ದಿಲ್ಲಿಗೆ ಮುಶ್ತಾಕ್ ಅಲಿ ಟ್ರೋಫಿ
ಕೋಲ್ಕತಾ, ಜ.26: ಉನ್ಮುಕ್ತ್ ಚಂದ್ ಅರ್ಧಶತಕ(53) ಹಾಗೂ ಪ್ರದೀಪ್ ಸಾಂಗ್ವಾನ್(2-14) ನೇತೃತ್ವದ ಬೌಲರ್ಗಳ ಸಾಂಘಿಕ ಪ್ರಯತ್ನದ ಫಲವಾಗಿ ದಿಲ್ಲಿ ತಂಡ ರಾಜಸ್ಥಾನ ತಂಡವನ್ನು ಮಣಿಸಿ ಸೈಯದ್ ಮುಶ್ತಾಕ್ ಅಲಿ ಟ್ವೆಂಟಿ-20 ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ಡಿಸೆಂಬರ್ನಲ್ಲಿ ವಿದರ್ಭ ವಿರುದ್ಧ ಸೋಲುವ ಮೂಲಕ ರಣಜಿ ಟ್ರೋಫಿ ಗೆಲ್ಲುವುದರಿಂದ ವಂಚಿತವಾಗಿದ್ದ ದಿಲ್ಲಿ ತಂಡ ಮೊದಲ ಬಾರಿ ಸೈಯದ್ ಮುಶ್ತಾಕ್ ಅಲಿ ಟ್ವೆಂಟಿ-20 ಟ್ರೋಫಿ ಜಯಿಸಲು ಯಶಸ್ವಿಯಾಗಿದೆ.
ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಿಲ್ಲಿ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 153 ರನ್ ಗಳಿಸಿದೆ. ಗೆಲ್ಲಲು ಸವಾಲಿನ ಮೊತ್ತ ಪಡೆದ ರಾಜಸ್ಥಾನ ತಂಡ ಪ್ರದೀಪ್(2-14), ಕುಲ್ವಂತ್(2-24) ಹಾಗೂ ಪವನ್ ನೇಗಿ(2-21) ದಾಳಿಗೆ ತತ್ತರಿಸಿ 19.1 ಓವರ್ಗಳಲ್ಲಿ 112 ರನ್ಗೆ ಆಲೌಟಾಯಿತು.
ರಾಜಸ್ಥಾನ ಪರ ಆದಿತ್ಯ(52) ಮಾತ್ರ ಏಕಾಂಗಿ ಹೋರಾಟ ನೀಡಿದರು. ಉಳಿದವರು ವಿಫಲರಾದರು. ಪ್ರದೀಪ್ ಸಾಂಗ್ವಾನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ದಿಲ್ಲಿ ತಂಡಕ್ಕೆ ಗೌತಮ್ ಗಂಭೀರ್(27) ಹಾಗೂ ರಿಷಬ್ ಪಂತ್(13)ಮೊದಲ ವಿಕೆಟ್ಗೆ 41 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಉನ್ಮುಕ್ತ್ ಚಂದ್ ಅರ್ಧಶತಕ(53, 49 ಎಸೆತ, 4 ಬೌಂಡರಿ, 2 ಸಿಕ್ಸರ್)ಕೊಡುಗೆ ನೀಡಿದರು. ಧ್ರುವ್ 21 ರನ್ ಗಳಿಸಿದರು.