬಂದಿ ಹಾಜರಿದ್ದರು.
ರಾಮಾಪುರ: ಕ್ಷೇತ್ರ ವ್ಯಾಪ್ತಿಯ ರಾಮಾಪುರ ಸರ್ಕಾರಿ ಮಾದರಿ ಶಾಲೆಯಲ್ಲಿ ಏರ್ಪಡಿಸಿದ್ದ ಗಣರಾಜ್ಯೋತ್ಸವದಲ್ಲಿ ಗ್ರಾ.ಪಂ ಅಧ್ಯಕ್ಷೆ ನಲ್ಲಮ್ಮ ಧ್ವಜಾರೋಹಣ ನೆರವೇರಿಸಿದರು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ, ಬೀದಿ ಬದಿ ನಾಟಕವನ್ನು ಮಾಡಿದರು. ಶಿಕ್ಷಕರು ಸಂವಿಧಾನ ಮತ್ತು ಅಂಬೇಡ್ಕರ್ ಅವರ ಸಾಧನೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು.